ಧಾರ್ಮಿಕ, ಜ್ಞಾನ ದಾಸೋಹದ ಕಾರ್ಯಕ್ರಮಗಳಿಗಾಗಿ ಶ್ರೀಕ್ಷೇತ್ರವು ಸಕಲ ರೀತಿಯಲ್ಲಿ ಸಜ್ಜಾಗಿದೆ. ಕ್ಷೇತ್ರವನ್ನು ವಿದ್ಯುದೀಪಗಳಿಂದ ಅಲಂಕರಿಸಲಾಗಿದ್ದು, ಭಕ್ತರ ಸ್ವಾಗತಕ್ಕೆ ಎಲ್ಲಾ ತಯಾರಿಯೂ ನಡೆದಿದೆ.

ಬೆಳ್ತಂಗಡಿ(ನ.19): ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಸಂಭ್ರಮ ಶನಿವಾರದಿಂದ ಆರು ದಿನಗಳ ಕಾಲ ನಡೆಯಲಿದೆ. ಧಾರ್ಮಿಕ, ಜ್ಞಾನ ದಾಸೋಹದ ಕಾರ್ಯಕ್ರಮಗಳಿಗಾಗಿ ಶ್ರೀಕ್ಷೇತ್ರವು ಸಕಲ ರೀತಿಯಲ್ಲಿ ಸಜ್ಜಾಗಿದೆ. ಕ್ಷೇತ್ರವನ್ನು ವಿದ್ಯುದೀಪಗಳಿಂದ ಅಲಂಕರಿಸಲಾಗಿದ್ದು, ಭಕ್ತರ ಸ್ವಾಗತಕ್ಕೆ ಎಲ್ಲಾ ತಯಾರಿಯೂ ನಡೆದಿದೆ. ಕ್ಷೇತ್ರದ ಸನಿಹವಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಬೃಹತ್‌ ಚಪ್ಪರ ಹಾಕಲಾಗಿದ್ದು, ಅಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ ನಡೆಯಲಿದೆ. ವಿವಿಧ ರೀತಿ ಜ್ಞಾನವರ್ಧಕ ಮಾಹಿತಿಗಳು, ಕ್ಷೇತ್ರದಿಂದ ನಡೆಯುವ ಸೇವಾ ಪ್ರಕಲ್ಪಗಳ, ಸರ್ಕಾರದ ಯೋಜನಗಳ ತಿಳಿವಳಿಕೆ ಸಂದರ್ಶಕರಿಗೆ ಸಿಗಲಿದೆ.

Add Asianetnews Kannada as a Preferred SourcegooglePreferred

ಅಲ್ಲದೆ ಪುಸ್ತಕ, ತಿಂಡಿ, ಬಟ್ಟೆಗಳ ಮಳಿಗೆ ಇತ್ಯಾದಿಗಳು ಕಾಣಸಿಗಲಿವೆ. ಬೆಳಗ್ಗೆ 10.30ಕ್ಕೆ ಶಾಸಕ ಹರೀಶ್‌ ಪೂಂಜ ವಸ್ತುಪ್ರದರ್ಶನ ಉದ್ಘಾಟಿಸುವರು. ಮಳಿಗೆಗಳ ಜೊತೆಗೆ ಕಲಾಮಂಟಪವೂ ಇದ್ದು ಅಲ್ಲಿ ಪ್ರತಿದಿನ ಸಂಗೀತ, ನೃತ್ಯ ಇತ್ಯಾದಿ ಕ್ಷೇತ್ರಗಳ ಸಾಧಕರಿಂದ ವಿವಿಧ ಪ್ರಸ್ತುತಿಗಳು ನಡೆಯಲಿವೆ.

ಘೋಷಣೆಗಳ ಚಾಪಲ್ಯ VS ಸಂಕಲ್ಪದ ಸಾಫಲ್ಯ: ಸಚಿವ ಶ್ರೀರಾಮುಲು

ಪಾದಯಾತ್ರೆ: 

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದವರೆಗೆ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಪಂಚಾಕ್ಷರಿ ಜಪದೊಂದಿಗೆ ಪಾದಯಾತ್ರೆ ನಡೆಸಲಿದ್ದಾರೆ. 10ನೇ ವರ್ಷದ ಪಾದಯಾತ್ರೆಗೆ ಶನಿವಾರ ಮಧ್ಯಾಹ್ನ 3 ಗಂಟೆಗೆ ಚಾಲನೆ ದೊರೆಯಲಿದೆ. ಸಂಜೆ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪಾದಯಾತ್ರಿಕರನ್ನು ಉದ್ದೇಶಿಸಿ ಆಶೀರ್ವದಿಸಲಿದ್ದಾರೆ.
ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ 6.30ರಿಂದ 7.30ರ ವರೆಗೆ ಸುಪ್ರೀತಾ ಧರ್ಮಸ್ಥಳ ಇವರಿಂದ ಸಂಗೀತ, 7.30 ರಿಂದ 8.30ರ ವರೆಗೆ ಬೆಂಗಳೂರಿನ ವಿದುಷಿ ಹರ್ಷಿತಾ ಸುದೇಶ ಮತ್ತು ತಂಡದವರಿಂದ ನೃತ್ಯರೂಪಕ, ರಾತ್ರಿ 8.30ರಿಂದ 10ರ ವರೆಗೆ ಗೋಣಿಕೊಪ್ಪ ಶ್ರೀ ದುರ್ಗಾ ಮ್ಯೂಸಿಕಲ್‌ ನೈಟ್ಸ್‌ನ ಅನ್ವಿತ್‌ ಕುಮಾರ್‌ ಅವರಿಂದ ರಸಮಂಜರಿ ಪ್ರಸ್ತುತಿ ಇರಲಿದೆ. ರಾತ್ರಿ 9 ಗಂಟೆ ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆಉತ್ಸವ ಸಂಪನ್ನಗೊಳ್ಳಲಿದೆ.

ನಾಳಿನ ಕಾರ್ಯಕ್ರಮಗಳು: 

ಭಾನುವಾರ ಸಂಜೆ 6.30ರಿಂದ ವಸ್ತುಪ್ರದರ್ಶನ ಮಂಟಪದಲ್ಲಿ ಕಾಸರಗೋಡು ಸಂಗೀತ ಕಲಾ ಸಂಗಮದ ವಿದುಷಿ ಅನುರಾಧಾ ಅಡ್ಕಸ್ಥಳ ಇವರಿಂದ ಶಾಸ್ತ್ರೀಯ ಸಂಗೀತ ಬಳಿಕ ಮೈಸೂರು ಸಿರಿ ಮತ್ತು ಶ್ರೀವತ್ಸ ಶರ್ಮ ಅವರಿಂದ ಸಿರಿ ವಾನಳ್ಳಿ ಅಭಿನಯದ ಆನಂದ ಭಾಮಿನಿ ಎಂಬ ಏಕವ್ಯಕ್ತಿ ನಾಟಕ, ನಂತರ ಶ್ರವಣಬೆಳಗೊಳದ ಸರ್ವೇಶ್‌ ಜೈನ್‌ ಮತ್ತು ತಂಡದವರಿಂದ ಜಿನಗಾನ ಬೀಟ್ಸ್‌ ಆರ್ಕೆಸ್ಟ್ರಾ ನಡೆಯಲಿದೆ. ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಕೆರೆಕಟ್ಟೆಉತ್ಸವ ನೆರವೇರಲಿದೆ.