- Home
- Sports
- Cricket
- 16 ವರ್ಷ ಬಳಿಕ ಭಾರತಕ್ಕೆ ಮರಳುತ್ತಿದ್ದಾರೆ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ, ಆರಂಭವಾಗುತ್ತಾ ಹೊಸ ಲೀಗ್?
16 ವರ್ಷ ಬಳಿಕ ಭಾರತಕ್ಕೆ ಮರಳುತ್ತಿದ್ದಾರೆ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ, ಆರಂಭವಾಗುತ್ತಾ ಹೊಸ ಲೀಗ್?
ಐಪಿಎಲ್ ಆರಂಭಿಸಿದ ಮೂರನೇ ವರ್ಷಕ್ಕೆ ದೇಶ ತೊರೆದ ಕ್ರಿಕೆಟ್ ಲೀಗ್ ಸಂಸ್ಥಾಪಕ ಲಲಿತ್ ಮೋದಿ ಇದೀಗ ಭಾರತಕ್ಕೆ ಮರಳುತ್ತಿದ್ದಾರೆ. ಇಂಡಿಯಾ ರಿಟರ್ನ್ ಖಚಿತಪಡಿಸಿರುವ ಲಲಿತ್ ಮೋದಿ, ಐಪಿಎಲ್ಗೆ ಪ್ರತಿಯಾಗಿ ಹೊಸ ಲೀಗ್ ಆರಂಭಿಸುತ್ತಾರ?

ಭಾರತಕ್ಕೆ ರಿಟರ್ನ್ ಖಚಿತಪಡಿಸಿದ ಲಲಿತ್ ಮೋದಿ
ಐಪಿಎಲ್ ಟೂರ್ನಿ ವಿಶ್ವದ ಅತೀ ಶ್ರೀಮಂತ ಹಾಗೂ ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್. ಬಹುತೇಕ ಕ್ರಿಕೆಟ್ ದೇಶಗಳು ತಮ್ಮದೇ ಆದ ಲೀಗ್ ಟೂರ್ನಿ ನಡೆಸುತ್ತಿದೆ. ಆದರೆ ಯಾವುದೂ ಕೂಡ ಐಪಿಎಲ್ ಹತ್ತಿರಕ್ಕೂ ಸುಳಿದಿಲ್ಲ. ಬಹುತೇಕ ಲೀಗ್ ಟೂರ್ನಿಗಳು ಐಪಿಎಲ್ ಟೂರ್ನಿಯ ಒಂದು ಫ್ರಾಂಚೈಸಿ ತಂಡ ಖರ್ಚು ಮಾಡುವ ಹಣದಲ್ಲಿ ಇಡೀ ಟೂರ್ನಿ ನಡೆಯುತ್ತದೆ. ಅಷ್ಟರಮಟ್ಟಿಗೆ ಐಪಿಎಲ್ ಜನಪ್ರಿಯತೆ, ಮೌಲ್ಯ ಪಡೆದುಕೊಂಡಿದೆ. ಈ ಐಪಿಎಲ್ ಟೂರ್ನಿ ಆರಂಭಿಸಿದ ಲಲಿತ್ ಮೋದಿ 16 ವರ್ಷ ಬಳಿಕ ಭಾರತಕ್ಕೆ ಮರಳುತ್ತಿದ್ದಾರೆ.
ಕಾನೂನು ಹೋರಾಟದಲ್ಲಿ ಲಲಿತ್ ಮೋದಿಗೆ ಗೆಲುವು
ದಕ್ಷಿಣಾ ಆಪ್ರಿಕಾದಲ್ಲಿ ಆಯೋಜಿಸಿದ ಐಪಿಎಲ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಸಂಬಂಧ ಇಡಿ ದಂಡ ವಿಧಿಸಿತ್ತು. ಜೊತೆಗೆ ಗಂಭೀರ ಆರೋಪಗಳ ಕುರಿತು ಪಟ್ಟಿ ಮಾಡಿತ್ತು. ಈ ಆರೋಪಗಳನ್ನು ಮೇಲ್ಮನವಿ ನ್ಯಾಯಾಧಿಕರಣ ರದ್ದುಗೊಳಿಸಿ ತೀರ್ಪು ನೀಡಿದೆ. ಈ ಮೂಲಕ ಲಲತ್ ಮೋದಿ ಪರವಾಗಿ ತೀರ್ಪು ಹೊರಬಂದಿದೆ. ಅತೀ ದೊಡ್ಡ ಕಾನೂನು ಹೋರಾಟದಲ್ಲಿ ಲಲಿತ್ ಮೋದಿಗೆ ಗೆಲುವು ಸಿಕ್ಕ ಕಾರಣ ಇದೀಗ ಭಾರತಕ್ಕೆ ಮರಳಲು ಸಜ್ಜಾಗಿದ್ದಾರೆ.
ಸೌತ್ ಆಫ್ರಿಕಾದಲ್ಲಿ ಐಪಿಎಲ್ ನಡೆಸಿದ ಬಳಿಕ ಭಾರತ ತೊರೆದ ಲಲಿತ್ ಮೋದಿ
2009ರ ಲೋಕಸಭಾ ಚುನಾವಣೆ ಕಾರಣ ಐಪಿಎಲ್ ಟೂರ್ನಿಯನ್ನು ಸೌತ್ ಆಫ್ರಿಕಾದಲ್ಲಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಆರೋಪಗಳು ಲಲತಿ ಮೋದಿ ವಿರುದ್ಧ ಕೇಳಿಬಂದಿತ್ತು. ಪರಿಣಾಮ 2010ರಲ್ಲಿ ಭಾರತ ತೊರೆದ ಲಲಿತ್ ಮೋದಿ ವಿರುದ್ದ ಹಲವು ಕಾನೂನು ಹೋರಾಟಗಳು, ಗಡೀಪಾರು ಹೋರಾಟಗಳು ನಡೆಯುತ್ತಲೇ ಇದೆ.
243 ಕೋಟಿ ರೂಪಾಯಿ ಅಕ್ರಮ
ಸೌತ್ ಆಫ್ರಿಕಾದಲ್ಲಿ ಐಪಿಎಲ್ ಟೂರ್ನಿ ಆಯೋಜನೆ ವೇಳೆ ಐಪಿಎಲ್ ಸಂಸ್ಥಾಪಕ, ಐಪಿಎಲ್ ಚೇರ್ಮೆನ್ ಲಲಿತ್ ಮೋದಿ ಬಿಸಿಸಿಐ ಖಾತೆಯಿಂದ 243 ಕೋಟಿ ರೂಪಾಯಿ ಹಣವನ್ನು ವಿದೇಶಕ್ಕೆ ವರ್ಗಾಯಿಸಿದ್ದರು. ಈ ಮೂಲಕ ಆರ್ಬಿಐ ಹಾಗೂ ಫೆಮಾ ಕಾಯ್ದೆ ಉಲ್ಲಂಘಿಸಿದೆ ಎಂದು ಇಡಿ ಲಲಿತ್ ಮೋದಿ ಹಾಗೂ ಬಿಸಿಸಿಐ ಪ್ರಮುಖರ ವಿರುದ್ಧ ದಂಡ ವಿಧಿಸಿತ್ತು. ಈ ಪ್ರಕರಣ ಸಂಬಂಧ ಲಲಿತ್ ಮೋದಿ ಬಂಧನ ಸಾಧ್ಯತೆ ದಟ್ಟವಾಗುತ್ತಿದ್ದಂತೆ ದೇಶ ತೊರೆದು ಲಂಡನ್ನಲ್ಲಿ ಬೀಡು ಬಿಟ್ಟಿದ್ದರು.
ತೀರ್ಪಿನ ಬೆನ್ನಲ್ಲೇ ಭಾರತಕ್ಕೆ ಮರಳುವುದಾಗಿ ಹೇಳಿದ ಲಲಿತ್ ಮೋದಿ
ಕಳೆದ 16 ವರ್ಷಗಳಿಂದ ನಿರಂತರವಾಗಿ ಕಾನೂನು ಹೋರಾಟ ಮಾಡುತ್ತಿದ್ದೇನೆ. ಈ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಐಪಿಎಲ್ ಟೂರ್ನಿಯ ಒಳಿತಾಗಿ ಕೆಲಸ ಮಾಡಿದ್ದೇನೆ. ಯಾವತ್ತೂ ಅಕ್ರಮ ಮಾಡಿಲ್ಲ. ನಾನು ಪದೇ ಪದೇ ಮಾಧ್ಯಮಗಳಿಗೆ ಹೇಳುತ್ತಾ ಬಂದಿರುವ ಮಾತು ಇದೀಗ ಸತ್ಯ ಅನ್ನೋದು ಸಾಬೀತಾಗಿದೆ. ನಾನು ಪರಾರಿ ಅಲ್ಲ, ವಂಚಕ ಅಲ್ಲ, ಪಲಾಯನವಾದಿ ಅಲ್ಲ ಎಂದು ಲಲಿತ್ ಮೋದಿ ಹೇಳಿದ್ದಾರೆ.
ಬೇರೆ ಲೀಗ್ ಆರಂಭಿಸುತ್ತಾರಾ ಲಲಿತ್ ಮೋದಿ
ಭಾರತಕ್ಕೆ ಮರಳುವಿಕೆ ಖಚಿತಪಡಿಸಿರುವ ಲಲಿತ್ ಮೋದಿ ವಿರುದ್ಧ ಇತರ ಕೆಲ ಪ್ರಕರಣಗಳಿವೆ. ಈ ಪ್ರಕರಣದ ಕಾನೂನು ಹೋರಾಟ ನಡೆಯುತ್ತಿದೆ. ಇತ್ತ ಲಲಿತ್ ಮೋದಿ ಸದ್ಯ ಬಿಸಿಸಿಐ, ಅಥವಾ ಯಾವುದೇ ರಾಜ್ಯ ಕ್ರಿಕೆಟ್ ಸಂಸ್ಥೆಯ ಸದಸ್ಯರಲ್ಲ. ಇಷ್ಟೇ ಅಲ್ಲ ಭಾರತದಲ್ಲಿ ಕ್ರಿಕೆಟ್ ಲೀಗ್ ಬಿಸಿಸಿಐ ಅಡಿಯಲ್ಲಿ ಮಾತ್ರ ಆಯೋಜಿಸಲು ಸಾಧ್ಯ. ಹೊರಗಿನ ವ್ಯಕ್ತಿಗಳಿಗೆ ಸಾಧ್ಯವಿಲ್ಲ. ಆಯೋಜಿಸಿದರೂ ಟೀಂ ಇಂಡಿಯಾ ಕ್ರಿಕೆಟಿಗರು, ವಿದೇಶಗಳ ಹಾಲಿ ಕ್ರಿಕೆಟಿಗರ ಹರಾಜು, ಸೇರ್ಪಡೆ ಸಾಧ್ಯವಿಲ್ಲ. ಹೀಗಾಗಿ ಲಲಿತ್ ಮೋದಿ ಮತ್ತೊಂದು ಲೀಗ್ ಆರಂಭಿಸಲು ಸಾಧ್ಯವಿಲ್ಲ. ಮತ್ತೆ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಮೂಲಕ ಆಡಳಿತ ಚುಕ್ಕಾಣಿ ಹಿಡಿಯುವ ಪ್ರಯತ್ನ ಮಾಡಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
