IPL 2021: ಅಖಾಡಕ್ಕೆ ಎಬಿಡಿ ಎಂಟ್ರಿ, ಬೇಟೆಗಾರರ ಬೇಟೆಯಾಡೋ ರಣಬೇಟೆಗಾರ ಬಂದ..!
ಚೆನ್ನೈ: ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶತಾಯಗತಾಯ ಕಪ್ ಗೆದ್ದೇ ತೀರುವ ನಿರ್ಧಾರದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಅಭಿಮಾನಿಗಳು ಈ ಸಲಾನಾದ್ರೂ ಆರ್ಸಿಬಿ ಕಪ್ ಗೆಲ್ಲಲಿ ಎಂದು ಸಿಕ್ಕ ಸಿಕ್ಕ ದೇವರ ಬಳಿಯೆಲ್ಲ ಹರಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಆರ್ಸಿಬಿ ಪಾಲಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಆಪತ್ಭಾಂಧವ, ಮಿಸ್ಟರ್ 360 ಖ್ಯಾತಿಯ ವಿಸ್ಪೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿಳಿದಿದ್ದಾರೆ.
14ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.
ಉದ್ಘಾಟನಾ ಪಂದ್ಯವು ಏಪ್ರಿಲ್ 09ರಂದು ನಡೆಯಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.
ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶಿಸಿತ್ತಾದರೂ, ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ಮುಗ್ಗರಿಸುವ ಮೂಲಕ ತನ್ನ ಅಭಿಯಾನ ಅಂತ್ಯಗೊಳಿಸಿಕೊಂಡಿತ್ತು.
ಇದೀಗ ತಂಡದ ಆಪತ್ಭಾಂಧವ, ವಿಸ್ಪೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ಬಂದಿಳಿದಿದ್ದಾರೆ.
ಇದೀಗ ಎಬಿ ಡಿವಿಲಿಯರ್ಸ್ ಚೆನ್ನೈನಲ್ಲೇ ಬಬಲ್ಗೆ ಸೇರಿಕೊಂಡಿದ್ದು, 7 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಲಿದ್ದಾರೆ. ಆ ಬಳಿಕ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವ ಎಬಿಡಿ ಆಗಮನವನ್ನು ಆರ್ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅದ್ಧೂರಿಯಾಗಿಯೇ ಸ್ವಾಗತಿಸಿದ್ದಾರೆ.
ಎದುರಾಳಿ ತಂಡದ ಬೌಲರ್ಗಳ ಎದೆಯಲ್ಲಿ ನಡುಕು ಹುಟ್ಟಿಸಬಲ್ಲ ಎಬಿ ಡಿವಿಲಿಯರ್ಸ್ ಈ ಬಾರಿಯಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ ಗೆಲ್ಲುವ ಬಹುಕಾಲದ ಕನಸನ್ನು ನನಸು ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಬಾರಿಯ ಹರಾಜಿನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್, ಕಿವೀಸ್ ವೇಗಿ ಕೈಲ್ ಜೇಮಿಸನ್, ಡೇನಿಯಲ್ ಕ್ರಿಸ್ಟಿಯನ್ ಸೇರಿದಂತೆ ಸಾಕಷ್ಟು ತಜ್ಞ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಖರೀದಿಸಿದ್ದು, ಆರ್ಸಿಬಿ ಕಪ್ ಗೆಲ್ಲಲು ನೆರವಾಗಲಿದ್ದಾರೆ ಎನ್ನುವುದು ಆರ್ಸಿಬಿ ಅಸಂಖ್ಯಾತ ಅಭಿಮಾನಿಗಳ ಲೆಕ್ಕಾಚಾರವಾಗಿದೆ.