Asianet Suvarna News Asianet Suvarna News

ಕೃಷ್ಣನನ್ನು ಕೇವಲ ಪೂಜಿಸುವುದಲ್ಲ, ಆತನ ಸಂದೇಶ ಅಳವಡಿಸಿಕೊಂಡರೆ ಬದುಕಿನಲ್ಲಿ ಜಯ

ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ವಸುದೇವ-ದೇವಕಿಯ ಮಗನಾಗಿ ಜನಿಸಿದ ಕೃಷ್ಣನು ನಂದಗೋಪ-ಯಶೋಧೆಯ ಪಾಲನೆಯಲ್ಲಿ ಬೆಳೆದ ಜಗದ್ರಕ್ಷಕ. ದುಷ್ಟರ ಸಂಹಾರಕ್ಕೆ ಶಿಷ್ಟರ ಪೊರೆಯಲು ಅವತರಿಸಿದ ವಾಸುದೇವನು ತನ್ನ ಲೀಲಾವಿನೋದದಿಂದ ಜಗದ ಜನರಿಗೆ ಆನಂದ ಉಂಟುಮಾಡಿದ. ಕೃಷ್ಣನ ಜನ್ಮದಿನ ಕೃಷ್ಣಾಷ್ಟಮಿಯಾಗಿ ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸಲ್ಪಡುತ್ತದೆ.

Dont Just Worship Krishna, If You Adopt The Messages, You Will Win In life Vin
Author
Bengaluru, First Published Aug 19, 2022, 11:14 AM IST

 

-ಗಣೇಶ ಭಟ್‌ ಕುಮಟಾ

ಭಗವಾನ್‌ ಶ್ರೀಕೃಷ್ಣನ ವ್ಯಕ್ತಿತ್ವ ಅದ್ಭುತವಾದುದು. ಆತನ ಜೀವನದ ಪ್ರತಿ ಘಟನೆಯೂ ಅನುಸರಣೀಯ. ಅದಕ್ಕಾಗಿಯೇ ಮಾನವನು ಸಾವಿರಾರು ವರ್ಷಗಳಿಂದ ಕೃಷ್ಣನ ನಡೆ-ನುಡಿಗಳನ್ನು ಅನುಸರಿಸುತ್ತಾ ಬಂದಿದ್ದಾನೆ. ಆತನ ಬಾಲ್ಯಲೀಲೆಗಳಿಂದ ಹಿಡಿದು ನಿರ್ವಾಣ ತನಕದ ಘಟನೆಗಳು ಇಂದಿಗೂ ಸಹ, ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಸಮಾಧಾನ ಸೂಚಿಸುತ್ತವೆ. ದೇವರದೇವ ಮಾನವ ರೂಪದಲ್ಲಿ ಅವತರಿಸಿ, ಸಾಮಾನ್ಯ ಮಾನವರಲ್ಲಿ ಸಾಮಾನ್ಯವಾಗಿ ತನ್ನ ಲೀಲೆಯನ್ನು ತೋರುತ್ತಾ, ಅಲೌಕಿಕ ಸಾಮರ್ಥ್ಯವನ್ನು ಪ್ರಕಟಿಸಿದನು. ಬಾಲ್ಯದಲ್ಲಿ ಕೃಷ್ಣ ತನ್ನ ಗೊಲ್ಲ ಗೆಳೆಯರೊಂದಿಗೆ ಬೆಣ್ಣೆ ಕಳ್ಳತನ ಮಾಡುವುದು, ಗೋಪಿಕಾ ಸ್ತ್ರೀಯರ ಮೊಸರಿನ ಗಡಿಗೆಗಳನ್ನು ಒಡೆಯುವುದು ಬಾಲ್ಯದ ತುಂಟತನದಂತೆ ತೋರಿದರೂ, ಅದಕ್ಕಿಂತ ಮಿಗಿಲಾಗಿ ದುಷ್ಟಕಂಸನತನಕ ಹಾಲು-ಮೊಸರು ಬೆಣ್ಣೆ-ತುಪ್ಪ ತಲುಪದಂತೆ ಮಾಡುವ ಗಂಭೀರ ಯೋಜನೆಯಾಗಿತ್ತು. ಆತ ಕಂಸನನ್ನು ವಧಿಸಿದ ಮೇಲೆ ಮಥುರೆಯ ರಾಜನಾಗಬಹುದಿತ್ತು. ಆದರೆ ರಾಜ್ಯ ಮೋಹದಿಂದ ದೂರ ಉಳಿದು ಮಥುರೆಯ ರಾಜಸಿಂಹಾಸನದ ಮೇಲೆ ಕಂಸನ ತಂದೆ ಉಗ್ರಸೇನನನ್ನು ಕುಳ್ಳಿರಿಸಿದನು.

ಗೋವರ್ಧನ ಪರ್ವತ ಕತೆಯ ಸಂದೇಶ
ಸರ್ವ ಸಮರ್ಥನಾಗಿದ್ದರೂ ಸರ್ವರ ಸಹಭಾಗಿತ್ವವನ್ನು ಉಪಯೋಗಿಸಿಕೊಂಡು ಕಾರ್ಯನಿರ್ವಸುತ್ತಿದ್ದ ಶ್ರೀಕೃಷ್ಣ. ಗೋಪಾಲಕ ಕೃಷ್ಣ ತನ್ನ ಗೊಲ್ಲ ಸಹಚರರೊಂದಿಗೆ ಗೋವುಗಳನ್ನು ಮೇಯಿಸುತ್ತಾ ಗೋವರ್ಧನ ಪರ್ವತದತ್ತ ತೆರಳಿದದ. ಅಲ್ಲಿ ಗೋಪಿಕಾ ಸ್ತ್ರೀಯರು ಹಲವು ಬಗೆಯ ನೈವೇದ್ಯದ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಹಾಡುತ್ತಾ ಕುಣಿಯುತ್ತಾ ಇಂದ್ರೋತ್ಸವ ಆಚರಿಸುತ್ತಿದ್ದರು. ಶ್ರೀಕೃಷ್ಣ ಈ ಉತ್ಸವದ ಸಂಭ್ರಮಕ್ಕೆ ಕಾರಣ ಕೇಳಲಾಗಿ ಗೋಪಿಕಾ ಸ್ತ್ರೀಯರು, ‘ಇಂದು ದೇವತೆಗಳ ರಾಜ ಇಂದ್ರನ ಪೂಜೆ ನಡೆಯುವುದÜರಿಂದ ಪ್ರಸನ್ನಗೊಂಡ ದೇವರಾಜ ಇಂದ್ರನು ಮಳೆ ಸುರಿಸುವನು’ ಎಂದರು. ಅದಕ್ಕೆ ಕೃಷ್ಣ ಇಂದ್ರ ಅಷ್ಟುಶಕ್ತಿವಂತನೇ? ಅದಕ್ಕಿಂತ ಹೆಚ್ಚಿನ ಶಕ್ತಿವಂತ ನಮ್ಮ ಗೋವರ್ಧನ ಪರ್ವತನಿದ್ದಾನೆ. ಗೋವರ್ಧನ ಪರ್ವತದ ಕಾರಣದಿಂದಾಗಿಯೇ ಮಳೆಯಾಗುತ್ತದೆ. ಆದ್ದರಿಂದ ನಾವು ಗೋವರ್ಧನ ಪರ್ವತವನ್ನು ಪೂಜಿಸಬೇಕು ಎಂದಾಗ ಗೋಪಿಕಾ ಸ್ತ್ರೀಯರು ಒಪ್ಪಿದರು. ಇಂದ್ರನ ಪೂಜಿಸುವ ಬದಲಾಗಿ ಗೋವರ್ಧನ ಪರ್ವತ ಪೂಜಿಸುವ ತಯಾರಿ ನಡೆಯುತ್ತದೆ.

ಜನ್ಮಾಷ್ಟಮಿ 2022: ಪ್ರೀತಿ, ಯಶಸ್ಸು ಬೇಕೆಂದರೆ ಕೃಷ್ಣನಿಗೆ ಈ ಐದು ವಸ್ತು ನೀಡಿ

ಈ ಸಂಗತಿ ದೇವೆಂದ್ರನಿಗೂ ತಲುಪಿತು. ಕೋಪಗೊಂಡ ಇಂದ್ರ ಮೇಘಗಳಿಗೆ ಈ ಕೂಡಲೇ ಆ ಭಾಗಕ್ಕೆ ತೆರಳಿ ಮಳೆ ಸುರಿಸಿ ಜಲಪ್ರಳಯ ಉಂಟುಮಾಡಿ ಎಂದು ಆಜ್ಞಾಪಿಸಿದ. ಅದೇ ಪ್ರಕಾರವಾಗಿ ಮುಸಲಧಾರೆ ಸುರಿಯಿತು. ಗೋವರ್ಧನ ಪರ್ವತದ ತಪ್ಪಲಿನಲ್ಲಿ ನೆರೆದ ಸರ್ವರೂ ಭಯಭೀತರಾಗಿ ಕೃಷ್ಣನ ಮೊರೆ ಹೋದರು. ಈಗಾಗಲೇ ಪೂತನಿ, ಅಘಾಸುರ, ಧೇನುಕಾಸುರ ಮುಂತಾದವರನ್ನು ಸಂಹರಿಸಿದ ಕಾರಣ, ಕೃಷ್ಣನ ಅಲೌಕಿಕ ಶಕ್ತಿ ಎಲ್ಲರಿಗೂ ತಿಳಿದಿತ್ತು. ಕೃಷ್ಣ ಅಲ್ಲಿ ನೆರೆದ ಸರ್ವರಿಗೂ ಗೋವರ್ಧನ ಪರ್ವತನಿಗೆ ಶರಣು ಹೋಗುವಂತೆ ಹೇಳಿದ. ಅವನೇ ಎಲ್ಲರನ್ನೂ ರಕ್ಷಿಸುವನು ಎಂದು ಹೇಳಿ, ಕೃಷ್ಣ ತನ್ನ ಕಿರುಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿ, ಎಲ್ಲಾ ಗೋವುಗಳನ್ನು, ಗೋಪಾಲಕರನ್ನು ರಕ್ಷಿಸಿದ ಎಂದು ಹೇಳಲಾದರೂ, ಎಲ್ಲಾ ಗೋಪಾಲ ಬಾಲಕರಿಗೆ ತಮ್ಮ ತಮ್ಮ ದಂಡಗಳ ಮೂಲಕ ಪರ್ವತದ ಕೆಳಭಾಗವನ್ನು ಎತ್ತಿ ಹಿಡಿಯಲು ಹೇಳಿದ.

ಅವರೆಲ್ಲ ಅತ್ಯುತ್ಸಾಹದಿಂದ ತಮ್ಮ ತಮ್ಮ ದಂಡದ ಮೂಲಕ ಪರ್ವತದ ಅಡಿಯಲ್ಲಿ ಶಕ್ತಿ ಕೇಂದ್ರೀಕರಿಸಿದರು. ಯೋಗೇಶ್ವರ ಎಲ್ಲವನ್ನೂ ಮಾಡುವ ಸಾಮರ್ಥ್ಯ ಹೊಂದಿದ್ದರೂ ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕಾರ್ಯನಿರ್ವಸಿದ. ಇದರಿಂದ ಅವರೆಲ್ಲರಿಗೂ ಸಫಲತೆಯ ಭಾವನೆ ಉಂಟಾಗುವಂತೆ ಮಾಡಿದ. ಹಾಗೂ ಮೊದಲ ಬಾರಿಗೆ ಪ್ರಕೃತಿ ಪೂಜೆಗೆ ಕರೆ ನೀಡಿ ಕ್ರಾಂತಿ ಉಂಟುಮಾಡಿದ.

ಶ್ರೀಕೃಷ್ಣನ ಮಿತ್ರತ್ವದ ಮರ್ಮ
ಮಿತ್ರತ್ವದ ಮರ್ಮವನ್ನು ಶ್ರೀಕೃಷ್ಣನ ಹೊರತಾಗಿ ಮತ್ಯಾರು ಅರಿಯಲು ಸಾಧ್ಯ? ಕೃಷ್ಣನ ಬಾಲ್ಯ ಗೆಳೆಯ ಬಡ ಸುದಾಮ ಕೃಷ್ಣನ ಅರಮನೆ ತಲುಪಿದ. ಕೃಷ್ಣ ಸ್ವತಃ ಸ್ವಾಗತಿಸಿ ಆದರದಿಂದ ಸತ್ಕರಿಸಿದ. ಕೆಲ ದಿನ ತನ್ನ ಮನೆಯಲ್ಲಿಯೇ ಉಳಿಸಿಕೊಂಡು ಸನ್ಮಾನಿಸಿ ಬೀಳ್ಕೊಟ್ಟ. ಸುದಾಮ ಭಗವಂತನಿಗೆ ತಮ್ಮ ಸ್ಥಿತಿಯನ್ನು ನಿವೇದಿಸಿ ದಾರುಣ ಬಡತನ ಹೋಗಲಾಡಿಸಬಹುದಿತ್ತು. ಧನ-ಸಂಪತ್ತುಗಳನ್ನು ಕೇಳಿಕೊಳ್ಳಬಹುದಿತ್ತಲ್ಲ? ಎಂದು ಜನರು ಯೋಚಿಸಿದರು. ಕೃಷ್ಣನ ಲೀಲೆಯನ್ನು ನೋಡಿರಿ. ಸುದಾಮ ತನ್ನ ನಗರಕ್ಕೆ ಬಂದು ತಲುಪಿದ. ತನ್ನ ಗುಡಿಸಿಲಿನ ಸ್ಥಾನದಲ್ಲಿ ದೊಡ್ಡದೊಂದು ವೈಭವೋಪೇತವಾದ ಭವನ ನೋಡಿ ಆಶ್ವರ್ಯಗೊಂಡ. ಕೃಷ್ಣ ಮಿತ್ರಧರ್ಮವನ್ನು ಕೊನೆಯತನಕ ಪಾಲಿಸುತ್ತಾ, ತನ್ನ ಗೆಳೆಯ ಸುದಾಮನ ಸ್ವಾಭಿಮಾನಕ್ಕೆ ಚ್ಯುತಿಯಾಗದಂತೆ ಆತನ ಗಮನಕ್ಕೆ ತರದೆ, ಹೇಳದೆ ಆತನಿಗೆ ಉತ್ತಮ ಬದುಕನ್ನು ದಯಪಾಲಿಸಿದ್ದ. ಇಂತಹ ಕಲೆ ಕೃಷ್ಣನ ಹೊರತಾಗಿ ಇನ್ಯಾರಿಗೆ ಇರಲು ಸಾಧ್ಯ?

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಭಗವಂತನ ಆಶೀರ್ವಾದ ಹೀಗೆ ಪಡೆಯಿರಿ

ಅರ್ಜುನನಿಗೆ ಗೀತೋಪದೇಶ
ಕೌರವ-ಪಾಂಡವರ ನಡುವೆ ಯುದ್ಧ ಸಂಭವಿಸಬಾರದೆಂದು ಅಂತಿಮ ಕ್ಷಣದವರೆಗೂ ಪ್ರಯತ್ನಿಸಿದ. ಕೌರವ-ಪಾಂಡವರ ನಡುವೆ ಸಂಧಾನಕ್ಕೆ ಪ್ರಯತ್ನಿಸಿದ. ಆದರೆ ಯುದ್ಧವೇ ನಡೆಯಬೇಕೆಂದು ಉಭಯತ್ರರ ತೀರ್ಮಾನವಾಗಿ ಕುರುಕ್ಷೇತ್ರದಲ್ಲಿ ಸೇರಿದಾಗ, ಆ ಸಂದರ್ಭದಲ್ಲಿ ಅರ್ಜುನ ಶಸ್ತ್ರ ತ್ಯಜಿಸಿ ಈ ಯುದ್ಧ ಮಾಡಲಾರೆ ಎಂದಾಗಲೂ, ತನ್ನ ಜನರ ವಿರುದ್ಧವೇ ಹೋರಾಡುವಂತೆ ಅರ್ಜುನನಿಗೆ ಉಪದೇಶಿಸಿದ. ಸತ್ಯ ಮತ್ತು ಧರ್ಮದ ಪಾಲನೆಗಾಗಿ ಯುದ್ಧ ಸಂಘರ್ಷ ಅನಿವಾರ್ಯ ಎಂದು ಗೀತೋಪದೇಶದ ಮೂಲಕ ಉಪದೇಶಿಸಿದ. ಅದಿಂದು ಎಲ್ಲರಿಗೂ ಮಾರ್ಗದರ್ಶಕವಾಗಿದೆ.

ಯೋಗೇಶ್ವರ ಕೃಷ್ಣನ ಜೀವನ ದರ್ಶನವೊಂದು ಆದರ್ಶಜೀವನ ಶೈಲಿಯಾಗಿದೆ. ಅದನ್ನು ನಮ್ಮದಾಗಿಸಿಕೊಂಡು ಜೀವನವನ್ನು ಪೂರ್ಣತೆಯತ್ತ ತೆರಳುವಂತೆ ಮಾಡಬೇಕು. ಆತನ ಜೀವನದ ಒಂದೊಂದು ಪ್ರಸಂಗವೂ ನಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೂ ಸಮಾಧಾನ ತೋರುವುದು. ಕೃಷ್ಣನನ್ನು ಕೇವಲ ಪೂಜಿಸುವುದಲ್ಲ. ಆತನ ಚರಿತ್ರೆಯನ್ನು, ಆದರ್ಶಗಳನ್ನು ಪಾಲಿಸಲು ಪ್ರಯತ್ನಿಸಿದಾಗಲೇ ಕೃಷ್ಣ ಜನ್ಮಾಷ್ಟಮಿ ಹಬ್ಬ ಸಾರ್ಥಕವಾಗುವುದು.

Follow Us:
Download App:
  • android
  • ios