ಕಾಶಿ ವಿಶ್ವನಾಥನಿಗೆ ಅಕ್ಬರಿ ಪೇಟ ತಯಾರಿಸಿ ತೊಡಿಸುವ ಘಿಯಾಸುದ್ದೀನ್!
ಕಾಶಿ ಸಾಕಷ್ಟು ಹಿಂದೂ ಮುಸ್ಲಿಂ ಗಲಭೆಗೆ ಸಾಕ್ಷಿಯಾಗಿದೆ. ಆದರೆ, ಮುಸ್ಲಿಂ ಕುಟುಂಬವೊಂದು 250 ವರ್ಷಗಳಿಂದಲೂ ಇಲ್ಲಿಯ ವಿಶ್ವನಾಥನಿಗಾಗಿ ಬಿಡಿಗಾಸಿಲ್ಲದೆ ಅಕ್ಬರಿ ಪೇಟ ಮಾಡಿ ತೊಡಿಸುತ್ತಿದೆ ಎಂಬುದು ಎಂಥ ಅಚ್ಚರಿಯ ವಿಷಯವಲ್ಲವೇ?
ಹೋಳಿ ಎಂದರೆ ಕಾಶಿಯಲ್ಲಿ ವಿಶ್ವನಾಥನಿಗೆ ವಿಶಾಲಾಕ್ಷಿಯೊಂದಿಗೆ ಮದುವೆಯ ಸಂಭ್ರಮ. ಭಕ್ತರು ಈ ದಿನ ಶಿವ ಪಾರ್ವತಿಯರ ವಿವಾಹ ಮಹೋತ್ಸವವನ್ನು ಆಚರಿಸುತ್ತಾರೆ. ಈ ಅಪರೂಪದ ದಿನದಂದು ಧರಿಸಲು ವಿಶ್ವನಾಥನಿಗಾಗಿ ವಿಶೇಷವಾಗಿ ಸಿದ್ಧವಾಗುತ್ತದೆ ಅದ್ಧೂರಿ ಪೇಟ. ಅದೂ ಅಂತಿಂಥದಲ್ಲ- ಅಪರೂಪದ ಅಕ್ಬರಿ ಪೇಟ. ವಿಶೇಷವೆಂದರೆ ಇದನ್ನು ತಯಾರಿಸುವುದಷ್ಟೇ ಅಲ್ಲ, ತೊಡಿಸುವುದು ಕೂಡಾ ಇದೇ ನಗರದ ನಿವಾಸಿ ಮೊಹಮ್ಮದ್ ಘಿಯಾಸುದ್ದೀನ್!
ಹೌದು, ಕಾಶಿ ವಿಶ್ವನಾಥನಿಗೆ ಸುಮಾರು 250 ವರ್ಷಗಳಿಂದಲೂ ಘಿಯಾಸುದ್ದೀನ್ ಕುಟುಂಬ ಅಕ್ಬರಿ ಪೇಟ ಮಾಡಿ ಪ್ರತಿ ವರ್ಷ ತೊಡಿಸುತ್ತಿದೆ. ಇದೇ ರೀತಿಯ ಅದ್ಭುತ ಪೇಟವನ್ನು ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನಿಗಾಗಿಯೂ ತಯಾರಿಸಲಾಗುತ್ತದೆ. ಆದರೆ, ಇವರಿಬ್ಬರ ಹೊರತಾಗಿ ಘಿಯಾಸುದ್ದೀನ್, ಮತ್ಯಾರಿಗೂ ಈ ಅಕ್ಬರಿ ಪೇಟ ತಯಾರಿಸಿ ಕೊಡುವುದಿಲ್ಲ ಎಂಬುದು ವಿಶೇಷ. ಅವರ ಕುಟುಂಬದ ಹಲವಾರು ತಲೆಮಾರುಗಳು ಇದನ್ನು ತಯಾರಿಸುತ್ತಿದ್ದಾರೆ ಮತ್ತು ಆದ್ದರಿಂದ ಅವರು ಅಕ್ಬರಿ ಪಾಗ್ರಿ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡುವ ಅವರು, 'ಕೋಟಿ ಕೊಟ್ಟರೂ ಅಕ್ಬರಿ ಪೇಟವನ್ನು ವಿಶ್ವನಾಥ ಹಾಗೂ ಕೃಷ್ಣನ ಹೊರತಾಗಿ ಬೇರಾರಿಗೂ ತಯಾರಿಸುವುದಿಲ್ಲ. ಈ ಪೇಟ ತಯಾರಿಕೆಗಾಗಿ ನಾನು ಒಂದು ರುಪಾಯಿಯನ್ನೂ ಪಡೆಯುವುದಿಲ್ಲ. ಏಕೆಂದರೆ ನಾನು ಕೂಡಾ ಇದನ್ನು ವಿಶ್ವನಾಥನಿಗೆ ಸೇವೆ ಎಂದು ಮಾಡುತ್ತೇನೆ' ಎನ್ನುತ್ತಾರೆ.
ಈ ಪೇಟವನ್ನು ಸೇವೆಯ ಮನೋಭಾವದಿಂದ ತಯಾರಿಸಲಾಗಿದೆಯೇ ಹೊರತು ಲಾಭ ಗಳಿಕೆಗಾಗಿ ಅಲ್ಲ ಮತ್ತು ಇದು ತನಗೆ ಮತ್ತು ಅವರ ಕುಟುಂಬಕ್ಕೆ ದೈವಿಕ ಆಶೀರ್ವಾದವನ್ನು ತರುತ್ತದೆ ಎಂಬುದು ಘಿಯಾಸಿದ್ದೀನ್ ನಂಬಿಕೆ.
Zodiac Nature: ಯಾವ ರಾಶಿಯ ಹುಡ್ಗೀರ ಸ್ವಭಾವ ಹೇಗಿರುತ್ತೆ?
ಅಕ್ಬರಿ ಪೇಟ ವಿಶೇಷತೆ
ಮೊಘಲ್ ಚಕ್ರವರ್ತಿ ಜಲಾಲುದ್ದೀನ್ ಅಕ್ಬರ್ ಧರಿಸಿದ್ದ ಆ ಕಾಲದ ಚಿಕಣಿ ಮತ್ತು ಇತರ ವರ್ಣಚಿತ್ರಗಳಲ್ಲಿ ನಾವು ನೋಡುವ ಪೇಟವನ್ನು ರಚಿಸುವ ಏಕೈಕ ಪೇಟ ಕಲಾವಿದ ಘಿಯಾಸುದ್ದೀನ್. ಸುಮಾರು 5 ಗಜಗಳಷ್ಟು ಬಟ್ಟೆಯಿಂದ ಈ ಪೇಟ ತಯಾರಿಸಲಾಗುತ್ತದೆ. ಈ ಪೇಟ ತಯಾರಿಕೆಗಾಗಿ ರೇಶ್ಮೆ ವಸ್ತ್ರ, ಝರಿ (ಚಿನ್ನ ಅಥವಾ ಬೆಳ್ಳಿಯ ದಾರ), ಗೋಟಾ ಮತ್ತು ರಟ್ಟನ್ನು ಬಳಸಲಾಗುತ್ತದೆ ಮತ್ತು ಒಂದು ಭಾಗವನ್ನು ಪೂರ್ಣಗೊಳಿಸಲು ಒಂದು ವಾರ ತೆಗೆದುಕೊಳ್ಳುತ್ತದೆ.
ಗಂಗಾನದಿಯ ತಟದಲ್ಲಿರುವ ವಿಶ್ವನಾಥ ದೇವಸ್ಥಾನದಲ್ಲಿ ಶಿವನಿಗೆ ಪೇಟವನ್ನು ಅರ್ಪಿಸುವ ಸಮಾರಂಭವನ್ನು ಫಲ್ಗುಣ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ನಡೆಸಲಾಗುತ್ತದೆ. ಘಿಯಾಸುದ್ದೀನ್ ತಯಾರಿಸುವ ವರ್ಷದ ಮೊದಲ ಟರ್ಬನ್ಅನ್ನು ವಿಶ್ವನಾಥನಿಗೆ ಅರ್ಪಿಸಲಾಗುತ್ತದೆ. ಉಳಿದಂತೆ ಮದುವೆ, ಮುಂಜಿಗಳಿಗೆ, ಮತ್ತಿತರೆ ವಿಶೇಷ ಕಾರ್ಯಕ್ರಮಗಳಿಗೆ ಪೇಟ ತಯಾರಿಸುವಲ್ಲಿ ಘಿಯಾಸುದ್ದೀನ್ ಕುಟುಂಬ ತೊಡಗಿಸಿಕೊಂಡಿದೆ.
'ನಮ್ಮ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಮುಖ್ಯಮಂತ್ರಿ ಆದಿತ್ಯ ಯೋಗಿನಾಥ್ಜೀ ಅವರು ನನ್ನ ಕೈಯಿಂದ ಮಾಡಿದ ಪೇಟವನ್ನು ಧರಿಸಬೇಕೆಂದು ನನ್ನ ಹೃತ್ಪೂರ್ವಕ ಹಾರೈಕೆ' ಎನ್ನುತ್ತಾರೆ ಘಿಯಾಸುದ್ದೀನ್.
Surya Grahan 2023 ದಿನಾಂಕ, ರಾಶಿಗಳ ಮೇಲೆ ಪರಿಣಾಮ ಮತ್ತಿತರೆ ವಿವರಗಳು..
ವಾರಣಸಿ
ವಾರಣಾಸಿಯು ಹಿಂದೂ ದೇವಾಲಯಕ್ಕಾಗಿ ಹೆಸರುವಾಸಿಯಾಗಿದ್ದರೂ, ನಗರದ ವ್ಯಕ್ತಿತ್ವದಲ್ಲಿ ಹಿಂದೂ-ಮುಸ್ಲಿಂ ಸಂಸ್ಕೃತಿ ಅಂತರ್ಗತವಾಗಿದೆ. ಬಿಸ್ಮಿಲ್ಲಾ ಖಾನ್ ಅವರಂತಹ ಹಲವಾರು ಪ್ರಸಿದ್ಧ ಮುಸ್ಲಿಂ ವ್ಯಕ್ತಿಗಳು ಇಲ್ಲಿನ ದೇವಸ್ಥಾನದಲ್ಲಿ ತಮ್ಮ ಅಭ್ಯಾಸವನ್ನು ಮಾಡುತ್ತಿದ್ದರು ಎಂಬುದು ವಿಶೇಷ.
ಬಾಬಾ ವಿಶ್ವನಾಥ್ಗೆ ಪೇಟವನ್ನು ಮಾಡುವುದು ಜವಾಬ್ದಾರಿ ಮತ್ತು ಗೌರವದ ವಿಷಯವಾಗಿದೆ ಎನ್ನುವ ಘಿಯಾಸಿದ್ದೀನ್ ತನ್ನ ಮುತ್ತಜ್ಜ ಹಾಜಿ ಚೆಡ್ಡಿ ಈ ಕಲೆಯನ್ನು ಲಕ್ನೋದಿಂದ ವಾರಣಸಿಗೆ ತಂದು ಇಲ್ಲಿ ವಿಶ್ವನಾಥನಿಗೆ ಪೇಟವನ್ನು ಅರ್ಪಿಸುವ ಕಾಯಕ ಆರಂಭಿಸಿದರು. ನಂತರದ ಎಲ್ಲ ತಲೆಮಾರುಗಳು ಇದನ್ನು ಸಂಪ್ರದಾಯದತೆ ಆಚರಿಸಿಕೊಂಡು ಬಂದಿದ್ದನ್ನು ನೆನೆಯುತ್ತಾರೆ. ಇದೀಗ ಘಿಯಾಸುದ್ದೀನ್ ಅವರ ನಾಲ್ವರು ಮಕ್ಕಳು ಕೂಡಾ ಪಾಗ್ರಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.