Asianet Suvarna News Asianet Suvarna News

ಚಿತ್ರದುರ್ಗದಲ್ಲಿ ಬುಡಕಟ್ಟು ಸಂಸ್ಕೃತಿಯ ಮುಳ್ಳಿನ ಗುಡಿಕಟ್ಟಿ ಜಾತ್ರೆ

ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಮುಳ್ಳಿನಿಂದ ಗುಡಿಕಟ್ಟಿ ಜಾತ್ರೆ ಆಚರಣೆ ಮಾಡುವ ಮೂಲಕ ಬುಡಕಟ್ಟು ಸಂಸ್ಕೃತಿ ಉಳಿಸಲು ಮುಂದಾಗಿದ್ದಾರೆ.

Tribal cultural festival at Chitradurga gow
Author
First Published Jan 29, 2024, 8:20 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.29): ದೇವರು ಅಂದ್ರೆ ಸಾಕು ಇತ್ತೀಚೆಗೆ ಕೆಲವರಲ್ಲಿ ಎಲ್ಲಿಲ್ಲದ ಭಕ್ತಿ ಬಂದಿದೆ. ಹೀಗಾಗಿ ವಾರದಲ್ಲಿ ಒಮ್ಮೆ ಆದರು ಟೆಂಪಲ್ ರನ್ ಮಾಡ್ತಾ, ದೇವರಿಗೆ ಬೆಲೆ ಬಾಳುವ ಬಂಗಾರದಿಂದಲೇ ದೇಗುಲ ನಿರ್ಮಾಣ ಮಾಡಿಕೊಟ್ಟಿರೋ ಮಹಾನುಭಾವರಿದ್ದಾರೆ. ಆದ್ರೆ ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಮುಳ್ಳಿನಿಂದ ಗುಡಿಕಟ್ಟಿ ಜಾತ್ರೆ ಆಚರಣೆ ಮಾಡುವ ಮೂಲಕ ಬುಡಕಟ್ಟು ಸಂಸ್ಕೃತಿ ಉಳಿಸಲು ಮುಂದಾಗಿದ್ದಾರೆ. ಈ ಕುರಿತು ವರದಿ ಇಲ್ಲಿದೆ. 

ನೋಡಿ ಹೀಗೆ ಮುಳ್ಳಿನಿಂದಲೇ ನಿರ್ಮಾಣ ಮಾಡ್ತಿರೋ ದೇಗುಲ. ದೇಗುಲ ನಿರ್ಮಾಣಕ್ಕಾಗಿ ಆಲದ ಮರವನ್ನು ಹೊತ್ತು ತರುತ್ತಿರೋ ಭಕ್ತರು.ಈ ಧೃಶ್ಯಗಳ ಕಂಡುಬಂದಿದ್ದು, ಬುಡಕಟ್ಟು ಸಂಸ್ಕೃತಿಯ ತೊಟ್ಟಿಲು  ಎನಿಸಿರೋ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಪುರ್ಲಹಳ್ಳಿಯಲ್ಲಿ.  ಈ ವಿಶೇಷವಾದ ಮುಳ್ಳಿನ ಉತ್ಸವವೇ ಇಲ್ಲಿ ಪ್ರತಿ ವರ್ಷ ಜರುಗುತ್ತದೆ. ಹೀಗಾಗಿ ಪುರ್ಲಹಳ್ಳಿಯ ಹೊರ ವಲಯದಲ್ಲಿರುವ 'ವಸಲುದಿಬ್ಬ' ಎಂಬ ಪ್ರದೇಶದಲ್ಲಿ ಸುಮಾರು 15ದಿನಗಳ ಕಾಲ ಸಾಂಪ್ರದಾಯಿಕವಾಗಿ ಈ ಉತ್ಸವವನ್ನು ಆಚರಿಸಲಾಗುತ್ತದೆ.

Gadag : ಕೊಲೆಯೋ? ಅಘಾತವೋ? ಮಗನ ಸಾವಿನ ರಹಸ್ಯ ಬಯಲು ಮಾಡುವಂತೆ ತಾಯಿಯ ಒತ್ತಾಯ

ಕಾಡುಗೊಲ್ಲ ಸಮುದಾಯ ನೂರಾರು ವರ್ಷಗಳಿಂದ ಈ ಆಚರಣೆಯನ್ನು ಆಚರಿಸುತ್ತ ಬಂದಿದೆ. ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪ ದೇವರ ವಿಶಿಷ್ಟ ಜಾತ್ರೆ ಇದಾಗಿದ್ದೂ, 20 ಅಡಿ ಎತ್ತರ, 15 ಅಡಿ ಸುತ್ತಳತೆಯಲ್ಲಿ ಬಾರೇಕಳ್ಳಿಯಿಂದ ಗೋಪುರ ನಿರ್ಮಿಸಿ, ಆ  ಗೋಪುರದ ತುದಿಯಲ್ಲಿ ಕಳಷವಿಡಲಾಗುತ್ತದೆ. ಬಳಿಕ ಗುಡಿಯಲ್ಲಿ ಕಾಡುಗೊಲ್ಲ ಜನಾಂಗದ ಆರಾಧ್ಯ ದೈವ ಕೇತಪ್ಪ ದೇವರನ್ನು ಪ್ರತಿಷ್ಠಾಪಿಸಲಾಗುತ್ತದೆ. 

ಹೀಗಾಗಿ ಇಂದು ಬಾರಿಕಳ್ಳೆ, ಬಂದ್ರಿ ಕಳ್ಳೆಯಿಂದ ಗುಡಿ ನಿರ್ಮಿಸುವ ವಿಶಿಷ್ಟ ಆಚರಣೆ ನಡೆದಿದ್ದೂ, ನೋಡುಗರನ್ನು ಮೈನವಿರೇಳುವಂತೆ ಮಾಡಿತು. ಇನ್ನು  ಐದು ದಿನಗಳ ಬಳಿಕ ಈ  ಮುಳ್ಳಿನ ಗುಡಿಗೆ 13 ಗುಡಿಕಟ್ಟಿನ ದೇವರುಗಳು ಬಂದು ಸೇರಲಿದ್ದೂ ವಿಶೇಷ ಪೂಜೆ  ನಂತರ ಕಟ್ಟುನಿಟ್ಟಿನ ನಿಯಮ ಪಾಲಿಸಿದ 5 ಜನ 'ಈರಗಾರರು'  ಮೆರವಣಿಗೆಯಲ್ಲಿ ಬಂದು ಬರೆಗಾಲಿನಲ್ಲಿ ಮುಳ್ಳಿನ  ಗುಡ್ಡೆ ಮೇಲೆ ಹತ್ತಿ ಕಳಷ ಕೆಳಗಿಳಿಸುವ ಆಚರಣೆ ಇಲ್ಲಿ ನಡೆಯಲಿದೆ.

ಧಾರವಾಡ ಜಿಲ್ಲಾ ಮಟ್ಟದ ಜನತಾ ದರ್ಶನ, ಸಾರ್ವಜನಿಕರಿಂದ 111 ಅಹವಾಲು ಸ್ವೀಕಾರ

ಕಾಡುಗೊಲ್ಲರ 13 ಗುಡಿಕಟ್ಟು ಸಮುದಾಯದವು ಒಂದು ತಿಂಗಳ ಕಾಲ 'ನವಣೆ' ವೃತ ಆಚರಿಸುತ್ತಾರೆ. ಯಾಕಂದ್ರೆ, ಕ್ಯಾತಪ್ಪದೇವ್ರು ಗೊಲ್ಲ ಸಮುದಾಯದವ್ರಿಗೆ ಒಲಿಯುವ ಮುನ್ನ ಹೇಮರೆಡ್ಡಿ ಗೌಡನಿಗೆ ಒಲಿದಿತ್ತಂತೆ. ಆದ್ರೆ, ರೆಡ್ಡಿ ಅಲಕ್ಷದಿಂದಾಗಿ ದೇವರನ್ನು ಹುರುಳಿ, ನವಣೆ ಕಣಜದಲ್ಲಿ ಮುಚ್ಚಿ ಹಾಕಿದ್ದನಂತೆ. ಹೀಗಾಗಿ, ರೆಡ್ಡಿಯ ದುರಹಂಕಾರದಿಂದಾಗಿ ಬೇಸತ್ತ ದೇವ್ರು ಗೊಲ್ಲರ ಬೊಮ್ಮಲಿಂಗನಿಗೆ ಒಲಿದಿದೆ ಎಂಬ ಪ್ರತೀತಿ ಇದೆ.

ಹೀಗಾಗಿ, ಗೊಲ್ಲ ಸಮುದಾಯದವರು ದೇವರಿಗೆ ಹಿಡಿಸದ ನವಣೆ ಮತ್ತು ಹುರುಳಿಯನ್ನು ಒಂದು ತಿಂಗಳು ಕಾಲ ಸೇವಿಸುವುದಿಲ್ಲ. ಅಂತೆಯೇ ಆ ಧಾನ್ಯ ಬೆಳೆದ ಹೊಲದಲ್ಲಿ ಕೂಡ ಹೋಗದೆ ಕಟ್ಟು ನಿಟ್ಟಿನ  ವೃತ ಪಾಲಿಸುತ್ತಾರೆ. ಬರೆಗಾಲಲ್ಲಿ ಬೇಲಿಗುಡಿ ಕಳಷ ಕೀಳುವ ಮೂಲಕ 'ಈರಗಾರರು' ವಂಶಸ್ಥರು ಶೌರ್ಯ ಮೆರೆಯುತ್ತಾರೆ. ಅಂತೆಯೇ ಈ ಆಚರಣೆಯಿಂದ ಈ ನಾಡಿಗೆ ಒಳಿತಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

ಒಟ್ಟಾರೆ ಕೋಟೆನಾಡಿನಲ್ಲಿ ಕಾಡುಗೊಲ್ಲ ಸಮುದಾಯ ಈ ಮುಳ್ಳಿನ ಜಾತ್ರೆಯನ್ನು ವಿಶೇಷವಾಗಿ ಆಚರಿಸಲಾಗ್ತದೆ. ಬರೀ ಮೈಯಲ್ಲಿ ಮುಳ್ಳಿನ ಗೋಪುರ ಕಟ್ಟುವುದು. ಮತ್ತು ಮುಳ್ಳಿನ ಗೋಪುರ ಹತ್ತಿ ಕಳಷ ಕೀಳುವ ಸಾಹಸ ಭಕ್ತರನ್ನು ರೋಮಾಂಚನಗೊಳಿಸುತ್ತದೆ. ಇಂದು ಮುಳ್ಳಿನ ಗೋಪುರ ಕಟ್ಟುವ ಕಾರ್ಯ ನಡೆದಿದೆ. ಜನೇವರಿ 13 ರಂದು ಸಂಜೆ ಹೊತ್ತಿಗೆ ಮುಳ್ಳಿನ ಗೋಪುರದ ಮೇಲಿನ ಕಳಶ ಕೀಳುವ ವಿಶಿಷ್ಠ ಆಚರಣೆ ನಡೆಯಲಿದ್ದು ಆ ಕಳಶ ಕೀಳುವ ಕ್ಷಣಕ್ಕೆ ಸಾಕ್ಷಿಯಾಗಲು ಜನ ಕಾತುರತೆಯಿಂದ ಕಾಯುತ್ತಿದ್ದಾರೆ.

Follow Us:
Download App:
  • android
  • ios