ನಾವು ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯ ಆರಂಭಿಸುವಾಗ ಮುಹೂರ್ತ ನೋಡಿಸುತ್ತೇವೆ. ಅಂತೆಯೇ ಈ ಮುಹೂರ್ತದಲ್ಲಿ ಕೆಲಸ ಆರಂಭಿಸಿದರೆ ದಿನ ಅಶುಭವಾಗಿದ್ದರೂ, ಫಲಿತಾಂಶ ಚೆನ್ನಾಗಿಯೇ ಇರುತ್ತದೆ. ಇದ್ಯಾವ ಮುಹೂರ್ತ?

ಮನೆ ಕೊಳ್ಳುವುದು, ವಿವಾಹ, ಪ್ರವಾಸ, ಶುಭ ಸಮಾರಂಭಗಳು ಸೇರಿದಂತೆ ಯಾವುದೇ ಒಳ್ಳೆ ಕಾರ್ಯಕ್ಕೆ ಮುಂಚೆ ಮುಹೂರ್ತ ನೋಡುವ ಅಭ್ಯಾಸ ನಮ್ಮಲ್ಲಿದೆ. ಶುಭ ಮುಹೂರ್ತದಲ್ಲಿ ಮಾಡಿದ ಕಾರ್ಯ ಶುಭಫಲವನ್ನೇ ಕೊಡುತ್ತದೆ ಎಂಬ ಕಾರಣಕ್ಕೆ ಉತ್ತಮ ಕಾರ್ಯಗಳಿಗೆ ಮುಹೂರ್ತ ನೋಡಿಸುತ್ತೇವೆ. ಮುಹೂರ್ತವು ಕಾರ್ಯದ ಯಶಸ್ಸನ್ನು ಹೆಚ್ಚಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯ. ಕೆಲವೊಮ್ಮೆ ಜನರು ಗಡಿಬಿಡಿಯಲ್ಲಿದ್ದು, ಮುಹೂರ್ತ ನೋಡಿಸದೆ ಕೆಲ ಕೆಲಸಗಳನ್ನು ಮಾಡಿ ಕಷ್ಟಕ್ಕೆ ಸಿಲುಕುತ್ತಾರೆ. 

Add Asianetnews Kannada as a Preferred SourcegooglePreferred

ಅಭಿಜಿತ್ ಮುಹೂರ್ತ(Abhijit Muhurat)
ಹೀಗೆ ಅತ್ಯಂತ ಶುಭ ಮುಹೂರ್ತವಾಗಿ ಗುರುತಿಸಿಕೊಂಡಿರುವುದು ಅಭಿಜಿತ್ ಮುಹೂರ್ತ. ಪ್ರತಿದಿನ ರಾಹು ಕಾಲ, ಗುಳಿಕ ಕಾಲ, ಯಮಗಂಡ ಕಾಲ ಇರುವಂತೆಯೇ ಅಭಿಜಿತ್ ಮುಹೂರ್ತ ಕೂಡಾ ಇರುತ್ತದೆ. ಈ ಮುಹೂರ್ತದ ವಿಶೇಷತೆ ಎಂದರೆ ಇದು ಎಲ್ಲ ರೀತಿಯ ಕೆಲಸಗಳಿಗೂ ಅತ್ಯಂತ ಶುಭವಾಗಿದೆ. ಅಭಿಜಿತ್ ಮುಹೂರ್ತವು ಪ್ರತಿದಿನ 48 ನಿಮಿಷಗಳ ಕಾಲ ಇರುತ್ತದೆ. ದಿನವು ಅಶುಭ(inauspicious)ವಾಗಿದ್ದಾಗ ಕೂಡಾ ಅಭಿಜಿತ್ ಮುಹೂರ್ತದಲ್ಲಿ ಕಾರ್ಯ ಕೈಗೊಂಡರೆ ಅದು ಯಶಸ್ಸನ್ನು ಕಾಣುತ್ತದೆ ಎನ್ನಲಾಗುತ್ತದೆ. 

ಅಭಿಜಿತ್ ಮುಹೂರ್ತವನ್ನು ಸಾಮಾನ್ಯವಾಗಿ 28ನೇ ನಕ್ಷತ್ರವಾದ ಅಭಿಜಿತ್ ನಕ್ಷತ್ರದೊಂದಿಗೆ ಬೆಸೆದು ಗೊಂದಲ ಮಾಡಿಕೊಳ್ಳಲಾಗುತ್ತದೆ. ಆದರೆ, ಇದು ಬೇರೆಯೇ ಆಗಿದ್ದು, ಅಭಿಜಿತ್ ಮುಹೂರ್ತಕ್ಕೆ ಎಲ್ಲ ದೋಷಗಳನ್ನು ನಿವಾರಣೆ ಮಾಡುವ ಸಾಮರ್ಥ್ಯ ಇದೆ. ಯಾವುದೇ ಕೆಲಸಕ್ಕೆ ಮತ್ತೇನೂ ನೋಡದೆ ಅಭಿಜಿತ್ ಮುಹೂರ್ತದ ಸಮಯ ತಿಳಿದು ಆರಂಭಿಸಿದರೂ ಸಾಕಾಗುತ್ತದೆ. 

ಅಭಿಜಿತ್ ಮುಹೂರ್ತವು ದಿನದ ಅತ್ಯುತ್ತಮ ಗಳಿಗೆಯಾಗಿದೆ. ಬೆಳಗ್ಗೆ ಸೂರ್ಯನ ಉದಯವಾದಾಗಿನಿಂದ ಆತ ಮುಳುಗುವವರೆಗೆ 15 ಮುಹೂರ್ತಗಳಿದ್ದು, ಅದರಲ್ಲಿ ಎಂಟನೆಯ ಮುಹೂರ್ತ ಇದಾಗಿದೆ. ಅಂದರೆ, ದಿನದ ಸರಿಯಾದ ಮಧ್ಯ ಗಳಿಗೆ ಅಭಿಜಿತ್ ಮುಹೂರ್ತ ಇರುತ್ತದೆ. ಯಾವುದಾದರೂ ಉತ್ತಮ ಕೆಲಸಕ್ಕೆ ಒಳ್ಳೆಯ ಮುಹೂರ್ತ ಸಿಗುತ್ತಿಲ್ಲವೆಂದಾದಾಗ ಅಭಿಜಿತ್ ಮುಹೂರ್ತದಲ್ಲೇ ಅದನ್ನು ಮಾಡಿ ಮುಗಿಸಿ ಇಲ್ಲವೇ ಕನಿಷ್ಠ ಆರಂಭಿಸಿದರೂ ಸಾಕು ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು. 

Temple Special: ಈ ದೇವಾಲಯದಲ್ಲಿ ಶಿವನಿಗೆ ಹಾಲು ನೀಡಿ ಮಜ್ಜಿಗೆ ಪ್ರಸಾದ ಪಡೆಯಿರಿ!

ಸಿಖ್ಖರ ಲಗ್ನಕ್ಕೆ ಅಭಿಜಿತ್ ಮುಹೂರ್ತ
ಸಿಖ್ ಗುರುಗಳಿಗೆ ಜ್ಯೋತಿಷ್ಯ ಚೆನ್ನಾಗಿ ಗೊತ್ತು. ಅವರಿಗೆ ಮುಹೂರ್ತದ ಕಾರಣದಿಂದಾಗುವ ಧನಾತ್ಮಕ ಹಾಗೂ ನಕಾರಾತ್ಮಕ ಫಲಿತಾಂಶಗಳ ಬಗ್ಗೆ ಅರಿವಿದೆ. ಅವರು ಸಾಮಾನ್ಯವಾಗಿ ಮುಹೂರ್ತ ನೋಡಿಯೇ ಕೆಲಸ ಆರಂಭಿಸುವುದು. ಅಭಿಜಿತ್ ಮುಹೂರ್ತವು ಸಾಮಾನ್ಯವಾಗಿ ಮಧ್ಯಾಹ್ನ 12 ಗಂಟೆಯ ಹೊತ್ತಿಗಿರುತ್ತದೆ. ಸಿಖ್ಖರ ವಿವಾಹಗಳು ಇದೇ ಸಮಯದಲ್ಲಿ ಆಗುತ್ತವೆ. ಅವರು ಈ ಅಭಿಜಿತ್ ಮುಹೂರ್ತಕ್ಕೆ ಆನಂದ್ ಕರಜ್ ಎಂದು ಹೇಳುತ್ತಾರೆ. ಈ ಮುಹೂರ್ತದಲ್ಲಿ ಅವರು ಶ್ರೀ ಗುರು ಗ್ರಂಥ ಸಾಹಿಬ್‌(Sri Guru Granth Sahib)ಗೆ ಸುತ್ತು ಬರುತ್ತಾರೆ. 

ಬ್ರಹ್ಮಮುಹೂರ್ತ(Brahma Muhurta)
ಅಭಿಜಿತ್ ಮುಹೂರ್ತಕ್ಕೆ ಸಮಗಟ್ಟುವ, ಆದರೆ, ರಾತ್ರಿ ಹೊತ್ತಿನಲ್ಲಿ ಇರುವ ಮತ್ತೊಂದು ಮುಹೂರ್ತವೆಂದರೆ ಬ್ರಹ್ಮ ಮುಹೂರ್ತ. ಈ ಸಂದರ್ಭದಲ್ಲಿ ಕೂಡಾ ಬಹುತೇಕ ಎಲ್ಲ ಶುಭ ಕಾರ್ಯಗಳನ್ನು ಆರಂಭಿಸಬಹುದಾಗಿದೆ. 

Rahu Kaal: ಈ ಕೆಲಸಗಳನ್ನು ರಾಹು ಕಾಲದಲ್ಲಿಯೇ ಮಾಡಿ!

ಶಿವ(Lord Shiva)ನು ತ್ರಿಪುರಾಸುರ ಎಂಬ ರಾಕ್ಷಸನ ತಲೆ ಕತ್ತರಿಸಿ ಸಂಹರಿಸಿದ್ದು ಅಭಿಜಿತ್ ಮುಹೂರ್ತದಲ್ಲಿ. ಹಿಂದೂ ಪುರಾಣ(Hindu mythology)ಗಳ ಪ್ರಕಾರ, ಅಭಿಜಿತ್ ಮುಹೂರ್ತಕ್ಕೆ ವಿಷ್ಣುವಿನ ಸಂಪೂರ್ಣ ಆಶೀರ್ವಾದ ಬಲವಿದ್ದು, ಆ ಸಮಯದಲ್ಲಿ ಆತನ ಸುದರ್ಶನ ಚಕ್ರವು ಎಲ್ಲ ದೋಷಗಳನ್ನು ನಿವಾರಿಸುತ್ತದೆ. ಇನ್ನು ವಿಷ್ಣುವಿನ ಏಳನೇ ಅವತಾರವಾಗಿ ರಾಮ(Lord Rama) ಜನಿಸಿದ್ದು ಅಭಿಜಿತ್ ಮುಹೂರ್ತದಲ್ಲಿ. ಆದರೆ, ಅಭಿಜಿತ್ ಮುಹೂರ್ತವು ಬುಧವಾರ(wednesday)ದ ದಿನ ಮಾತ್ರ ಅಷ್ಟೊಂದು ಒಳ್ಳೆಯದಲ್ಲ ಎನ್ನಲಾಗುತ್ತದೆ. ಜೊತೆಗೆ, ಆ ದಿನ ದಕ್ಷಿಣಕ್ಕೆ ಪ್ರಯಾಣ ಬೆಳೆಸುವುದು ಕೂಡಾ ಶ್ರೇಯಸ್ಕರವಲ್ಲ ಎಂಬ ನಂಬಿಕೆಯಿದೆ.