2019ರ ಏಕದಿನ ವಿಶ್ವಕಪ್ಗೆ ರಾಯುಡು ಆಯ್ಕೆ ಮಾಡದೇ ತಪ್ಪು ಮಾಡಿದ್ವಿ..! ತಪ್ಪೊಪ್ಪಿಕೊಂಡ ಮಾಜಿ ಆಯ್ಕೆಗಾರ..!
ನವದೆಹಲಿ: 2019ರ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿ ಒಂದು ವರ್ಷವೇ ಕಳೆದರೂ ಟೀಂ ಇಂಡಿಯಾ ಆಯ್ಕೆ ಸಮಿತಿ ಮಾಡಿದ ಒಂದು ಎಡವಟ್ಟು ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ಇಂಗ್ಲೆಂಡ್ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಂಬಟಿ ರಾಯುಡು ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಮಾಜಿ ಆಯ್ಕೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ವಿಶ್ವಕಪ್ ಟೂರ್ನಿಗೂ ಮುನ್ನ ಆದ ಮಹಾ ಪ್ರಮಾದವೊಂದನ್ನು ಆಯ್ಕೆ ಸಮಿತಿಯ ಸದಸ್ಯರೊಬ್ಬರು ಒಪ್ಪಿಕೊಂಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪರಿಸ್ಥಿತಿ ಕೈ ತಪ್ಪಿಹೋಗಿದೆ.
2019ರ ಏಕದಿನ ವಿಶ್ವಕಪ್ನ ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು.
2019ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸೆಮಿಫೈನಲ್ನಲ್ಲಿ ಮುಗ್ಗರಿಸುವ ಮೂಲಕ ತನ್ನ ಹೋರಾಟವನ್ನು ಅಂತ್ಯಗೊಳಿಸಿತ್ತು.
ಟೂರ್ನಿಯುದ್ಧದಕ್ಕೂ ಅಜೇಯ ನಾಗಾಲೋಟ ಮುಂದುವರೆಸಿದ್ದ ಟೀಂ ಇಂಡಿಯಾ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅಗ್ರಕ್ರಮಾಂಕದ ಬ್ಯಾಟ್ಸ್ಮನ್ಗಳ ದಯಾನೀಯ ಬ್ಯಾಟಿಂಗ್ ವೈಫಲ್ಯದಿಂದಾಗಿ ರೋಚಕ ಸೋಲು ಕಂಡಿತು.
ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಪರ 4ನೇ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಅಂಬಟಿ ರಾಯುಡು ಅವರನ್ನು ಕೈಬಿಟ್ಟು ವಿಶ್ವಕಪ್ ತಂಡದಲ್ಲಿ ವಿಜಯ್ ಶಂಕರ್ಗೆ ಸ್ಥಾನ ನೀಡಿತ್ತು.
ಆದರೆ ವಿಶ್ವಕಪ್ನಲ್ಲಿ 4ನೇ ಕ್ರಮಾಂಕದಲ್ಲಿ ವಿಜಯ್ ಶಂಕರ್, ದಿನೇಶ್ ಕಾರ್ತಿಕ್ ಸೇರಿದಂತೆ ಯಾವ ಆಟಗಾರರು ತಂಡದ ನಂಬಿಕೆ ಉಳಿಸಿಕೊಳ್ಳುವಂತಹ ಆಟವನ್ನು ಆಡದೇ ಹೋಗಿದ್ದು, ಮತ್ತೊಂದು ವಿಶ್ವಕಪ್ ಗೆಲ್ಲುವ ಅವಕಾಶ ಕೈ ಜಾರುವಂತೆ ಮಾಡಿತು.
ಇದೀಗ ಟೀಂ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಆಯ್ಕೆಗಾರ ದೇವಂಗ್ ಗಾಂಧಿ, ವಿಶ್ವಕಪ್ ಟೂರ್ನಿಯಲ್ಲಿ ಅಂಬಟಿ ರಾಯುಡು ಅವರನ್ನು ಆಯ್ಕೆ ಮಾಡದೇ ತಪ್ಪುಮಾಡಿದೆವು ಎನ್ನುವ ಸತ್ಯವನ್ನು ಒಪ್ಪಿಕೊಂಡಿದ್ದಾರೆ.
ಹೌದು, ಅಂಬಟಿ ರಾಯುಡು ಆಯ್ಕೆ ಮಾಡದಿರುವುದು ನಮ್ಮ ತಪ್ಪು. ಎಷ್ಟೇ ಆದರೂ ನಾವು ಮನುಷ್ಯರಲ್ಲವೇ ಎಂದು ದೇವಂಗ್ ಗಾಂಧಿ ಹೇಳಿದ್ದಾರೆ.
ವಿಶ್ವಕಪ್ಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ನಮ್ಮ ನಿರ್ಧಾರ ಸರಿ ಎನಿಸಿತ್ತು. ಆದರೆ ಅಂಬಟಿ ರಾಯುಡು ಇದ್ದಿದ್ದರೆ ಟೀಂ ಇಂಡಿಯಾಗೆ ಅನುಕೂಲವಾಗುತಿತ್ತು ಎಂದು ಕೊನೆಯಲ್ಲಿ ನಮಗೆ ಅರಿವಾಯಿತು.
ನಿಜಹೇಳಬೇಕೆಂದರೆ ಟೀಂ ಇಂಡಿಯಾ ತೋರಿದ ಒಂದು ಕೆಟ್ಟ ಪ್ರದರ್ಶನ ಅಂಬಟಿ ರಾಯುಡು ಅವರ ಅನುಪಸ್ಥಿತಿ ಎದ್ದು ಕಾಣುವಂತೆ ಮಾಡಿತು ಎಂದು ಹೇಳಿದ್ದಾರೆ.
ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ ಬೆನ್ನಲ್ಲೇ ರಾಯುಡು ಹೊರಹಾಕಿದ ಬೇಸರ ಹಾಗೂ ಅಸಮಾಧಾನ ನ್ಯಾಯಯುತವಾದದ್ದೇ ಎಂದು ಗಾಂಧಿ ಒಪ್ಪಿಕೊಂಡಿದ್ದಾರೆ.
ರಾಯುಡು ಬದಲು ವಿಜಯ್ ಶಂಕರ್ ಆಯ್ಕೆ ಮಾಡಿದ್ದಕ್ಕೆ ಸಮರ್ಥನೆ ನೀಡಿದ್ದ ಆಯ್ಕೆ ಸಮಿತಿ, ವಿಜಯ್ ಶಂಕರ್ವೊಬ್ಬ ತ್ರೀಡಿ ಆಟಗಾರನಾಗಿದ್ದು, ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ನೆರವಾಗಲಿದ್ದಾರೆ ಎಂದಿದ್ದರು.
ವಿಶ್ವಕಪ್ ತಂಡ ಪ್ರಕಟಗೊಂಡ ಬಳಿಕ ತಮ್ಮ ಹೆಸರಿಲ್ಲದಿರುವುದು ಖಚಿತ ಪಡಿಸಿಕೊಂಡ ರಾಯುಡು, ಈಗಷ್ಟೇ ಹೊಸ 3D ಸೆಟ್ ಕನ್ನಡಕದ ಸೆಟ್ವೊಂದನ್ನು ಆರ್ಡರ್ ಮಾಡಿದೆ ಎಂದು ಟ್ವೀಟ್ ಮಾಡಿದ್ದರು.