Asianet Suvarna News Asianet Suvarna News

ಉಡುಪಿ: ಕಡಿಯಾಳಿ ಮಹಿಷ ಮರ್ದಿನಿ ಸನ್ನಿಧಾನದಲ್ಲಿ ಶಮಿ ವೃಕ್ಷ ಪೂಜೆ

ಈ ಬಾರಿ ಅತ್ಯಂತ ವೈಭವದಿಂದ ಶ್ರೀ ದೇವಳದ ಬ್ರಹ್ಮಕಲಶೋತ್ಸವ ನಡೆದಿದ್ದು, ಹಳೆ ಸಂಪ್ರದಾಯಕ್ಕೆ ಮರುಜೀವ ನೀಡಲಾಗಿದೆ. ಶಮಿ ವೃಕ್ಷಕ್ಕೆ ಭಕ್ತಿ ಶೃದ್ಧೆಗಳಿಂದ ಪೂಜೆ ಸಲ್ಲಿಸಲಾಗಿದೆ.

Shami Tree Worship Held at Kadiyali Mahisha Mardhini Temple in Udupi grg
Author
First Published Oct 5, 2022, 8:20 PM IST

ಉಡುಪಿ(ಅ.05): ವಿಜಯದಶಮಿಯ ಪರ್ವಕಾಲದಲ್ಲಿ ಶಮಿ ವೃಕ್ಷಕ್ಕೆ ಪೂಜೆ ಮಾಡುವ ಸಂಪ್ರದಾಯವಿದೆ. ಉಡುಪಿಯ ಪ್ರಸಿದ್ಧ ದೇವಿಯ ಕ್ಷೇತ್ರವಾಗಿರುವ ಕಡಿಯಾಳಿ ಶ್ರೀ ಮಹಿಷ ಮರ್ದಿನಿ ದೇವಳದ ಪರಿಸರದಲ್ಲೂ, ಈ ಹಿಂದೆ ಶಮಿ ವೃಕ್ಷಕ್ಕೆ ಪೂಜೆ ಮಾಡಲಾಗುತ್ತಿತ್ತು. ಆದರೆ ಕಾರಣಾಂತರಗಳಿಂದ ಈ ಪೂಜಾ ಪದ್ದತಿ ಕೈಬಿಡದಾಗಿತ್ತು, ಈ ಬಾರಿ ಅತ್ಯಂತ ವೈಭವದಿಂದ ಶ್ರೀ ದೇವಳದ ಬ್ರಹ್ಮಕಲಶೋತ್ಸವ ನಡೆದಿದ್ದು, ಹಳೆ ಸಂಪ್ರದಾಯಕ್ಕೆ ಮರುಜೀವ ನೀಡಲಾಗಿದೆ. ಶಮಿ ವೃಕ್ಷಕ್ಕೆ ಭಕ್ತಿ ಶೃದ್ಧೆಗಳಿಂದ ಪೂಜೆ ಸಲ್ಲಿಸಲಾಗಿದೆ.

ಶರನ್ನವರಾತ್ರಿ ಕಳೆದು ಮರುದಿನ ವಿಜಯದಶಮೀ ಪರ್ವದಿನ ಮುಸ್ಸಂಜೆಯಲ್ಲಿ ಊರಿನ ಈಶಾನ್ಯ ಭಾಗದಲ್ಲಿರುವ (ಅಥವಾ ನದೀ ತೀರ) ಶಮೀ ವೃಕ್ಷಕ್ಕೆ ಪೂಜೆ ನೆರವೇರಿಸಿ ಅದರ ಪತ್ರೆಯನ್ನು ಪ್ರಸಾದವಾಗಿ ಸ್ವೀಕರಿಸಿದರೆ ಅಕ್ಷಯ ಸಂಪತ್ತು ಮತ್ತು ಉನ್ನತ ವಿಜಯ ಯಶಸ್ಸು ಪ್ರಾಪ್ತಿ ಎನ್ನುತ್ತವೆ ಶಾಸ್ತ್ರ ಪುರಾಣಗಳು. ಮಹಾಭಾರತದ ಪಾಂಡವರ ವಿಜಯಕ್ಕೂ , ರಾಮಾಯಣದಲ್ಲಿ  ಶ್ರೀರಾಮನ‌ ವಿಜಯಕ್ಕೂ ಇದೇ ಕಾರಣ ಎನ್ನುತ್ತಾರೆ . ಈ ಹಿಂದೆ ಊರಿನಲ್ಲಿ ನೆಲ್ಲಿ , ಅರಳಿ , ಅಶ್ವತ್ಥ , ಶಮೀ ಔದುಂಬರ ಮೊದಲಾದ ವೃಕ್ಷಗಳನ್ನು ಬೆಳೆಸಿ ರಕ್ಷಿಸುವ ಪದ್ಧತಿ ಇತ್ತು. ಆದರೆ ನಗರೀಕರಣ ಹೆಚ್ಚಾದಂತೆಲ್ಲ ಈ ಸಂಪ್ರದಾಯಗಳು ಬಿಟ್ಟಂತಿದೆ . 

ಚಿಕ್ಕಮಗಳೂರು: ವಿಜಯದಶಮಿ ಪ್ರಯುಕ್ತ ಆರದವಳ್ಳಿಯಲ್ಲಿ ಅಂಬು ಒಡೆಯುವ ಕಾರ್ಯ ಸಂಪನ್ನ

ಏನೇ ಇರಲಿ, ಶಮೀ ವೃಕ್ಷ ಲಭ್ಯ ಇರುವವರು ಇವತ್ತು ಅದರ ಆರಾಧನೆ ಮಾಡಿದರೆ ಶ್ರೇಯಸ್ಸಿದೆ ಎಂದು ಹಿರಿಯರು ಹೇಳುತ್ತಾರೆ .ವಿಜಯದಶಮಿಯ ಪರ್ವದಿನ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶಮೀ ಪೂಜೆ ನಡೆಸಿ ಬಳಿಕ ( ಶ್ರೀಮದನಂತೇಶ್ವರ , ಚಂದ್ರಮೌಳೀಶ್ವರ ದೇವಳಕ್ಕೂ ) ಈಶಾನ್ಯ ದಿಕ್ಕಿನಲ್ಲಿರುವ ಪ್ರಾಚೀನವಾದ  (ಕಡೇಹಳ್ಳಿ) ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಳಕ್ಕೆ  ಮಠದ  ವಿದ್ಚಾಂಸರು ಪುರೋಹಿತರು , ಅಧಿಕಾರಿ ವರ್ಗದವರು ವಾದ್ಯ ಬಿರುದಾವಳಿ ಸಹಿತ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ತೆರಳುವ ಸಂಪ್ರದಾಯವಿದೆ.

ಶ್ರೀ ಕೃಷ್ಣನ ಸಹೋದರಿಯಾಗಿರುವ ಶ್ರೀ ಮಹಿಷಮರ್ದಿನಿಗೆ ಪೂಜೆ ಕಪ್ಪಕಾಣಿಕೆ ಸಲ್ಲಿಸಿ ಶಮೀಪ್ರಸಾದ ಹಂಚಿ ಬರುವ ಪದ್ಧತಿ ಪ್ರಾಯಃ ಶ್ರೀ ವಾದಿರಾಜಸ್ವಾಮಿಗಳ ಕಾಲದಿಂದಲೂ ( 5 ಶತಮಾನ) ಚಾಲ್ತಿಯಲ್ಲಿದೆ . ಈ ಪದ್ಧತಿಯನ್ನು ಇದೀಗ ಮತ್ತೆ ಪ್ರಾರಂಭಿಸಲಾಗಿದೆ.

ಕೋಲಾರ: ತಲೆಯ ಮೇಲೆ ತೆಂಗಿನ ಕಾಯಿ ಒಡೆಸಿಕೊಳ್ಳುವ ಮೂಲಕ ಶಕ್ತಿ ಪ್ರದರ್ಶನ

ಈ ವರ್ಷ ಅತ್ಯಂತ ಸುಂದರವಾಗಿ ಪುನರುತ್ಥಾನಗೊಂಡು ಅಸಂಖ್ಯ ಭಕ್ತರ ಆಕರ್ಷಣೆಯ ಕೇಂದ್ರವಾಗಿರುವ ಕಡಿಯಾಳಿ ದೇವಳದ ಆವರಣದಲ್ಲಿ ಶಮೀ ವೃಕ್ಷದ ಕಟ್ಟೆಯನ್ನೂ ನಿರ್ಮಿಸಲಾಗಿದ್ದು ಅದಕ್ಕೆ ಪೂಜೆಯನ್ನೂ ಸಲ್ಲಿಸಲಾಯ್ತು. ಈ ಸಂದರ್ಭದಲ್ಲಿ ಗ್ರಾಮ ಹಾಗೂ ಊರ ಪರವೂರ ಭಕ್ತರು ಉಪಸ್ಥಿತರಿದ್ದು ಶಮೀ ಪ್ರಸಾದ ಸ್ವೀಕರಿಸಿ ಶ್ರೀ ಕೃಷ್ಣ ಮುಖ್ಯಪ್ರಾಣ ಮತ್ತು ದೇವಿಯ ಅನುಗ್ರಹಪೂರ್ವಕ ಶುಭಫಲಗಳಿಗೆ ಪಾತ್ರರಾದರು.

ಶಮೀ ಪೂಜೆಯ ಸಂದರ್ಭದ ಪ್ರಾರ್ಥನೆಯ ಶ್ಲೋಕ ಈ ರೀತಿ ಇದೆ

ಶಮೀ ಶಮಯತೇ ಪಾಪಂ ಶಮೀ ಲೋಹಿತಕಂಟಕಾ ಧಾರಿಣ್ಯರ್ಜುನ ಬಾಣಾನಾಂ ರಾಮಸ್ಯ ಪ್ರಿಯವಾದಿನೀ ಕರಿಷ್ಯಮಾಣ ಯಾತ್ರಾಯಾಂ ಯಥಾಕಾಲಂ ಸುಖಂ ಮಯಾ ತತ್ರ ನಿರ್ವಿಘ್ನಕರ್ತ್ರೀ ತ್ವಂ  ಭವ ಶ್ರೀರಾಮ ಪೂಜಿತೇ 
ಅರ್ಥ-ಕೆಂಪು ಮುಳ್ಳುಗಳಿಂದ ಕಂಗೊಳಿಸುವ ‘ಶಮೀ’ ವೃಕ್ಷವು ಪಾಪಗಳನ್ನು ಶಮನಗೊಳಿಸುವುದು. ಅರ್ಜುನನ ಬಾಣಗಳನ್ನು ಇರಿಸಲಾಗಿದ್ದ ದಿವ್ಯವಾದ ವೃಕ್ಷವದು. ಶ್ರೀರಾಮನಿಗೂ ಒಳಿತನ್ನು ನುಡಿದ ಮರವಿದು. ಶ್ರೀರಾಮನಿಂದ ಪೂಜಿತವಾದ ಈ ದಿವ್ಯವೃಕ್ಷ ಈಗ ವಿಜಯ ಯಾತ್ರೆಗೂ ನೆರವಾಗಲಿ.
 

Follow Us:
Download App:
  • android
  • ios