ದುನಿಯಾ ಖ್ಯಾತಿಯ ದುನಿಯಾ ರಶ್ಮಿ ವಿಭಿನ್ನ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಅದಕ್ಕೆ ಸಾಕ್ಷಿ ಆಗುತ್ತಿರುವುದು ‘ಕಾರ್ನಿ’ ಚಿತ್ರ. 

ಇಲ್ಲಿ ಅವರದ್ದು ಮೂಕಿ ಪಾತ್ರ. ಹೆಚ್ಚು ಕಡಿಮೆ ಒಂದೂವರೆ ವರ್ಷಗಳ ಗ್ಯಾಪ್ ನಂತರ ರಶ್ಮಿ, ಮತ್ತೆ ನಾಯಕಿ ಆಗಿ ಅಭಿನಯಿಸಿರುವ ಚಿತ್ರವಿದು. ಗೋವಿ ಆಲೂರು ನಿರ್ಮಾಣದಲ್ಲಿ ವಿನೋದ್ ಕುಮಾರ್ ನಿರ್ದೇಶಿಸಿದ ಈ ಚಿತ್ರ ಸೆಪ್ಟೆಂಬರ್ 14ಕ್ಕೆ ಬಿಡುಗಡೆ. ಈ ಚಿತ್ರ, ಬದುಕಿನ ಕುರಿತು ರಶ್ಮಿ ಮಾತನಾಡಿದ್ದು ಇಲ್ಲಿದೆ.

Add Asianetnews Kannada as a Preferred SourcegooglePreferred
  • ಸಿನಿಜರ್ನಿಯ ಇಷ್ಟು ವರ್ಷಗಳ ಪಯಣದಲ್ಲಿ ಇದೇ ಮೊದಲು ಮೂಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಹಾಗೆಯೇ ಫಸ್ಟ್‌ಟೈಮ್ ಆ್ಯಕ್ಷನ್ ಸನ್ನಿವೇಶಗಳಲ್ಲೂ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಆ ಕಾರಣಕ್ಕೆ ಚಿತ್ರ ನನ್ನ ಸಿನಿ ಪಯಣದಲ್ಲಿ ವಿಶೇಷವಾದ ಸಿನಿಮಾ.
  • ಅವಕಾಶಗಳಿಗಾಗಿ ನಾನೆಂದು ಹುಡುಕಿಕೊಂಡು ಹೋಗಿಲ್ಲ. ಅವಕಾಶಗಳು ಸಿಕ್ಕಂತೆ ಅಭಿನಯಿಸುತ್ತಾ ಬರುತ್ತಿದ್ದೇನೆ. ಹಾಗಾಗಿ ನನ್ನ ಸಿನಿ ಪಯಣದಲ್ಲಿ ‘ಬ್ರೇಕ್ ’ಎನ್ನುವುದು ಮಾಮೂಲು ಆಗಿದೆ. ಆ ಬಗ್ಗೆ ನಾನೆಂದು ತಲೆ ಕೆಡಿಸಿಕೊಂಡಿಲ್ಲ. ಅವಕಾಶಗಳಿಲ್ಲ, ಬ್ರೇಕ್ ಸಿಕ್ಕಿದೆ ಅಂತ ಸುಮ್ಮನೆ ಕುಳಿತು ಕೊಂಡಿಲ್ಲ. ಈ ಸಿನಿಮಾ ಒಪ್ಪಿಕೊಳ್ಳುವ ಮುಂಚಿನ ವಿರಾಮದ ದಿನಗಳಲ್ಲಿ ವರ್ಕೌಟ್‌ಗಾಗಿಯೇ ಹೆಚ್ಚು ಸಮಯ ಮೀಸಲಿಟ್ಟಿದ್ದೇನೆ. ಆ ಹೊತ್ತಲ್ಲಿ ಸಿಕ್ಕ ಚಿತ್ರವೇ ಇದು.
  • ನಿರ್ದೇಶಕರು ಬಂದು ಕತೆ ಹೇಳಿದರು. ಕತೆ ಇಂಟರೆಸ್ಟಿಂಗ್ ಆಗಿತ್ತು.ಅದಕ್ಕಿಂತ ನನಗೆ ಕುತೂಹಲ ಮೂಡಿಸಿದ್ದು ನನ್ನ ಪಾತ್ರ. ನೀವು ಇಲ್ಲಿ ಮೂಕಿ ಆಗಿ ಅಭಿನಯಿಸಬೇಕು. ಯಾಕಂದ್ರೆ ಅದೊಂದು ಮೂಕಿ ಪಾತ್ರ ಅಂತ ಹೇಳಿದ್ರು. ನಿಜಕ್ಕೂ ಸವಾಲು ಎನಿಸಿತು. ಆದರೂ ಒಪ್ಪಿಕೊಂಡೆ. ನಿರ್ದೇಶಕರು ನಿರೀಕ್ಷಿಸಿದಂತೆ, ಒಂದು ಪಾತ್ರಕ್ಕೆ ನಾನಂದು ಕೊಂಡು ಅಭಿನಯಿಸುವ ಹಾಗೆ ಈ ಪಾತ್ರವೂ ತೆರೆ ಮೇಲೆ ಮೂಡಿ ಬಂದಿದೆ.

'ಪ್ರತಿ ಸಿನಿಮಾದ ಪ್ರತಿ ಪಾತ್ರವೂ ನನಗೆ ಮುಖ್ಯ. ಹಾಗಂದುಕೊಂಡೇ ಇಲ್ಲಿ ತನಕ ಅಭಿನಯಿಸುತ್ತಾ ಬಂದಿದ್ದೇನೆ. ಹಲವು ಪಾತ್ರಗಳಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಹಾಗೆಯೇ ಕೆಲವು ಪಾತ್ರಗಳಿಗೆ ಮಿಶ್ರ ಪ್ರತಿಕ್ರಿಯೆಯೂ ಲಭ್ಯವಾಗಿದೆ. ಅಷ್ಟಾಗಿಯೂ ಈ ಏರಿಳಿತಗಳು ಯಾಕಾಗಿ ಬರುತ್ತವೋ ನನಗೆ ಗೊತ್ತಿಲ್ಲ. ಎಲ್ಲವನ್ನು ಸಮವಾಗಿ ಸ್ವೀಕರಿಸುತ್ತಾ ಬರುತ್ತಿದ್ದೇನೆ. ಎಲ್ಲದಕ್ಕೂ ಪ್ರೇಕ್ಷಕರ ಬೆಂಬಲ, ದೇವರ ಆಶೀರ್ವಾದವೇ ಮುಖ್ಯ' - ದುನಿಯಾ ರಶ್ಮಿ