ಲಂಕಾ ತಂಡಕ್ಕೆ ಮತ್ತೊಂದು ಶಾಕ್; ಆಟಗಾರನೊಬ್ಬನಿಗೆ ಕೋವಿಡ್ ಪಾಸಿಟಿವ್..!
ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್ಗಳ ಸರಣಿಗೆ ಕೊರೋನಾ ವೈರಸ್ ಇನ್ನಿಲ್ಲದಂತೆ ಕಾಟ ಕೊಡಲಾರಂಭಿಸಿದೆ. ಈಗಾಗಲೇ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಹಾಗೂ ಟೀಂ ಅನಾಲಿಸ್ಟ್ ಜಿ.ಟಿ. ನಿರ್ಶೋನ್ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪಿಸಿಆರ್ ಟೆಸ್ಟ್ ಮೂಲಕ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಸೀಮಿತ ಓವರ್ಗಳ ಸರಣಿಯ ವೇಳಾಪಟ್ಟಿಯನ್ನು ಪರಿಷ್ಕೃತಗೊಳಿಸಿ ಪ್ರಕಟಿಸಿತ್ತು.
ಇದೆಲ್ಲದರ ನಡುವೆ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಮತ್ತೊಂದು ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಎರಡು ಬಯೋ ಬಬಲ್ಗಳ ಪೈಕಿ ಒಂದು ಬಯೋ ಬಬಲ್ನಲ್ಲಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರನಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಭಾರತ ವಿರುದ್ದ ಸೀಮಿತ ಓವರ್ಗಳ ಸರಣಿಗೆ ಸಜ್ಜಾಗುತ್ತಿದ್ದ ಅತಿಥೇಯ ಶ್ರೀಲಂಕಾ ತಂಡಕ್ಕೆ ಕೋವಿಡ್ 19 ಮತ್ತೊಂದು ಶಾಕ್ ಕೊಟ್ಟಿದೆ.
ಈಗಾಗಲೇ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಹಾಗೂ ಟೀಂ ಅನಾಲಿಸ್ಟ್ ಜಿ.ಟಿ. ನಿರ್ಶೋನ್ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿದೆ.
ಇದೀಗ Newswire.lk ವರದಿಯ ಪ್ರಕಾರ ಶ್ರೀಲಂಕಾ ಬ್ಯಾಟ್ಸ್ಮನ್ ಸಂದುನ್ ವೀರಾಕ್ಕೋಡಿಗೆ ಕೋವಿಡ್ 19 ಸೋಂಕು ತಗುಲಿದೆ ಎನ್ನಲಾಗಿದೆ.
ವೀರಾಕ್ಕೋಡಿ ಹಾಗೂ 15 ಆಟಗಾರರನ್ನೊಳಗೊಂಡ ಲಂಕಾ ತಂಡವು ಕೊಲಂಬೊದಲ್ಲೇ ಅಭ್ಯಾಸ ನಡೆಸುತ್ತಿದ್ದು, ಚಿನ್ನಮೂನ್ ಗ್ರ್ಯಾಂಡ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
Newswire.lk ವೆಬ್ಸೈಟ್ ವರದಿಯ ಪ್ರಕಾರ ವೀರಾಕ್ಕೋಡಿ ಮಾತ್ರವಲ್ಲದೇ ಭಾನುಕಾ ರಾಜಪಕ್ಸಾ ಹಾಗೂ ಇತರೆ ಆಟಗಾರರು ಶುಕ್ರವಾರ ರಾತ್ರಿ ಅಭ್ಯಾಸ ಪಂದ್ಯವನ್ನಾಡಲು ದಂಬುಲಾಗೆ ತೆರಳಿದ್ದರು ಎನ್ನಲಾಗಿದೆ.
ಇದೀಗ ಚಿನ್ನಮೂನ್ ಗ್ರ್ಯಾಂಡ್ ಹೋಟೆಲ್ನಲ್ಲಿ ತಂಗಿರುವ ಅಸೆಲಾ ಗುಣರತ್ನೆ, ಏಂಜಲೋ ಪೆರೆರಾ, ಭಾನುಕಾ ರಾಜಪಕ್ಸಾ ಸೇರಿದಂತೆ ಉಳಿದ ಆಟಗಾರರು ಹೋಟೆಲ್ನಲ್ಲೇ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ದಂಬುಲಾದಲ್ಲಿ 26 ಆಟಗಾರರು ಮತ್ತೊಂದು ಬಯೋ ಬಬಲ್ ವ್ಯವಸ್ಥೆಯೊಳಗಿದ್ದು, ಇಲ್ಲಿನ ಯಾವ ಅಟಗಾರರಿಗೂ ಕೋವಿಡ್ 19 ಸೋಂಕು ತಗುಲಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.
ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ದ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಏಕದಿನ ಸರಣಿ ಜುಲೈ 18ರಿಂದ ಆರಂಭವಾಗಲಿದೆ. ಇನ್ನು ಮೂರು ಪಂದ್ಯಗಳ ಟಿ20 ಸರಣಿಯು ಕ್ರಮವಾಗಿ ಜುಲೈ 25, 27 ಹಾಗೂ 29ರಂದು ನಡೆಯಲಿದೆ.