ಐಪಿಎಲ್ ಆರಂಭಕ್ಕೂ ಮುನ್ನ ಕೆಕೆಆರ್ಗೆ ಬಿಗ್ ಶಾಕ್, ಸ್ಟಾರ್ ಆಟಗಾರ ಪಾಲ್ಗೊಳ್ಳೋದು ಡೌಟ್..!
ಢಾಕಾ: ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಬಿಸಿಸಿಐ ಈಗಾಗಲೇ ಮಿಲಿಯನ್ ಡಾಲರ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್ 09ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದೆ. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ 2 ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ ಪಾಲಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
2 ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ಈಗಾಗಲೇ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಿದೆ.
ಅದೇ ರೀತಿ ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ ರನ್ನು 3.2 ಕೋಟಿ ರುಪಾಯಿ ನೀಡಿ ಕೆಕೆಆರ್ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಏಪ್ರಿಲ್ನಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಶಕೀಬ್ ಅಲ್ ಹಸನ್ ಈ ಮೊದಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದ ನಿರಪೇಕ್ಷಣಾ ಪತ್ರ(ಎನ್ಒಸಿ) ಪಡೆದಿದ್ದರು.
ಐಪಿಎಲ್ ಅವಧಿಯಲ್ಲೇ ಬಾಂಗ್ಲಾದೇಶವೂ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯಿಂದ ಹಿಂದೆ ಸರಿದು ಐಪಿಎಲ್ ಆಡಲು ಶಕೀಬ್ ಮುಂದಾಗಿದ್ದರು.
ಇತ್ತೀಚೆಗೆ ಈ ವಿಚಾರವನ್ನು ಪ್ರಸ್ತಾಪಿಸಿದ್ದ ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ)ಯ ಕ್ರಿಕೆಟ್ ಚಟುವಟಿಕೆಗಳ ಮುಖ್ಯಸ್ಥ ಅಕ್ರಂ ಖಾನ್, ‘ಶಕೀಬ್ಗೆ ಟೆಸ್ಟ್ ಆಡಲು ಇಷ್ಟವಿಲ್ಲ’ ಎಂದಿದ್ದರು
ಇದಕ್ಕೆ ಪ್ರತಿಕ್ರಿಯಿಸಿರುವ ಶಕೀಬ್, ನಾವೀಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಿಂದ ಹೊರಬಿದ್ದಾಗಿದೆ. ಆದರೆ ಕೆಲವೇ ತಿಂಗಳುಗಳಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ತೋರಬೇಕಿದ್ದರೆ, ಐಪಿಎಲ್ನಲ್ಲಿ ಆಡಿ ತಿಳಿದುಕೊಳ್ಳಬೇಕಿದೆ ಎಂದಿದ್ದರು.
ಇದೀಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಶಕೀಬ್ಗೆ ಬಿಸಿ ಮುಟ್ಟಿಸಲು ಮುಂದಾಗಿದ್ದು, ಎನ್ಒಸಿ ಹಿಂಪಡೆಯಲು ಬಿಸಿಬಿ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಈ ಸಂಬಂಧ ಅಕ್ರಂ ಖಾನ್ ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಅವರನ್ನು ಭೇಟಿ ಮಾಡಿ ಶಕೀಬ್ ಎನ್ಓಸಿ ತಡೆಹಿಡಿಯುವ ಕುರಿತಂತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಬಿಸಿಬಿ ಶಕೀಬ್ ಅಲ್ ಹಸನ್ ಅವರ ಎನ್ಓಸಿ ತಡೆ ಹಿಡಿದರೆ, ಕೋಲ್ಕತ ನೈಟ್ ರೈಡರ್ಸ್ಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.