ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಸೌರವ್ ಗಂಗೂಲಿ? ಪ್ರಶ್ನೆಗೆ ಉತ್ತರಿಸಿದ ದಾದಾ!
ಬಿಸಿಸಿಐ ಅಧ್ಯಕ್ಷ, ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ರಾಜಕೀಯ ಸೇರುತ್ತಾರಾ? ಈ ಪ್ರಶ್ನೆ ಹಲವು ಬಾರಿ ನುಸುಳಿದೆ. ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ ಪ್ರತಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗಂಗೂಲಿ ರಾಜಕೀಯ ಸೇರ್ಪಡೆ ಕುರಿತು ಚರ್ಚಗಳಾಗಿವೆ. ಇತ್ತೀಚೆಗೆ ಈ ಚರ್ಚೆಗಳು ಬಲವಾಗುತ್ತಿದೆ. ಇದೀಗ ಈ ಕುರಿತು ಸ್ವತಃ ಗಂಗೂಲಿ ಉತ್ತರಿಸಿದ್ದಾರೆ.
ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೇ ಹಲವು ಹಾರಿ ರಾಜಕೀಯ ಸೇರ್ಪಡೆ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಇಷ್ಟೇ ಅಲ್ಲ ಈ ಕುರಿತು ಸೌರವ್ ಗಂಗೂಲಿ ನಿರಾಕರಿಸುತ್ತಲೇ ಬಂದಿದ್ದಾರೆ. ಆದರೆ ಈ ಬಾರಿ ಹಾಗಲ್ಲ.
ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ಗಂಗೂಲಿ ಬಿಜೆಪಿ ಸೇರಿಕೊಳ್ಳುತ್ತಾರೆ ಅನ್ನೋ ಸುದ್ದಿ ಬಲವಾಗಿ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಗಂಗೂಲಿ ಪಶ್ಚಿಮ ಬಂಗಾಳ ರಾಜ್ಯಪಾಲರನ್ನು ಭೇಟಿಯಾಗಿ ಎಲ್ಲರಿಗೂ ಅಚ್ಚರಿ ನೀಡಿದ್ದರು.
ಇದೀಗ ಬಿಜೆಪಿ ಮೊದಲ ಎರಡು ಹಂತದ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರ ನಡುವೆ ಮತ್ತೆ ಗಂಗೂಲಿ ರಾಜಕೀಯ ಪ್ರೇವಶ ಮುನ್ನಲೆಗೆ ಬಂದಿದೆ. ಈ ಬಾರಿ ಗಂಗೂಲಿ ನಿರಾಕರಿಸಿಲ್ಲ, ಆದರೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದಾರೆ
ಇಂಗ್ಲೀಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಜೀವನವನ್ನು ಬಂದಂತೆ ಸ್ವೀಕರಿಸುತ್ತೇನೆ. ಎಲ್ಲಿಗೆ ತಲುಪಲಿದೆ ಅನ್ನೋದು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ಎಲ್ಲಿಗೆ ತಲುಪಲಿದೆ ಅನ್ನೋದು ಕಾದು ನೋಡೋಣ ಎಂದು ಗಂಗೂಲಿ ಹೇಳಿದ್ದಾರೆ.
ಸಂದರ್ಶನದಲ್ಲಿ ಗಂಗೂಲಿ ರಾಜಕೀಯ ಸೇರ್ಪಡೆಯನ್ನು ನಿರಾಕರಿಸಿಲ್ಲ, ಹಾಗಂತ ಸ್ವೀಕರಿಸಿಲ್ಲ. ಆದರೆ ಅಭಿಮಾನಿಗಳಿಂದ ಸಿಗುತ್ತಿರುವ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದು ಗಂಗೂಲಿ ಹೇಳಿದ್ದಾರೆ.
ಸದ್ಯ ನಾನು ನನ್ನ ಜೀವನವನ್ನು ಸಂತೋಷವಾಗಿ ಕಳೆಯುತ್ತಿದ್ದೇನೆ. ಜನರ ಜೊತೆ ಬೆರೆಯುತ್ತಿದ್ದೇನೆ. ಜನರ ಜೊತೆ ಇರುವುದನ್ನು ನಾನು ಇಷ್ಟಪಡುತ್ತೇನೆ ಎಂದು ಹೇಳೋ ಮೂಲಕ ರಾಜಕೀಯವೂ ತನ್ನ ಜೀವನ ಶೈಲಿಗೆ ಹೊಂದುತ್ತಿದೆ ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ.
ಬಿಸಿಸಿಐ ಅಧ್ಯಕ್ಷರಾದ ಬಳಿಕ ಗಂಗೂಲಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಿದೆ. ಆದರೆ ಇದರ ನಡುವೆ ದಿಢೀರ್ ರಾಜಕೀಯ ಪ್ರವೇಶಿಸಿದರೂ ಅಚ್ಚರಿಯಿಲ್ಲ.
ಸದ್ಯ ಸೌರವ್ ಗಂಗೂಲಿ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ಹೀಗಾಗಿ ವಿಶ್ರಾಂತಿಯಲ್ಲಿದ್ದಾರೆ. ಇನ್ನು ಐಪಿಎಲ್ ಹಾಗೂ ಬಿಸಿಸಿಐ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಕ್ರಿಕೆಟಿಗರಾದ ಮನೋಜ್ ತಿವಾರಿ ಹಾಗೂ ಅಶೋಕ್ ದಿಂಡಾ ಈಗಾಗಲೇ ರಾಜಕೀಯಕ್ಕೆ ಸೇರ್ಪಡೆಗೊಂಡಿದ್ದಾರೆ. ತಿವಾರಿ ಟಿಎಂಸಿ ಸೇರಿಕೊಂಡಿದ್ದರೆ, ದಿಂಡಾ ಬಿಜೆಪಿ ಸೇರಿಕೊಂಡಿದ್ದಾರೆ.