Asianet Suvarna News Asianet Suvarna News

Maha Shivaratri 2022: ಶಿವರಾತ್ರಿ ಆಚರಣೆ ಹಿಂದಿನ ವಿಶಿಷ್ಠ ಕತೆ ಕೇಳಿದ್ದೀರಾ?

ಶಿವರಾತ್ರಿ ಏಕೆ ಆಚರಣೆ ಮಾಡುತ್ತೀವಿ ಎಂಬ ಬಗ್ಗೆ ಹಲವಾರು ಪುರಾಣದ ಕತೆಗಳಿವೆ. ಅವುಗಳಲ್ಲಿ ಪ್ರಮುಖ ಕೆಲವನ್ನು ಇಲ್ಲಿ ಕೊಡಲಾಗಿದೆ. 

This is the unique Mahashivaratri story one should know skr
Author
Bangalore, First Published Mar 1, 2022, 11:00 AM IST | Last Updated Mar 1, 2022, 11:00 AM IST

ಮಹಾ ಶಿವರಾತ್ರಿ(Maha Shivaratri) ಹೆಸರಿಗೆ ತಕ್ಕಂತೆ ಶಿವನನ್ನು ಆರಾಧಿಸುವ ಮಹಾರಾತ್ರಿಯಾಗಿಯೇ ಭಾರತದಾದ್ಯಂತ ಕಂಡುಬರುತ್ತದೆ. ಹಿಂದೂಗಳು ಹಾಗೂ ನೇಪಾಳಿಗರಿಗೆ ಇದು ಬಹು ದೊಡ್ಡ ಹಬ್ಬವಾಗಿದ್ದು, ಭಾರತ(India) ಮತ್ತು ನೇಪಾಳ(Nepal)ದಲ್ಲಿ ಸಂಭ್ರಮದ ಆಚರಣೆ ಕಾಣಬರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿ ಹಬ್ಬವಾದರೂ, ರಾತ್ರಿಯ ಜಾಗರಣೆ ಮಾಡುವುದು ಅಮಾವಾಸ್ಯೆಯಂದು. ಮಹಾಶಿವರಾತ್ರಿಯ ದಿನ ಆಚರಣೆಯ ಹಿನ್ನೆಲೆಯಲ್ಲಿ ಹಲವು ಕತೆಗಳು ಕಾಣಬರುತ್ತವಾದರೂ, ಎಲ್ಲಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ಪಡೆದಿರುವುದು ಇಂದು ಶಿವ-ಪಾರ್ವತಿ ವಿವಾಹವಾದ ದಿನ ಎಂಬ ಕತೆ. ದೇವಾನುದೇವತೆಗಳಿಗೇ ದೇವರಾಗಿರುವ ಮಹಾದೇವನನ್ನು ಪೂಜಿಸಿ, ಭಜಿಸುವ ಈ ಹಬ್ಬದ ಹಿಂದಿನ ಪುರಾಣ ಪುಣ್ಯ ಕತೆಗಳೇನೇನು ಎಂಬುದನ್ನು ನಿಮ್ಮ ಮುಂದಿಡುತ್ತಿದ್ದೇವೆ. 

ಪುರಾಣಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಸಮುದ್ರದಿಂದ ವಿಷದ ಮಡಕೆ ಹೊರಹೊಮ್ಮಿತು. ದೇವತೆಗಳು(devs) ಮತ್ತು ರಾಕ್ಷಸರು(demons) ಭಯಭೀತರಾಗಿದ್ದರು, ಏಕೆಂದರೆ ಅದು ಇಡೀ ಪ್ರಪಂಚವನ್ನು ನಾಶ ಪಡಿಸುವಷ್ಟು ಪ್ರಬಲ ವಿಷವನ್ನು ಹೊಂದಿತ್ತು. ಈ ಹಾಲಾಹಲ ಜಗತ್ತನ್ನೇ ಮುಳುಗಿಸುತ್ತದೆ ಎಂಬ ಭಯದಿಂದ ದೇವತೆಗಳು ಹಾಗೂ ರಾಕ್ಷಸರೆಲ್ಲರೂ ಸಹಾಯ ಕೋರಿ ಶಿವನ ಬಳಿಗೆ ಓಡಿದರು. ಜಗತ್ತನ್ನು ರಕ್ಷಿಸುವ ಸಲುವಾಗಿ, ಶಿವನು ದೊಡ್ಡದೊಂದು ನಿರ್ಧಾರವನ್ನು ಸ್ಥಳದಲ್ಲೇ ತೆಗೆದುಕೊಂಡು ಅಷ್ಟೂ ಹಾಲಾಹಲವನ್ನು ಕುಡಿದನು. ಕೂಡಲೇ ಪಾರ್ವತಿಯು ವಿಷ ಕೆಳಗಿಳಿಯದಿರಲೆಂದು ಶಿವನ ಗಂಟಲನ್ನು ಒತ್ತಿ ಹಿಡಿದಳು. ವಿಷ ಅಲ್ಲಿಯೇ ತುಂಬಿ ನಿಂತಿತು. ಶಿವನ ಕತ್ತು ವಿಷದಿಂದಾಗಿ ನೀಲಿ(blue) ಬಣ್ಣಕ್ಕೆ ತಿರುಗಿತು. ಹಾಗಾಗಿಯೇ ಅವನಿಗೆ ನೀಲಕಂಠ ಎನ್ನುವ ಹೆಸರು ಬಂದಿದ್ದು. ಒಂದು ಕತೆಯ ಪ್ರಕಾರ ಹೀಗೆ ಶಿವ ಜಗತ್ತನ್ನು ವಿಷದಿಂದ ರಕ್ಷಿಸಿದ ದಿನವಾಗಿ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. 

Mahashivratri 2022 : ಪೂಜೆಯಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಶಿವನಿಗೆ ಅರ್ಪಿಸ್ಬೇಡಿ..

ಯಾರು ಹೆಚ್ಚು?
ಮತ್ತೊಂದು ಕತೆಯಂತೆ ವಿಷ್ಣು ಹಾಗೂ ಬ್ರಹ್ಮ ದೊಡ್ಡ ಜಗಳಕ್ಕಿಳಿದು ಅದನ್ನು ಶಿವ ಬಿಡಿಸಿದ ದಿನವಾಗಿಯೂ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಹೆಚ್ಚು ಎಂಬ ವಾಗ್ವಾದ ನಡೆಯಿತು. ಆಗ ಇದನ್ನು ನಿಭಾಯಿಸಲು ಶಿವ(Shiva)ನು ಅವರಿಬ್ಬರ ನಡುವೆ ಒಂದು ಸ್ಪರ್ಧೆ ಏರ್ಪಡಿಸುತ್ತಾನೆ. ಬೆಳಕಿನ ರೇಖೆಯೊಂದನ್ನು ದೊಡ್ಡ ಕಂಬದ ಹಾಗೆ ಸೃಷ್ಟಿಸಿ ಯಾರು ಅದರ ಕೊನೆ ಎಲ್ಲಿದೆ ಎಂದು ನೋಡುವರೋ ಅವರೇ ಹೆಚ್ಚು ಎನ್ನುತ್ತಾನೆ. ಆಗ ಬ್ರಹ್ಮ ಅದರ ತುದಿ ಹುಡುಕಿಕೊಂಡು ಮೇಲಕ್ಕೆ ಹೋದರೆ ವಿಷ್ಣುವು ಕೆಳಭಾಗಕ್ಕೆ ಹೋಗುತ್ತಾನೆ. ಕಡೆಗೆ ವಿಷ್ಣು ಬಂದು ತನಗೆ ಅದರ ತುದಿ ಸಿಗಲಿಲ್ಲವೆಂದು ಸೋಲೊಪ್ಪಿಕೊಳ್ಳುತ್ತಾನೆ. ಆದರೆ ಬ್ರಹ್ಮನು ಗೆಲ್ಲಬೇಕೆಂಬ ಹಟದಿಂದ ತಾನು ಆ ಜ್ಯೋತಿಯ ಕೊನೆ ನೋಡಿದ್ದಾಗಿ ಸುಳ್ಳು ಹೇಳುತ್ತಾನೆ. ಬ್ರಹ್ಮ ಸುಳ್ಳು ಹೇಳುವುದು ಗೊತ್ತಾದ ಶಿವನಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಇನ್ನು ನಿನ್ನನ್ನು ಯಾರೂ ಪ್ರಾರ್ಥಿಸುವುದಿಲ್ಲ, ಪೂಜಿಸುವುದಿಲ್ಲ ಎಂದು ಶಾಪ ಕೊಡುತ್ತಾನೆ. ಅದಕ್ಕೇ ಇಂದಿಗೂ ಬ್ರಹ್ಮನನ್ನು ಯಾರೂ ಪೂಜಿಸುವುದಿಲ್ಲ. ಆ ಬೆಳಕಿನ ಕಂಬವೇ ಜ್ಯೋತಿರ್ಲಿಂಗ(Jyotirlinga). ಹೀಗೆ ಜ್ಯೋತಿರ್ಲಿಂಗ ಸೃಷ್ಟಿಯಾದ ದಿನ ಇದೆಂದು ಹೇಳಲಾಗುತ್ತದೆ. 

ಶಿವ ಶಕ್ತಿಯರ ವಿವಾಹ
ಶಿವ ಮತ್ತು ಶಕ್ತಿಯ ವಿವಾಹದ ದಂತಕಥೆಯು ಮಹಾಶಿವರಾತ್ರಿಯ ಹಬ್ಬಕ್ಕೆ ಸಂಬಂಧಿಸಿದ ಪ್ರಮುಖ ದಂತಕಥೆಗಳಲ್ಲಿ ಒಂದಾಗಿದೆ. ಶಿವನು ತನ್ನ ದೈವಿಕ ಸಂಗಾತಿಯಾದ ಶಕ್ತಿಯೊಂದಿಗೆ ಎರಡನೇ ಬಾರಿಗೆ ಹೇಗೆ ಮದುವೆಯಾದನು ಎಂಬುದನ್ನು ಈ ಕಥೆಯು ನಮಗೆ ಹೇಳುತ್ತದೆ. ಜೊತೆಗೆ, ಅವರಿಬ್ಬರ ವಿವಾಹ(marriage) ವಾರ್ಷಿಕೋತ್ಸವದಂತೆ ಶಿವರಾತ್ರಿ ಆಚರಣೆ ನಡೆಯುತ್ತದೆ ಎನ್ನಲಾಗುತ್ತದೆ. 

Mahashivratri 2022: ಶಿವನ ಕೃಪೆಗೆ ರಾಶಿಯನುಸಾರ ಮಾಡಿ ರುದ್ರಾಭಿಷೇಕ

ಬಿಲ್ವಪತ್ರೆ ಮತ್ತು ಬೇಟೆಗಾರ
ಮತ್ತೊಂದು ಕತೆ ಹೀಗಿದೆ. ಬಿಲ್ವ ಪತ್ರೆಯ ಮಹತ್ವ ಹೇಳುವಂಥದ್ದು. ಶಿವರಾತ್ರಿಯ ದಿನ, ಕಾಡಿನಲ್ಲಿ ಅನೇಕ ಪಕ್ಷಿಗಳನ್ನು ಕೊಂದ ಬೇಟೆಗಾರನನ್ನು ಹಸಿದ ಸಿಂಹವು ಬೆನ್ನಟ್ಟಿತು. ಸಿಂಹದ ದಾಳಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಬೇಟೆಗಾರ ಬಿಲ್ವ ಮರವನ್ನು ಹತ್ತಿದ. ಸಿಂಹ(Lion)ವು ತನ್ನ ಬೇಟೆಗಾಗಿ ಇಡೀ ರಾತ್ರಿ ಮರದ ಬುಡದಲ್ಲಿ ಕಾಯುತ್ತಿತ್ತು. ಮರದಿಂದ ಬೀಳದಂತೆ ಎಚ್ಚರವಾಗಿರಲು ಬೇಟೆಗಾರ ಬಿಲ್ವ ಮರದ ಎಲೆಗಳನ್ನು ಕಿತ್ತು ಕೆಳಗೆ ಬೀಳಿಸುತ್ತಲೇ ಇದ್ದ. ಮರದ ಕೆಳಭಾಗದಲ್ಲಿರುವ ಶಿವಲಿಂಗದ ಮೇಲೆ ಎಲೆಗಳು(leaves) ಬಿದ್ದವು. ಬೇಟೆಗಾರನು ಬೇಟೆಗಾರನು ಬಿಲ್ವಪತ್ರೆಗಳನ್ನು ಅರ್ಪಿಸಿದ್ದರಿಂದ ಶಿವನು ಪ್ರಸನ್ನನಾದನು ಮತ್ತು ಬೇಟೆಗಾರನು ಪಕ್ಷಿಗಳನ್ನು ಕೊಂದು ಮಾಡಿದ ಪಾಪದ ಹೊರತಾಗಿಯೂ ಬೇಟೆಗಾರನನ್ನು ರಕ್ಷಿಸಿದನು. ಈ ಕಥೆಯು ಶಿವರಾತ್ರಿಯಂದು ಬಿಲ್ವಪತ್ರೆಗಳಿಂದ ಶಿವನನ್ನು ಪೂಜಿಸುವ ಶ್ರೇಯಸ್ಸನ್ನು ಒತ್ತಿಹೇಳುತ್ತದೆ.

ಶಿವನ ಈ ಭವ್ಯ ರಾತ್ರಿ ಆಚರಿಸಲು, ಶಿವನ ಭಕ್ತರು ಹಗಲಿನಲ್ಲಿ ಉಪವಾಸ ಕೈಗೊಳ್ಳುತ್ತಾರೆ ಮತ್ತು ರಾತ್ರಿಯಿಡೀ ಭಗವಂತನನ್ನು ಪೂಜಿಸುತ್ತಾರೆ. ಶಿವರಾತ್ರಿಯಂದು ಭಗವಾನ್ ಶಿವನನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬಹುದು. 
 

Latest Videos
Follow Us:
Download App:
  • android
  • ios