Asianet Suvarna News Asianet Suvarna News

ಕರಗ ಉತ್ಸವದ ಮೂಲಕ ಮಡಿಕೇರಿ ದಸರಾ ಉದ್ಘಾಟನೆ: ಕಾವೇರಿ ಸಂಕ್ರಮಣಕ್ಕೂ ಚಾಲನೆ

ಮಡಿಕೇರಿ ನಗರದ ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಆರಂಭಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. 

Inauguration of Madikeri Dasara through Karaga Utsava gvd
Author
First Published Oct 15, 2023, 11:30 PM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಅ.15): ಮಡಿಕೇರಿ ನಗರದ ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಆರಂಭಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಮಡಿಕೇರಿ ಪಂಪಿನ ಕೆರೆಯಲ್ಲಿ ಮಡಿಕೇರಿ ಶಕ್ತಿ ದೇವತೆಗಳಾದ ಕಂಚಿ ಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಚೌಟಿ ಮಾರಿಯಮ್ಮ ದೇವತೆಗಳ ಕರಗ ಉತ್ಸವಕ್ಕೆ ಕೊಡಗು ಉಸ್ತುವಾರಿ ಸಚಿವ ಭೋಸರಾಜ್ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನಾಲ್ಕು ಶಕ್ತಿ ದೇವತೆಗಳ ಕರಗಳಿಗೆ ದೇವತೆಗಳ ಮುಖವಾಡಗಳನ್ನು ಧರಿಸಿ ಹೂವುಗಳಿಂದ ಅದ್ಭುತವಾಗಿ ಅಲಂಕಾರ ಮಾಡಲಾಗಿತ್ತು. 

ಪೂಜೆ ಸಲ್ಲಿಕೆ ಬಳಿಕ ನಾಲ್ಕು ದೇವತೆಗಳ ಕರಗಗಳು ನಡೆಮುಡಿಗೆಯಲ್ಲಿ ಮೆರವಣಿಗೆ ಹೊರಟವು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಿದ್ದಂತೆ ಜನರು ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು. ಈ ಸಂದಭ ಮಡಿಕೇರಿ ಶಾಸಕ ಮಂತರ್ ಗೌಡ, ವಿರಾಜಪೇಟೆ ಶಾಸಕ ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಪೊಲೀಸ್  ವರಿಷ್ಠಾಧಿಕಾರಿ ರಾಮರಾಜನ್ ಸೇರಿದಂತೆ ಪ್ರಮುಖರು ಕರಗ ಉತ್ಸವದಲ್ಲಿ ಭಾಗಿಯಾದರು. ಈ ಸಂದರ್ಭ ಮಾತನಾಡಿದ ಕರಗ ಹೊರುವ ಉಮೇಶ್ ಸುಬ್ರಹ್ಮಣಿಯವರು ನಾಲ್ಕು ಶಕ್ತಿ ದೇವತೆಗಳ ಕರಗಕ್ಕೆ ಚಾಲನೆ ನೀಡಲಾಗಿದೆ. ನಾಳೆಯಿಂದ ನಗರದ ಎಲ್ಲಾ ಬಡಾವಣೆಗಳಲ್ಲಿ ನಗರ ಪ್ರದಕ್ಷಿಣೆ ನಡೆಯಲಿದೆ. 

ವೈಭವದ ನವರಾತ್ರಿ ಉತ್ಸವ: ಶೃಂಗೇರಿ, ಹೊರನಾಡಿನಲ್ಲಿ ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ

ಎಲ್ಲರ ಮನೆ ಬಳಿಗೆ ತೆರಳಿ ಪೂಜೆ ಸ್ವೀಕರಿಸಲಿವೆ ಎಂದರು. ಶಾಸಕ ಮಂತರ್ ಗೌಡ ಮಾತನಾಡಿ ಬರಗಾಲ ಇರುವುದರಿಂದ ಅದ್ಧೂರಿ ದಸರಾ ಮಾಡದೆ ಸರಳ ದಸರಾಕ್ಕೆ ಚಿಂತಿಸಲಾಗಿತ್ತು. ಆದರೆ ಹಿಂದಿನಿಂದ ನಡೆದು ಬಂದಿರುವ ದಸರಾ ಉತ್ಸವಕ್ಕೆ ಯಾವುದೇ ಕೊರತೆ ಎದುರಾಗದಂತೆ ಅರ್ಥಪೂರ್ಣವಾಗಿ ಆಚರಿಸಲಿದ್ದೇವೆ ಎಂದರು. ಮತ್ತೊಂದೆಡೆ ಕೊಡಗಿನ ಕುಲದೇವಿ ಮಾತೆ ಕಾವೇರಿ ತೀರ್ಥ ರೂಪಿಣಿಯಾಗಿ ನಾಡಿನ ಜನತೆಗೆ ಇದೇ ತಿಂಗಳ 17 ರ ರಾತ್ರಿ 1 ಗಂಟೆ 27 ನಿಮಿಷಕ್ಕೆ ದರ್ಶನ ನೀಡಲಿದ್ದಾಳೆ. ಹೀಗಾಗಿ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಭಾನುವಾರ ಅಧಿಕೃತ ಚಾಲನೆ ನೀಡಲಾಯಿತು. 

ಕೊಡಗು ಉಸ್ತುವಾರಿ ಸಚಿವ ಭೋಸರಾಜ್ ಅವರು ನಂದಾ ದೀಪ ಬೆಳಗಿಸಿ ಬಳಿಕ ಅಕ್ಷಯ ಪಾತ್ರೆಗೆ ಅಕ್ಕಿ ಹಾಕುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಅಕ್ಷಯ ಪಾತ್ರೆ ಇರಿಸಿದರೆಂದರೆ ಜಾತ್ರೆಗೆ ಅಧಿಕೃತ ಚಾಲನೆ ನೀಡಲಾಗಿದೆ ಎಂದರ್ಥ. ಭಗಂಡೇಶ್ವರ ದೇವಾಲಯದಲ್ಲಿ ವಿವಿಧ ಪೂಜಾ ವಿಧಿ ವಿಧಾನ ನೆರವೇರಿಸಿದ ಬಳಿಕ ದೇವಾಲಯದ ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ ಅವರ ನೇತೃತ್ವದಲ್ಲಿ ಅಕ್ಷಯ ಪಾತ್ರೆಗೆ ಅಕ್ಕಿ ಹಾಕಲಾಯಿತು. ಬಳಿಕ ತಲಕಾವೇರಿಗೆ ತೆರಳಿದ ಕೊಡಗು ಉಸ್ತುವಾರಿ ಸಚಿವ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಸಂಬಂಧಿಸಿದಂತೆ ಮಾಡಿಕೊಂಡಿರುವ ಸಿದ್ಧತೆ ಪರಿಶೀಲಿಸಿದರು. 

ಇದಕ್ಕೂ ಮೊದಲು ಕಾವೇರಿ ಬ್ರಹ್ಮ ಕುಂಡಿಕೆಯ ಸಮೀಪ ಬೋಸರಾಜ್ ಅವರು ಪೂಜೆ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಸಚಿವ ಭೋಸರಾಜ್ ಅವರು ತೀರ್ಥೋದ್ಭವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಯಾವುದೇ ರೀತಿಯಿಂದ ಯಾವುದೇ ಕೊರತೆ ಎದುರಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು. ಇನ್ನು ದೇವಾಲಯದ ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ ಅವರು ಮಾತನಾಡಿ ತೀರ್ಥೋದ್ಭವ ಅಂಗವಾಗಿ ಇಂದು ನಂದಾದೀಪ ಬೆಳಗಿಸಲಾಗಿದೆ. ತೀರ್ಥೋದ್ಭವಾದ ಬಳಿಕ ಒಂದು ತಿಂಗಳ ಕಾಲ ನಂದಾ ದೀಪ ಬೆಳಗಲಿದೆ. 

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್!

ಜೊತೆಗೆ ಅಕ್ಷಯ ಪಾತ್ರೆಗೆ ಅಕ್ಕಿ ಹಾಕಲಾಗಿದ್ದು, ಒಂದು ತಿಂಗಳ ಕಾಲ ನಿರಂತರವಾಗಿ ಜನರಿಗೆ ಇಲ್ಲಿಂದ ಅಕ್ಕಿ ವಿತರಣೆ ಮಾಡಲಾಗುವುದು. ಭಕ್ತರು ಯಾವುದೇ ಸಂದರ್ಭದಲ್ಲಾದರೂ ಬಂದು ಅಕ್ಕಿ ಪಡೆಯಬಹುದು. ಅಕ್ಕಿಯನ್ನು ತಮ್ಮ ಮನೆಯ ದವಸ ಭಂಡಾರಗಳಿಗೆ ಸ್ವಲ್ಪ ಹಾಕಿದರೆ ತಮ್ಮ ಮನೆಯಲ್ಲಿ ಆಹಾರ ಧಾನ್ಯ ವೃದ್ಧಿಯಾಗುವುದು ಎನ್ನುವ ನಂಬಿಕೆ ಇದೆ. ಜೊತೆಗೆ ಈ ಆಹಾರಧಾನ್ಯ ಸೇರಿಸುವುದರಿಂದ ಆರೋಗ್ಯವೂ ವೃದ್ಧಿಯಾಗಲಿದೆ ಎಂದಿದ್ದಾರೆ. ಒಟ್ಟಿನಲ್ಲಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಲು ಕ್ಷಣಗಣನೆ ಆರಂಭವಾಗಿದೆ.

Follow Us:
Download App:
  • android
  • ios