ನಿರ್ಧಾರ ಬದಲಿಸಿದ ಚೆನ್ನೈ ಸೂಪರ್ ಕಿಂಗ್ಸ್; ಸುರೇಶ್ ರೈನಾ ತಂಡಕ್ಕೆ ವಾಪಸ್!
2020ರ ಐಪಿಎಲ್ ಟೂರ್ನಿ ಆರಂಭಕ್ಕೂ ಕೆಲ ದಿನಗಳ ಮುಂಚೆ ವೈಯುಕ್ತಿಕ ಕಾರಣ ನೀಡಿ ದಿಢೀರ್ ತವರಿಗೆ ಮರಳಿದ ಸುರೇಶ್ ರೈನಾ, ಬಳಿಕ ಚುಟುಕು ಸಮರದಲ್ಲಿ ಕಾಣಿಸಿಕೊಳ್ಳಲಿಲ್ಲ. ಇತ್ತ ಚೆನ್ನೈ ಸೂಪರ್ ಕಿಂಗ್ಸ್, ಸುರೇಶ್ ರೈನಾ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಇಷ್ಟೇ ಅಲ್ಲ ಯಾವುದೇ ಕಾರಣಕ್ಕೆ ರೈನಾಗೆ ವಾಪಸ್ ಅವಕಾಶ ನೀಡುವುದಿಲ್ಲ ಎಂದಿತ್ತು. ಇದೀಗ ಸಿಎಸ್ಕೆ ತನ್ನ ನಿರ್ಧಾರ ಬದಲಿಸಿದೆ
2021ರ ಐಪಿಎಲ್ ಟೂರ್ನಿಗೆ ತಯಾರಿಗಳು ಆರಂಭಗೊಂಡ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸುರೇಶ್ ರೈನಾಗೆ ತಂಡದಲ್ಲಿ ಅವಕಾಶ ನೀಡಲು ಚೆನ್ನೈ ಸೂಪರ್ ಕಿಂಗ್ಸ್ ಮುಂದಾಗಿದೆ.
ಎಂ.ಎಸ್.ಧೋನಿ ಜೊತೆ ಟೀಂ ಇಂಡಿಯಾಗೆ ವಿದಾಯ ಹೇಳಿದ ಸುರೇಶ್ ರೈನಾ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಕಾಣಿಸಿಕೊಳ್ಳದೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ದಿಢೀರ್ ಹಿಂದೆ ಸರಿದ ಸುರೇಶ್ ರೈನಾ ತವರಿನಲ್ಲೇ ಉಳಿದುಕೊಂಡರು. ಇತ್ತ ರೈನಾ ಹಾಗೂ ಸಿಎಸ್ಕೆ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ನಂತರದ ಹೇಳಿಕೆಗಳಿಂದ ಸಾಬೀತಾಗಿತ್ತು.
2021ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂ.ಎಸ್.ಧೋನಿ ಮುನ್ನಡೆಸಲಿದ್ದಾರೆ. ಕಳೆದ ಆವೃತ್ತಿಯಿಂದ ಹೊರಗುಳಿದ ರೈನಾ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ ಅನ್ನೋ ಸೂಚನೆಯನ್ನು ಚೆನ್ನೈ ಫ್ರಾಂಚೈಸಿ ನೀಡಿದೆ.
ದುಬೈನಲ್ಲಿ 2020ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಸುರೇಶ್ ರೈನಾ ತವರಿಗೆ ವಾಪಸ್ ಆಗಿದ್ದರು. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇಷ್ಟೇ ಅಲ್ಲ ಬಳಿಕ ನಡೆದ ಟ್ವಿಟರ್ ಸಮರಗಳು ಅನುಮಾನಕ್ಕೆ ಪುಷ್ಠಿ ನೀಡಿತ್ತು.
ಸುರೇಶ್ ರೈನಾ ಇಲ್ಲದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಇಷ್ಟೇ ಅಲ್ಲ ಇದೇ ಮೊದಲ ಬಾರಿಗೆ ಲೀಗ್ ಹಂತದಿಂದಲೇ ಹೊರಬಿದ್ದು ನಿರಾಸೆ ಅನುಭವಿಸಿತ್ತು.
ಸುರೇಶ್ ರೈನಾ ಸಿಎಸ್ಕೆ ತಂಡ ಸೇರಿಕೊಂಡರೆ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗಲಿದೆ. ಇಷ್ಟೇ ಅಲ್ಲ ತಂಡದ ಆಟಗಾರರ ಉತ್ಸಾಹ ಇಮ್ಮಡಿಯಾಗಲಿದೆ.
ಸುರೇಶ್ ರೈನಾ ತಂಡಕ್ಕೆ ವಾಪಸ್ ಆಗೋ ಸೂಚನೆ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್, ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಕೈಬಿಟ್ಟಿದೆ.