ನರಗುಂದದಲ್ಲಿ ಕುಡುಕರ ಹಾವಳಿಗೆ ರೋಸಿ ಹೋದ ಮಹಿಳೆಯರು
ಹುಣಸಿಕಟ್ಟಿಯಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ | ಮನವಿಗೂ ಕ್ರಮ ಕೈಗೊಳ್ಳದ ಅಬಕಾರಿ ಅಧಿಕಾರಿಗಳು| ಕುಡುಕರ ಹಾವಳಿಗೆ ಮಹಿಳೆಯರಿಗೆ ತೀವ್ರ ತೊಂದರೆ|ಗ್ರಾಮದಲ್ಲಿ ರಾತ್ರಿ ಹೊತ್ತು ಸಾರಾಯಿ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ.
ನರಗುಂದ[ನ.12]: ತಾಲೂಕಿನ ಹುಣಸಿಕಟ್ಟಿಯಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟವಾಗುತ್ತಿದೆ. ಇದರಿಂದ ಕುಡುಕರ ತಾಣವಾಗಿ ಮಾರ್ಪಡುತ್ತಿವೆ. ಈ ಊರಲ್ಲಿ ದಿನದ 24 ಗಂಟೆ ಅಕ್ರಮ ಸಾರಾಯಿ ಮಾರಾಟವಾಗುತ್ತಿದ್ದು, ಗ್ರಾಮದ ಜನರು ರೋಸಿ ಹೋಗುವಂತಾಗಿದೆ. ಮಹಿಳೆಯರು ಕುಡುಕರ ಹಾವಳಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಕುಡಿಯಲು ಗ್ರಾಮದ ಕೆರೆಯನ್ನೇ ಮುಖ್ಯಸ್ಥಳವನ್ನಾಗಿ ಮಾಡಿಕೊಂಡಿದ್ದು ಮಹಿಳೆಯರು ನೀರಿಗೆ ಬರದಂತಹ ದುಃಸ್ಥಿತಿ ಎದುರಾಗಿದೆ. ರಾತ್ರಿ ಹೊತ್ತಿನಲ್ಲಿಯೇ ಬಾರ್ನಂತಾಗಿರುತ್ತದೆ ಕೆರೆ. ಸಾರಾಯಿ ಪ್ಯಾಕೆಟ್ಗಳನ್ನು ನೀರಿನಲ್ಲಿಯೇ ಅದ್ದಿ ಕುಡಿಯುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಕುಡಿದ ಸಾರಾಯಿ ಪ್ಯಾಕೆಟ್ಗಳನ್ನು ರಾಜಾರೋಷವಾಗಿ ಅಲ್ಲಿಯೇ ಎಸೆದು ಹೋಗುತ್ತಾರೆ. ಇದರಿಂದ ಇಲ್ಲಿ ನೀರು ತುಂಬಲು ಬರಲು ಜನತೆ ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಕೆರೆ ವಾತಾವರಣ ಸಂಪೂರ್ಣ ದುರ್ವಾಸನೆಯಿಂದ ಕೂಡಿದೆ, ಗ್ರಾಮದಲ್ಲಿ ವಿವಿಧ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಆಗುತ್ತಿದೆ. ಇದರ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗ್ರಾಮ ಪಂಚಾಯ್ತಿಯವರು ಇದರ ಬಗ್ಗೆ ಸಾಕಷ್ಟು ಸಲ ಅಬಕಾರಿ ಇಲಾಖೆಗೆ ಮನವಿ ಮಾಡಿದರೂ ಅಕ್ರಮ ಸಾರಾಯಿ ಮಾರಾಟ ಮಾತ್ರನಿಂತಿಲ್ಲ. ಅಬಕಾರಿ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಒಂದಾಗಿ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ನಿಲ್ಲಿಸಬೇಕಿದೆ. ಮಾರಾಟ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮದ ಮಂಜುನಾಥ ಲದ್ದಿ ಹಾಗೂ ಗ್ರಾಮಸ್ಥರು ಆಗ್ರಹಿಸುತ್ತಾರೆ.
ಗ್ರಾಮದಲ್ಲಿ ರಾತ್ರಿ ಹೊತ್ತು ಸಾರಾಯಿ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ನಾವು ಅಬಕಾರಿ ಇಲಾಖೆಯವರಿಗೆ ಪತ್ರ ಬರೆದಿದ್ದೇವೆ. ಕೆರೆ ದಂಡೆ ಮೇಲೆ ಸಾರಾಯಿ ಕುಡಿದವರಿಗೆ 500 ರುಪಾಯಿ ದಂಡ ವಿಧಿಸಲಾಗುವುದು ಎಂದು ಪ್ರಕಟಣಾ ಫಲಕ ಹಾಕಿದ್ದೇವೆ. ಎರಡರಲ್ಲಿ ಒಂದನ್ನು ಕೆಡವಿ ಕಾಣದಂತೆ ಮಾಡಿದ್ದಾರೆ. ರಾತ್ರಿ 8 ಗಂಟೆಯವರೆಗೆ ಕಾಯಲು ಸಿಬ್ಬಂದಿ ನೇಮಿಸಿದ್ದೇವೆ ಎಂದು ಪಿಡಿಓ ವಿ.ಆರ್. ರಾಯನಗೌಡ್ರ ಹೇಳಿದರು.