Asianet Suvarna News Asianet Suvarna News

Gautam buddha story: ಕೆಟ್ಟ ಕಾಲ ಕಳೆದ ಬಳಿಕ ಒಳ್ಳೆಯ ಕಾಲ ಬಂದೇ ಬರುತ್ತದೆ..

ಜೀವನದಲ್ಲಿ ತಾಳ್ಮೆ ಅಗತ್ಯ. ಏಕೆಂದರೆ ತಾಳ್ಮೆಯ ಶಕ್ತಿಯಿಂದ ಮಾತ್ರ ಮಾನವ ಜೀವನವು ಸದೃಢವಾಗುತ್ತದೆ ಮತ್ತು ಯಶಸ್ವಿಯಾಗುತ್ತದೆ. ಜೀವನದಲ್ಲಿ ತಾಳ್ಮೆಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಲು, ಗೌತಮ ಬುದ್ಧನ ಈ ಕಥೆಯನ್ನು ಓದಬೇಕು.

Good times come after bad times importance of patience in life from this story of Gautam Buddha skr
Author
First Published Mar 7, 2023, 10:24 AM IST | Last Updated Mar 7, 2023, 10:24 AM IST

ಸಮಯವಿಲ್ಲ ಎಂದು ಗಡಿಬಿಡಿಯಲ್ಲಿ ಕೆಲಸ ಮಾಡುತ್ತೇವೆ. ಮತ್ತೆ ಆ ಕೆಲಸ ಕೆಟ್ಟು ಮತ್ತಷ್ಟು ಸಮಯ ಬೇಡುತ್ತದೆ. ಯಾವುದೇ ಕೆಲಸವಾದರೂ ಅಷ್ಟೆ ತಾಳ್ಮೆ ವಹಿಸಿ ಮಾಡಿದಾಗಲೇ ಸರಿಯಾಗಿ ಆಗುವುದು. ಕೇವಲ ಕೆಲಸವಲ್ಲ, ಜೀವನದಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು, ವ್ಯಕ್ತಿತ್ವ ವಿಕಸನಕ್ಕೆ, ಅಥವಾ ನಾವು ಬಯಸುವ ಯಾವುದೇ ಬದಲಾವಣೆಗೂ ತಾಳ್ಮೆ ಬೇಕು. 
ನಾಳೆಯೇ ಸಣ್ಣಗಾಗಬೇಕೆಂದು ಸರ್ಜರಿ ಮಾಡಿಸಿಕೊಂಡು ಹಲವಾರು ಅಡ್ಡ ಪರಿಣಾಮಗಳಲ್ಲಿ ಒದ್ದಾಡುವುದಕ್ಕಿಂತ ತಾಳ್ಮೆಯಿಂದ ಪ್ರತಿದಿನ ವ್ಯಾಯಾಮ, ಡಯಟ್ ಮಾಲಕ ತೂಕ ಇಳಿಸಿಕೊಳ್ಳುವುದು ಉತ್ತಮ. 

ತರಾತುರಿಯಲ್ಲಿ ಮಾಡುವ ಕೆಲಸವು ಮಾರಕವಾಗಬಹುದು. ಅದಕ್ಕಾಗಿಯೇ ಯಾವುದೇ ಕೆಲಸದಲ್ಲಿ ತಾಳ್ಮೆ ಅಗತ್ಯ. ಏಕೆಂದರೆ ತಾಳ್ಮೆಯು ಎಂಥ ಶಕ್ತಿಯೆಂದರೆ ಅದರ ಮೂಲಕ ವ್ಯಕ್ತಿಯ ಆತ್ಮವು ಬಲಗೊಳ್ಳುತ್ತದೆ. ಆದರೆ ಇಂದಿನ ದಿನಗಳಲ್ಲಿ ಜನರಲ್ಲಿ ತಾಳ್ಮೆ ಎಂಬುದೇ ಇಲ್ಲ. ಯಾವುದೇ ಕೆಲಸ ಮಾಡಲು ಅಥವಾ ಏನನ್ನಾದರೂ ಸಾಧಿಸಲು ಅವರಿಗೆ ತಾಳ್ಮೆ ಇರುವುದಿಲ್ಲ. ಬದಲಿಗೆ ಅವರು ಎಲ್ಲವನ್ನೂ ಬೇಗನೆ ಆಗಬೇಕೆಂದು ಬಯಸುತ್ತಾರೆ. ಆದರೆ ಆತುರದಲ್ಲಿ ಏನಾದರೂ ಸಿಕ್ಕರೂ ಜೀವನದಲ್ಲಿ ಅದರ ಪ್ರಾಮುಖ್ಯತೆ ಶೂನ್ಯ ಎಂಬುದನ್ನು ಅವರು ಮರೆತು ಬಿಡುತ್ತಾರೆ. ಜೀವನದಲ್ಲಿ ತಾಳ್ಮೆಯ ಮಹತ್ವ ಮತ್ತು ತಾಳ್ಮೆ ಏಕೆ ಬೇಕು ಎಂದು ತಿಳಿಯಲು, ಗೌತಮ ಬುದ್ಧನ ಜೀವನಕ್ಕೆ ಸಂಬಂಧಿಸಿದ ಈ ಕಥೆಯನ್ನು ನೀವು ತಿಳಿದಿರಬೇಕು.

ತಾಳ್ಮೆ ಎಂದರೇನು?
ತಾಳ್ಮೆಯ ಮಹತ್ವ ತಿಳಿಯುವ ಮೊದಲು ತಾಳ್ಮೆ ಎಂದರೇನು ಎಂದು ತಿಳಿಯೋಣವೇ? ವಾಸ್ತವವಾಗಿ ತಾಳ್ಮೆ, ತೃಪ್ತಿ ಅಥವಾ ಸಹಿಷ್ಣುತೆ ಎಲ್ಲರಲ್ಲೂ ಇರುವುದಿಲ್ಲ. ಕಷ್ಟದ ಸಂದರ್ಭಗಳಲ್ಲೂ ಶಾಂತತೆಯನ್ನು ಕಾಯ್ದುಕೊಳ್ಳುವ ಮೂಲಕ ಅಥವಾ ಬರಲಿರುವ ಸರಿಯಾದ ಸಮಯಕ್ಕಾಗಿ ತಾಳ್ಮೆಯಿಂದ ಕಾಯುವ ಮೂಲಕ ಅದನ್ನು ಜಯಿಸುವವನು ತಾಳ್ಮೆಯ ವ್ಯಕ್ತಿ.

ಹೋಳಿ ಬಳಿಕ ಶುರುವಾಗಲಿದೆ ಈ ರಾಶಿಗಳಿಗೆ ಗಜಕೇಸರಿ ರಾಜಯೋಗ, ಮುಟ್ಟಿದ್ದೆಲ್ಲ ಆಗಲಿದೆ ಚಿನ್ನ!

ತಾಳ್ಮೆಯ ಶಕ್ತಿ- ಬುದ್ಧನ ಕಥೆ 
ಗೌತಮ ಬುದ್ಧ ಒಮ್ಮೆ ತನ್ನ ಶಿಷ್ಯರೊಂದಿಗೆ ಹಳ್ಳಿಯಿಂದ ನಗರಕ್ಕೆ ಹೋಗುತ್ತಿದ್ದ. ಪ್ರಯಾಣ ಮಾಡುವಾಗ ಎಲ್ಲರೂ ಆಯಾಸಗೊಂಡರು. ಆಯಾಸವನ್ನು ಹೋಗಲಾಡಿಸಲು, ಸರೋವರದ ಬಳಿ ನಿಂತು  ಬಾಯಾರಿಕೆಯನ್ನು ನೀಗಿಸಲು ಸರೋವರದಿಂದ ನೀರು ತರಲು ಶಿಷ್ಯನನ್ನು ಕೇಳಿದನು.

ಶಿಷ್ಯನು ಮಡಕೆಯಲ್ಲಿ ನೀರು ತರಲು ಸರೋವರದತ್ತ ಹೋದನು. ಆದರೆ ಸರೋವರದ ಬಳಿ ತಲುಪಿದಾಗ, ಕೆಲವರು ನೀರಿನಲ್ಲಿ ಬಟ್ಟೆ ಒಗೆಯುತ್ತಿರುವುದನ್ನು ನೋಡಿದನು ಮತ್ತು ಅದೇ ಸಮಯದಲ್ಲಿ ಕೆರೆಯ ದಡದಲ್ಲಿ ಎತ್ತಿನ ಬಂಡಿಯು ಸಹ ನಿಂತಿತು, ಇದರಿಂದ ಎಲ್ಲಾ ಮಣ್ಣು ನೀರಿನಲ್ಲಿ ಕರಗಿತು. ಸರೋವರ ಮಲಿನವಾಯಿತು. ನನ್ನ ಗುರುಗಳಿಗೆ ಕುಡಿಯಲು ನಾನು ಅಂತಹ ಕಲುಷಿತ ಮತ್ತು ಕೊಳಕು ನೀರನ್ನು ಹೇಗೆ ತೆಗೆದುಕೊಳ್ಳಲಿ ಎಂದು ಶಿಷ್ಯನು ಯೋಚಿಸತೊಡಗಿದನು. ಆದ್ದರಿಂದಲೇ ನೀರು ತೆಗೆದುಕೊಳ್ಳದೆ ಬರಿಗೈಯಲ್ಲಿ ವಾಪಸಾದನು.

ಶಿಷ್ಯನು ಗೌತಮ ಬುದ್ಧನಿಗೆ ಹೇಳಿದನು - 'ಗುರುದೇವ! ಕೆರೆಯ ನೀರು ತುಂಬಾ ಕೊಳಕಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ,' ಹಾಗೆನ್ನುತ್ತಲೇ ಗೌತಮ ಬುದ್ಧನಿಗೆ ಕೊಳಕು ನೀರಿಗೆ ಕಾರಣಗಳೆಲ್ಲವನ್ನೂ ಹೇಳಿದನು. ಗೌತಮ ಬುದ್ಧನು 'ತೊಂದರೆಯಿಲ್ಲ, ಸ್ವಲ್ಪ ಸಮಯ ಇಲ್ಲೇ ವಿಶ್ರಾಂತಿ ತೆಗೆದುಕೊಳ್ಳೋಣ' ಅಂದನು. ಸುಮಾರು ಅರ್ಧಗಂಟೆ ವಿಶ್ರಮಿಸಿದ ನಂತರ ಗೌತಮ ಬುದ್ಧ ಮತ್ತೆ ಅದೇ ಶಿಷ್ಯನಿಗೆ ನೀರು ತರಲು ಹೇಳಿದನು.
ಶಿಷ್ಯನು ಮತ್ತೆ ಪಾತ್ರೆಯೊಂದಿಗೆ ಸರೋವರಕ್ಕೆ ಹೋದನು. ಆದರೆ ಈ ಬಾರಿ ಕೆರೆಯ ನೀರಿನಲ್ಲಿ ಯಾವುದೇ ಚಲನವಲನ ಇರಲಿಲ್ಲ ಮತ್ತು ನೀರು ಸಹ ಸಂಪೂರ್ಣವಾಗಿ ಶುದ್ಧ ಮತ್ತು ಕುಡಿಯಲು ಯೋಗ್ಯವಾಗಿತ್ತು. ನೀರಿನ ಮೇಲೆ ಕಾಣುತ್ತಿದ್ದ ಮಣ್ಣು ಕೂಡ ಈಗ ಕೆರೆಯ ಕೆಳಭಾಗದಲ್ಲಿ ಕುಳಿತಿತ್ತು. ಶಿಷ್ಯನು ಪಾತ್ರೆಯಲ್ಲಿ ನೀರನ್ನು ತುಂಬಿಸಿ ಗೌತಮ ಬುದ್ಧನ ಬಳಿಗೆ ಹೋದನು.

Surya Gochar 2023: ಈ ರಾಶಿಗಳಿಗೆ ಲಾಭವೋ ಲಾಭ ತರುವ ಸೂರ್ಯ

ಪಾತ್ರೆಯಲ್ಲಿದ್ದ ಶುದ್ಧ ನೀರನ್ನು ನೋಡಿದ ಗೌತಮ ಬುದ್ಧ ಶಿಷ್ಯನಿಗೆ ಹೇಳುತ್ತಾನೆ - 'ನೋಡು, ಮಣ್ಣು ತನ್ನ ಜಾಗಕ್ಕೆ ಹೋಗಿ ಇಡೀ ನೀರು ಶುದ್ಧವಾಗಿ ಕುಡಿಯಲು ಯೋಗ್ಯವಾಯಿತು. ಶುದ್ಧ ನೀರು ಪಡೆಯಲು ನಾವು ಯಾವುದೇ ಪ್ರಯತ್ನ ಮಾಡಬೇಕಾಗಿಲ್ಲ. ಒಳ್ಳೆಯ ಸಮಯಕ್ಕಾಗಿ ಮಾತ್ರ ಕಾಯಬೇಕಾಗಿತ್ತು ಮತ್ತು ನಮಗೆ ಉತ್ತಮ ಮತ್ತು ಶುದ್ಧ ನೀರು ಸಿಕ್ಕಿತು. ಜೀವನದಲ್ಲಿ ಎಷ್ಟೇ ಕಷ್ಟದ ಸಮಯಗಳು ಬರಲಿ, ಆ ಕಷ್ಟದ ಸಮಯಗಳು ಕಳೆದುಹೋಗಲು ನಾವು ಸ್ವಲ್ಪ ಸಮಯ ಕಾಯುತ್ತಿದ್ದರೆ, ಮುಂಬರುವ ಸಮಯಗಳು ತಾನಾಗಿಯೇ ಒಳ್ಳೆಯದಾಗುತ್ತವೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಅದಕ್ಕಾಗಿಯೇ ಜೀವನದಲ್ಲಿ ತಾಳ್ಮೆ ಅಗತ್ಯ'.
ಗೌತಮ ಬುದ್ಧನ ಮಾತನ್ನು ಕೇಳಿದ ಶಿಷ್ಯನು ಈ ಅಮೂಲ್ಯವಾದ ಪಾಠವನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದನು.

Latest Videos
Follow Us:
Download App:
  • android
  • ios