Asianet Suvarna News Asianet Suvarna News

ಅಮೆರಿಕದಲ್ಲಿ ಸಾಮೂಹಿಕ ಭಗವದ್ಗೀತೆ ಪಾರಾಯಣ; ಗಿನ್ನೆಸ್ ದಾಖಲೆ

ಶ್ರೀ ಕೃಷ್ಣ ಪರಮಾತ್ಮನು ಮನುಕುಲಕ್ಕೆ ಬೋಧಿಸಿದ ಭಗವದ್ಗೀತೆಯು ಸಹಸ್ರಾರು ಕಂಠಗಳಿಂದ ಕಂಠಪಾಠಗೊಂಡು, ನಿರಂತರ ನಾಲ್ಕು ಗಂಟೆ ಪಠಣ ಮಾಡುವ ಮೂಲಕ ಗಿನ್ನೆಸ್  ದಾಖಲೆ ನಿರ್ಮಾಣವಾಗಿದೆ. ಅಮೆರಿಕದ ಡಲ್ಲಾಸ್ ನಲ್ಲಿ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

Bhagavad Gita recitation by 2200 people enters Guinness Book of World Records skr
Author
Bangalore, First Published Aug 21, 2022, 9:31 AM IST

ಸನಾತನ ಧರ್ಮದ ಅತ್ಯಂತ ಶ್ರೇಷ್ಠ ಧರ್ಮಗ್ರಂಥವಾಗಿರುವ ಶ್ರೀಮದ್ ಭಗವದ್ಗೀತೆಯ ಎಲ್ಲಾ 700 ಶ್ಲೋಕಗಳನ್ನು ಕಂಠಪಾಠ ಮಾಡಿ, ಅದನ್ನು 2,200ಕ್ಕೂ ಅಧಿಕ ಮಂದಿ ಒಕ್ಕೊರಲಿನಲ್ಲಿ ಹೇಳುವ ಜಾಗತಿಕ ಕಾರ್ಯಕ್ರಮ ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿ ನಡೆದಿದ್ದು, ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ.

ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಆಗಸ್ಟ್ 13ರಂದು ಈ ಅಭೂತಪೂರ್ವ ಕಾರ್ಯಕ್ರಮ ನಡೆದಿದ್ದು, ಜಗತ್ತಿನ 30ಕ್ಕೂ ಅಧಿಕ ದೇಶಗಳ ಮಂದಿ ಇದರಲ್ಲಿ ಪಾಲ್ಗೊಂಡಿದ್ದು ವಿಶೇಷ. ಸನಾತನ ಧರ್ಮದ ವಿಶಿಷ್ಟ ಸಂದೇಶವನ್ನು ಜಗದಗಲಕ್ಕೆ ಪಸರಿಸುವ ಹಾಗೂ ಶ್ರೇಷ್ಠ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನದ ಭಾಗವಾಗಿ ಈ  ಸಾಮೂಹಿಕ ಕಂಠಪಾಠ ಪಠಣ ನಡೆದಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ.

ಪವಿತ್ರ ಧರ್ಮಗ್ರಂಥ ಭಗವದ್ಗೀತೆ. ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಕರ್ಮ, ಜ್ಞಾನದ ಕುರಿತಂತೆ ನೀಡಿದ ತಿಳಿವಳಿಕೆಯ ಭಾಗವಾಗಿರುವ ಈ ಶ್ಲೋಕಗಳನ್ನು ಕಂಠಪಾಠ ಮಾಡುವುದು ಜೀವನದಲ್ಲಿ ಅಳವಡಿಸಿಕೊಳ್ಳುವ ಒಂದು ಭಾಗ. ಭಗವದ್ಗೀತೆಯಲ್ಲಿ ತಿಳಿಸಿದ ಬೋಧನೆಯನ್ನೇ ಜೀವನದಲ್ಲೂ ಅಳವಡಿಸಿಕೊಂಡರೆ ನಿಜಕ್ಕೂ ಜೀವನ ಸಾರ್ಥಕವಾಗಿಬಿಡುತ್ತದೆ. ಮನೆಯಲ್ಲಿ, ಮನದಲ್ಲಿ, ಹಾಗೂ ದಿನನಿತ್ಯದ ಬದುಕಿನಲ್ಲಿ ಗೀತೆಯ ಸಾರವನ್ನು ಕಾಯಾ, ವಾಚಾ, ಮನಸಾ ಅನುಸರಿಸುವಂತಾಗಬೇಕು ಎಂಬ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಆಶಯದ ಫಲವಾಗಿ ಇಂಥದೊಂದು ಪ್ರಯತ್ನ ಅಮೆರಿಕದಲ್ಲಿ ನಡೆದಿದೆ.

ಡಲ್ಲಾಸ್‍ನಲ್ಲೇ ಏಕೆ ಈ ಕಾರ್ಯಕ್ರಮ?
'ಉಪನಿಷತ್‍ಗಳು ಮಾನವನ ಜೀವನದ ಗುರಿಗಳು ಮತ್ತು ಉದ್ದೇಶವನ್ನು ತಿಳಿಸಿದರೆ, ಭಗವದ್ಗೀತೆಯು ಅದನ್ನು ಸಾಧಿಸುವುದು ಮತ್ತು ಸಂತೃಪ್ತಿಯ ಜೀವನ ಸಾಗಿಸುವ ಮಾರ್ಗವನ್ನು ತಿಳಿಸಿಕೊಡುತ್ತದೆ. ಭಗವದ್ಗೀತೆಯು ತೋರಿಸಿಕೊಟ್ಟ ದಾರಿಯಲ್ಲೇ ಮನುಷ್ಯ ಶ್ರದ್ಧೆಯಿಂದ ನಡೆದಿದ್ದೇ ಆದರೆ ಮನುಷ್ಯನ ಜೀವನ ಸಾರ್ಥಕವಾಗುತ್ತದೆ' ಎಂದು ಬಲವಾಗಿ ನಂಬಿದವರು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು. ಇದಕ್ಕಾಗಿ ಮೈಸೂರಿನಲ್ಲಷ್ಟೇ ಅಲ್ಲದೆ, ಭಾರತದ ಹಲವೆಡೆ ಹಾಗೂ ಜಗತ್ತಿನ ಹಲವೆಡೆಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.

Weekly Love Horoscope: ಈ ರಾಶಿಯ ಪ್ರೇಮಿಗಳಿಗೆ ಈ ವಾರವಿಡೀ ಪ್ರೇಮಮಯ

ಸ್ವಾಮೀಜಿ ಅವರು ಡಲ್ಲಾಸ್‍ನ ಫ್ರಿಸ್ಕೊದಲ್ಲಿ 2015ರಲ್ಲಿ ಕಾರ್ಯಸಿದ್ಧಿ ಹನುಮಾನ್ ದೇವಸ್ಥಾನವನ್ನು ನಿರ್ಮಿಸಿದ್ದರು. ಮುಂದಿನ ವರ್ಷ ಮತ್ತೆ ಅಮೆರಿಕಕ್ಕೆ ಬಂದಾಗ ಈ ದೇವಸ್ಥಾನದಲ್ಲಿ ಕನಿಷ್ಠ 18 ಮಂದಿ ವಿದ್ಯಾರ್ಥಿಗಳು ಭಗವದ್ಗೀತೆಯ ಎಲ್ಲಾ 18 ಅಧ್ಯಾಯಗಳನ್ನು ಕಂಠಪಾಠ ಮಾಡಿ ಅದನ್ನು ಪಾರಾಯಣ ಮಾಡುವಂತಾಗಬೇಕು ಎಂಬುದು ಸ್ವಾಮೀಜಿ ಅವರ ಆಶಯವಾಗಿತ್ತು. ಅನಿವಾಸಿ ಭಾರತೀಯರು ಈ ಕರೆಗೆ ಅದು ಯಾವ ರೀತಿಯಲ್ಲಿ ಸ್ಪಂದಿಸಿದ್ದರು ಎಂದರೆ ಕೇವಲ 10 ತಿಂಗಳಲ್ಲಿ ಒಟ್ಟು 43 ಮಂದಿ ವಿದ್ಯಾರ್ಥಿಗಳು ಶ್ರೀಗಳ ಕೋರಿಕೆಯನ್ನು ಸಾಕಾರಗೊಳಿಸಿದ್ದರು! 
ಮುಂದೆ ಪ್ರತಿ ವರ್ಷ ಗೀತಾಯಜ್ಞದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಅದು ಈಗ ಸಾವಿರದ ಗಡಿ ದಾಟಿ ಮುನ್ನಡೆದಿದೆ. ಆನ್‍ಲೈನ್ ತರಗತಿಗಳ ಮೂಲಕವೇ ಗೀತಾ ಪಾರಾಯಣವನ್ನು ಕಲಿಯುವವರ ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ.
ಹೀಗೆ ಗೀತಾ ವಾಚನವನ್ನು ಮಾಡಿದವರಿಗೆ ಬೃಹತ್ ವೇದಿಕೆಯೊಂದನ್ನು ಒದಗಿಸಿಕೊಡಬೇಕು ಹಾಗೂ ಸಪ್ತ ಸಾಗರದಾಚೆ ಅದನ್ನು ಸಾಮೂಹಿಕ ಪಠಣದೊಂದಿಗೆ ಜಗತ್ತಿಗೆ ಒಂದು ಸಂದೇಶ ಸಾರಬೇಕು ಎಂಬ ಶ್ರೀಗಳ ಬಯಕೆಯಂತೆ ಈ ಬಾರಿ ಡಲ್ಲಾಸ್‍ನ ಅಲೆನ್ ಈವೆಂಟ್ ಸೆಂಟರ್‍ನಲ್ಲಿ ಆಗಸ್ಟ್ 13ರಂದು ಸಾಮೂಹಿಕ ಗೀತಾ ಕಂಠಪಾಠ ಪಠಣ ನಡೆಯಿತು. ಸ್ವಾಮೀಜಿ ಅವರ ಮಾರ್ಗದರ್ಶದನದಲ್ಲಿ ಭಗವದ್ಗೀತೆಯ ಎಲ್ಲಾ 18 ಅಧ್ಯಾಯಗಳ ಎಲ್ಲಾ 700 ಶ್ಲೋಕಗಳನ್ನು ಕಂಠಪಾಠ ಮಾಡಿಕೊಂಡು, ಪ್ರಮಾಣಪತ್ರ ಪಡೆದಂತಹ 5 ವರ್ಷದಿಂದ 80 ವರ್ಷದೊಳಗಿನ 1,500 ಮಂದಿ ಹಾಗೂ ಭಗವದ್ಗೀತೆಯ ಎಲ್ಲಾ ಶ್ಲೋಕಗಳನ್ನು ಕಂಠಪಾಠ ಮಾಡಿ, ಪ್ರಮಾಣಪತ್ರ ಪಡೆಯಲು ಬಾಕಿ ಇರುವ 700ಕ್ಕೂ ಅಧಿಕ ಮಂದಿ ಈ ಮಹಾನ್ ಗೀತಾಯಜ್ಞದಲ್ಲಿ ಪಾಲ್ಗೊಂಡರು. ಜತೆಗೆ ಅವರ ಮನೆಯವರು, ಸ್ನೇಹಿತರ ಸಹಿತ 7 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

14 ವಿದೇಶಿಗರಿಂದಲೂ ಗೀತಾ ಪಠಣ
ಸಹಸ್ರಗಳ ಗೀತಾ ಪಾರಾಯಣದಲ್ಲಿ 30 ದೇಶಗಳ 2,200ಕ್ಕೂ ಅಧಿಕ ಮಂದಿ ಸಾಮೂಹಿಕವಾಗಿ ಗೀತೆಯ ಪಠಣ ಮಾಡಿದರು. ಈ ಪೈಕಿ 14 ಮಂದಿ ವಿದೇಶೀಯರು ಇದ್ದರು ಎಂಬುದು ವಿಶೇಷ. ಪವಿತ್ರ ಗೀತೆಯ ಮಹತ್ವ ಅರಿತು, ಅದನ್ನು ಉಚ್ಛರಿಸುವ ಕಲೆಯನ್ನು ಕಲಿತು, ಶ್ಲೋಕಗಳನ್ನು ನಿರರ್ಗಳವಾಗಿ ಪಠಿಸಿದಂತಹ ಅವರ ಸಾಧನೆ ಕಂಡು ಜಗತ್ತು ಬೆರಗಾಯಿತು.

ಸುಮಾರು ನಾಲ್ಕು ಗಂಟೆಗಳ ಕಾಲ ಸುಶ್ರಾವ್ಯವಾಗಿ ಮೊಳಗಿದ ಗೀತಾ ಪಾರಾಯಣ ಸಭಿಕರನ್ನು ಮಾತ್ರವಲ್ಲದೆ, ನೂರಾರು ದೇಶಗಳಲ್ಲಿ ಆನ್‍ಲೈನ್ ಮೂಲಕ ನೇರವಾಗಿ ನೋಡುತ್ತಿದ್ದವರನ್ನು ಮಂತ್ರಮುಗ್ಧಗೊಳಿಸಿತು.

ವಾರ ಭವಿಷ್ಯ: ಕನ್ಯಾ ರಾಶಿಗೆ ಧನಲಾಭ, ವೃತ್ತಿ ಜೀವನ ಪ್ರಗತಿ

ಮಕ್ಕಳೇ ಪೋಷಕರಿಗೆ ಗುರುಗಳು!
ಭಗವದ್ಗೀತೆ ತೋರಿದ ಸಾರ್ಥಕ ಬದುಕಿನ ಹಾದಿ ಬಹಳ ವಿಶಾಲವಾದುದು. ಅಮೆರಿಕದಲ್ಲಿ ಇಂದು ನೂರಕ್ಕೂ ಅಧಿಕ ಮನೆಗಳಲ್ಲಿ ಮಕ್ಕಳೇ ಪೋಷಕರಿಗೆ ಗುರುಗಳಾಗಿಬಿಟ್ಟದ್ದಾರೆ. ಸ್ಥಳೀಯ ಕೇಂದ್ರಗಳು ಹಾಗೂ ಆನ್‍ಲೈನ್ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಂದ ಗೀತೆಯ ಪಠಣ ಕಲಿತ ಇಂತಹ ವಿದ್ಯಾರ್ಥಿಗಳು ಇಡೀ ಕುಟುಂಬಕ್ಕೇ ಮಾರ್ಗದರ್ಶನ ಮಾಡುವಂತಹ, ಮನೆಗಳಲ್ಲಿ ಗೀತೆಯ ಸಾರವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಿ ಸಫಲರಾಗುತ್ತಿದ್ದಾರೆ.

50 ಮನೆಗಳಲ್ಲಿ ಟಿವಿ ಬಂದ್
ಅಮೆರಿಕದಲ್ಲಿ ಭಗವದ್ಗೀತೆಯ ಪ್ರಭಾವ ಎಷ್ಟರ ಮಟ್ಟಿಗೆ ಆಗಿದೆ ಎಂದರೆ, ಗೀತೆಯನ್ನು ಕಂಠಪಾಠ ಮಾಡಿಕೊಂಡವರ ಮನೆಗಳ ಪೈಕಿ 50ಕ್ಕೂ ಅಧಿಕ ಮನೆಗಳಲ್ಲಿ ಟಿವಿಗಳು ಬಂದ್ ಆಗಿವೆ. ನಮಗೆ ಟಿವಿ ಬೇಡ ಎಂದು ಮಕ್ಕಳೇ ಪೋಷಕರಿಗೆ ಹೇಳುವಂತಹ ವಾತಾವರಣ ನಿರ್ಮಾಣವಾಗಿದೆ.

ಅಪಾಯ, ಅಪಾಯ! ಶನಿವಾರ ಈ ಏಳು ವಸ್ತುಗಳನ್ನು ತಪ್ಪಿಯೂ ಕೊಳ್ಬೇಡಿ!

ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ವಿಶೇಷತೆ
ಅಮೆರಿಕದ ಅತ್ಯಂತ ದೊಡ್ಡ ಹಿಂದೂ ದೇವಸ್ಥಾನಗಳಲ್ಲಿ ಒಂದು ಎಂಬ ಖ್ಯಾತಿ ಡಲ್ಲಾಸ್‍ನ ಫ್ರಿಸ್ಕೊದಲ್ಲಿ ಸ್ಥಾಪನೆಯಾಗಿರುವ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನಕ್ಕೆ ಇದೆ. 22 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಈ ದೇವಸ್ಥಾನದ ಸಭಾಂಗಣದ ವಿಸ್ತಾರವೇ 10 ಸಾವಿರ ಚದರ ಅಡಿಯಷ್ಟಿದೆ. ಮೂರು ಸಾವಿರ ಜನರು ಕುಳಿತು ಸಾಮೂಹಿಕ ಧ್ಯಾನ, ಪಠಣ ಅಥವಾ ಧಾರ್ಮಿಕ ಆಚರಣೆಗಳನ್ನು ನಡೆಸುವಂತಹ ವ್ಯವಸ್ಥೆ ಇಲ್ಲಿದೆ. ಹೀಗಾಗಿ ಸನಾತನ ಧರ್ಮ ಪ್ರಸಾರ, ಅನುಷ್ಠಾನದಲ್ಲಿ ಈ ದೇವಸ್ಥಾನ ತನ್ನದೇ ಆದ ಕೊಡುಗೆ ನೀಡುತ್ತಿದೆ.

Follow Us:
Download App:
  • android
  • ios