Varamahalakshmi: ಹಬ್ಬದಂದು ಕಳಶವಿಟ್ಟು ಉಪವಾಸ ಮಾಡಲಾಗ್ತಿಲ್ವಾ? ಹೀಗೆ ಲಕ್ಷ್ಮಿಯನ್ನು ಒಲಿಸಿಕೊಳ್ಳಿ
ಹಿಂದೂ ಧರ್ಮದಲ್ಲಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಜನರು ಭಯ – ಭಕ್ತಿಯಿಂದ ಹಬ್ಬ ಆಚರಣೆ ಮಾಡ್ತಾರೆ. ಆದ್ರೆ ಕೆಲ ಸಂದರ್ಭದಲ್ಲಿ ಉಪವಾಸ ಮಾಡಿ, ಕಟ್ಟುನಿಟ್ಟಾಗಿ ಹಬ್ಬ ಆಚರಣೆ ಸಾಧ್ಯವಾಗೋದಿಲ್ಲ. ಆಗ ಏನು ಮಾಡ್ಬೇಕು ಗೊತ್ತಾ?

ಮಹಿಳೆಯ ಅಚ್ಚುಮೆಚ್ಚಿನ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬವನ್ನು ಇಂದು ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದು ಲಕ್ಷ್ಮಿ ದೇವಿಯ ಗೌರವಾರ್ಥವಾಗಿ ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ. ವರಲಕ್ಷ್ಮಿ ವ್ರತವನ್ನು ಮುಖ್ಯವಾಗಿ ವಿವಾಹಿತ ಮಹಿಳೆಯರು ಲಕ್ಷ್ಮಿ ದೇವಿಯ ರೂಪವಾದ ವರಲಕ್ಷ್ಮಿಯಿಂದ ಆಶೀರ್ವಾದ ಪಡೆಯಲು ಆಚರಿಸುತ್ತಾರೆ. ವರಮಹಾಲಕ್ಷ್ಮಿ ಎಂದರೆ 'ವರ' ಅಂದರೆ ವರಗಳನ್ನು ಕೊಡುವವಳು ಎಂದರ್ಥ.
ವರಮಹಾಲಕ್ಷ್ಮಿ (Varalakshmi) ವ್ರತದ ಮುಖ್ಯ ಉದ್ದೇಶವೆಂದರೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಪ್ರಾರ್ಥನೆ ಸಲ್ಲಿಸುವುದಾಗಿದೆ. ಸಾಮಾನ್ಯವಾಗಿ ವರಮಹಾಲಕ್ಷ್ಮಿ ದಿನ ಮಹಿಳೆಯರು ಉಪವಾಸ (fasting) ಆಚರಿಸಿ, ಲಕ್ಷ್ಮಿ ದೇವಿಯನ್ನು ಪೂಜೆ ಮಾಡುತ್ತಾರೆ. ಉದ್ಯೋಗಸ್ಥ ಮಹಿಳೆಯರು, ವ್ಯಾಪಾರ ಮಾಡುವ ಮಹಿಳೆಯರು ಸೇರಿದಂತೆ ಕೆಲ ಮಹಿಳೆಯರಿಗೆ ವರಮಹಾಲಕ್ಷ್ಮಿ ದಿನದಂದು ಪೂಜೆ, ಉಪವಾಸ ಮಾಡಲು ಸಾಧ್ಯವಾಗದೆ ಇರಬಹುದು.
ಕೆಲ ಮಹಿಳೆಯರು ಇದ್ರಿಂದ ಭಯಗೊಳ್ಳೋದಿದೆ. ವ್ರತ ಮಾಡದೆ ಹೋಗಿರೋದ್ರಿಂದ ಸಮಸ್ಯೆ ಏನಾದ್ರೂ ಆಗಬಹುದಾ ಎಂಬ ಆತಂಕ ಅವರನ್ನು ಕಾಡುತ್ತದೆ. ನಾವಿಂದು ಅದಕ್ಕೆ ಸಂಬಂಧಿಸಿದಂತೆ ಕೆಲ ಪರಿಹಾರವನ್ನು ನಿಮಗೆ ಹೇಳ್ತೇವೆ.
ಮೊದಲನೇಯದಾಗಿ ವರಮಹಾಲಕ್ಷ್ಮಿ ವ್ರತವನ್ನು ಎಲ್ಲ ವಿವಾಹಿತ ಮಹಿಳೆಯರು ಆಚರಣೆ ಮಾಡಬೇಕು ಎಂದೇನಿಲ್ಲ. ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ವರಮಹಾಲಕ್ಷ್ಮಿ ಆಚರಣೆ, ಉಪವಾಸ ವ್ರತ ಮಾಡುವಂತೆ ಎಲ್ಲ ಜಿಲ್ಲೆಯಲ್ಲೂ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡೋದಿಲ್ಲ.
ಹಿಂದಿನಿಂದಲೂ ಕುಟುಂಬದ ಮಹಿಳೆಯರು ವ್ರತ ಮಾಡಿಕೊಂಡು ಬಂದಿದ್ದಲ್ಲಿ ಮಾತ್ರ ಆ ವ್ರತವನ್ನು ಮುಂದಿನವರು ಮುಂದುವರೆಸುತ್ತಾರೆ. ಈ ಉಪವಾಸವನ್ನು ಆಚರಿಸಲು ಯಾವುದೇ ಕಟ್ಟುನಿಟ್ಟಾದ ನಿಯಮಗಳಿಲ್ಲ. ಹಾಗೆಯೇ ನೀವು ಕಠಿಣ ಆಚರಣೆಗಳನ್ನು ಮಾಡಬೇಕಾಗಿಲ್ಲ.
Varalakshmi Vratham 2023: ಇಂದು ವರಮಹಾಲಕ್ಷ್ಮಿ ಹಬ್ಬ; ವ್ರತ ಏಕೆ ಆಚರಿಸಬೇಕು? ಇಂದು ಏನು ಮಾಡಬೇಕು?
ರಾತ್ರಿ ಪೂರ್ತಿ ನಿದ್ರೆಗೆಟ್ಟು, ದೇವಿಗೆ ನಾನಾ ರೀತಿಯ ತಿಂಡಿ ಸಿದ್ಧಪಡಿಸಿ, ಅಲಂಕಾರ ಮಾಡಿ, ಅದ್ಧೂರಿಯಾಗಿ ಪೂಜೆ ಮಾಡಿದ್ರೆ ಮಾತ್ರ ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆ ತಪ್ಪು. ವರಮಹಾಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಸರಳವಾದ ಪ್ರಾರ್ಥನೆಯೂ ಸಾಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಒಂದ್ವೇಳೆ ನೀವು ವರಮಹಾಲಕ್ಷ್ಮಿ ದಿನ ಉಪವಾಸ ಮಾಡಲು ಸಾಧ್ಯವಾಗಿಲ್ಲ, ಮನೆಯಲ್ಲಿ ಕಳಶ ಸ್ಥಾಪನೆ ಆಗಿಲ್ಲವೆಂದಾದ್ರೆ ನೀವು ಚಿಂತಿಸುವ ಅಗತ್ಯವಿಲ್ಲ. ಸರಳವಾಗಿ ತಾಯಿಗೆ ಪೂಜೆ ಮಾಡಿ. ಇಲ್ಲವೆ ಶ್ರಾವಣ ಮಾಸದ ಇನ್ನೊಂದು ಶುಕ್ರವಾರ ನೀವು ವ್ರತ ಆಚರಣೆ ಮಾಡಬಹುದು.
ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಿದಂತೆ, ಲಕ್ಷ್ಮಿ ದೇವಿಯು ಸಮೃದ್ಧಿ, ಸಂಪತ್ತು, ಅದೃಷ್ಟ, ಜ್ಞಾನ, ಬೆಳಕು, ಉದಾರತೆ, ಧೈರ್ಯ ಮತ್ತು ಫಲವತ್ತತೆಯ ಅಧಿದೇವತೆ. ಮಹಿಳೆಯರು, ವಿಶೇಷವಾಗಿ ವಿವಾಹಿತ ಮಹಿಳೆಯರು, ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮತ್ತು ಅವಳ ದೈವಿಕ ಆಶೀರ್ವಾದವನ್ನು ಪಡೆಯಲು ಈ ಉಪವಾಸವನ್ನು ಆಚರಿಸುತ್ತಾರೆ. ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ದೇವಿಯನ್ನು ಪ್ರಾರ್ಥಿಸುತ್ತಾರೆ ಮತ್ತು ಉತ್ತಮ ಮಕ್ಕಳ ಆಶೀರ್ವಾದವನ್ನು ಸಹ ಕೋರುತ್ತಾರೆ. ಉಪವಾಸದ ವೃತ ನಿಮಗೆ ಸಾಧ್ಯವಿಲ್ಲವೆಂದಾದ್ರೆ ನೀವು ಬೆಳಿಗ್ಗೆ ಬೇಗ ಎದ್ದು, ದೇವರಿಗೆ ಪೂಜೆ ಮಾಡಿ ನಿಮ್ಮ ಕೆಲಸಕ್ಕೆ ತೆರಳಬಹುದು. ಕಚೇರಿಗೆ ಹೋಗುವ ವೇಳೆ ಅಥವಾ ವಾಪಸ್ ಬರುವ ವೇಳೆ ನೀವು ಲಕ್ಷ್ಮಿ ದೇವಿಯ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿದ್ರೆ ಸಾಕು.
ನಾಲ್ಕೈದು ಮುತ್ತೈದೆಯರಿಗೆ ನೀವು ಕುಂಕುಮ ನೀಡಿದ್ರೂ ಲಕ್ಷ್ಮಿ ಖುಷಿಯಾಗ್ತಾಳೆ ಎಂಬ ನಂಬಿಕೆ ನಮ್ಮಲಿದೆ. ಹಾಗಾಗಿ ನೀವು ಸಂಜೆ ಸಮಯದಲ್ಲಿ ಮುತ್ತೈದೆಯರನ್ನು ಮನೆಗೆ ಕರೆದು ನಿಮ್ಮ ಕೈನಲ್ಲಾದ ಬಾಗಿನ ನೀಡಿ. ಎಲೆ, ಅಡಿಕೆ, ಕುಂಕುಮ ನೀಡಿದ್ರೂ ಸಾಕು. ಮುತ್ತೈದೆಯರ ಆಶೀರ್ವಾದ ಸಿಕ್ಕದೆ ಲಕ್ಷ್ಮಿಯ ಆಶೀರ್ವಾದ ಸಿಕ್ಕಂತೆ.
ವ್ರತ ಮಾಡಲು ಸಾಧ್ಯವಿಲ್ಲ ಎನ್ನುವ ಮಹಿಳೆಯರು, ಲಕ್ಷ್ಮಿಗೆ ಪ್ರಿಯವಾದ ಭಕ್ಷ್ಯವನ್ನು ಸಿದ್ಧಪಡಿಸಿ ನೈವೇದ್ಯ ಮಾಡಬಹುದು. ಪಾರಿಜಾತದ ಹೂ, ದಕ್ಷಿಣಾಮೂರ್ತಿ ಶಂಖ, ಕವಡೆ, ತೆಂಗಿನ ಕಾಯಿ, ಚಿನ್ನದ ನಾಣ್ಯ ಇವುಗಳಲ್ಲಿ ಒಂದನ್ನು ಇಂದು ಮನೆಗೆ ತಂದರೂ ನೀವು ಲಕ್ಷ್ಮಿ ಆಶೀರ್ವಾದ ಪಡೆಯಬಹುದು. ಲಕ್ಷ್ಮಿ ಆಡಂಬರ, ಕಠಿಣತೆಯನ್ನು ಬಯಸೋದಿಲ್ಲ. ನೀವು ಭಕ್ತಿಯಿಂದ ಕೈಮುಗಿದ್ರೂ ತಾಯಿ ಆಶೀರ್ವಾದ ನೀಡುತ್ತಾಳೆ.