ಇದು ರಾಜರಥದ ಹೈಲೆಟ್ಸ್!
ಅನೂಪ್ ಭಂಡಾರಿ ಹಾಗೂ ನಿರೂಪ್ ಭಂಡಾರಿ ಕಾಂಬಿನೇಷನ್ನ ‘ರಾಜರಥ’ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಅವಂತಿಕಾ ಶೆಟ್ಟಿ ನಾಯಕಿಯಾಗಿ ನಟಿಸಿರುವ, ಆರ್ಯ ಮುಖ್ಯ ಪಾತ್ರದಲ್ಲಿ
ಕಾಣಿಸಿಕೊಂಡಿರುವ ಈ ಚಿತ್ರ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಮಾತನಾಡಿದ್ದಾರೆ.
ಬೆಂಗಳೂರು (ಮಾ.23): ಅನೂಪ್ ಭಂಡಾರಿ ಹಾಗೂ ನಿರೂಪ್ ಭಂಡಾರಿ ಕಾಂಬಿನೇಷನ್ನ ‘ರಾಜರಥ’ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಅವಂತಿಕಾ ಶೆಟ್ಟಿ ನಾಯಕಿಯಾಗಿ ನಟಿಸಿರುವ, ಆರ್ಯ ಮುಖ್ಯ ಪಾತ್ರದಲ್ಲಿ
ಕಾಣಿಸಿಕೊಂಡಿರುವ ಈ ಚಿತ್ರ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಮಾತನಾಡಿದ್ದಾರೆ.
ಈ ಚಿತ್ರದಲ್ಲಿ ‘ರಾಜರಥ’ ಯಾರು? ಇದರ ಕತೆ ಏನು?
ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಬಸ್ ಹೆಸರು ರಾಜರಥ. ಆ ಹೆಸರಿನಿಂದಲೇ ಕತೆ ಶುರುವಾಗುವುದರಿಂದ ಚಿತ್ರಕ್ಕೆ ರಾಜರಥ ಎನ್ನುವ ಹೆಸರಿಡಲಾಗಿದೆ. ಒಂದು ಬಸ್. ಆ ಬಸ್ನ ಹಿಂದೆ ಬರುವ ಅಭಿ ಮತ್ತು ಮೇಘಾ ಎನ್ನುವ ಪಾತ್ರಗಳ ಪ್ರೇಮವೇ ಈ ಚಿತ್ರದ ಕತೆ. ಇದರ ಜತೆಗೆ ಆರ್ಯ ಅವರದ್ದು ಒಂದು ಟ್ರ್ಯಾಕ್ ಇದೆ. ಅದು ತುಂಬಾ ಆಸಕ್ತಿಕರವಾಗಿದೆ. ನಾಯಕಿ, ನಾಯಕಿ, ಬಸ್ ಮತ್ತು ಆರ್ಯ ಸುತ್ತ ಕತೆ ಸಾಗುತ್ತದೆ. ಈ ಕತೆಯಲ್ಲಿ ಬರುವ ಬಸ್ ತೆಲುಗಿನಲ್ಲಿ ರಾಣಾ ದಗ್ಗುಬಾಟಿ ವಾಯ್ಸ್ನಲ್ಲಿ ಮಾತನಾಡಿದರೆ, ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ದನಿಯಲ್ಲಿ ಮಾತನಾಡುತ್ತದೆ.
ನಿಮಗೆ ರಾಜರಥ ಚಿತ್ರದ ಮೂಲ ಹೊಳೆದಿದ್ದು ಹೇಗೆ?
ನಾನು ಯಾವುದೋ ಒಂದು ಸಿನಿಮಾ ನೋಡುತ್ತಿದ್ದಾಗ ಅದರಲ್ಲಿ ಬಸ್ ಹಾಗೆ ಬಂದು ಹೀಗೆ ಪಾಸ್ ಆಯಿತು. ಆ ಸೀನ್ ಪದೇ ಪದೇ ಬರುತ್ತಲೇ ಇತ್ತು. ಚಿತ್ರದ ಜತೆಗೆ ನನಗೆ ಆ ಬಸ್ ಕಾಡಿತು. ಹಾಗಾದರೆ ಬಸ್ ಅನ್ನೇ ಕ್ಯಾರೆಕ್ಟರ್ ಮಾಡಿ ಕತೆ ಮಾಡುವುದಕ್ಕೆ ಸಾಧ್ಯವೇ? ಎನ್ನುವ ಪ್ರಶ್ನೆ ಹುಟ್ಟಿಕೊಂಡಾಗ ಜೀವ ಪಡೆದಿದ್ದು ‘ರಾಜರಥ’.
ಈ ಕತೆಗೆ ಆರ್ಯ ಅವರೇ ಯಾಕೆ ಬೇಕಿತ್ತು? ಕನ್ನಡದವರು ಸಿಗಲಿಲ್ಲವೇ?
ಕತೆ ಮಾಡಿಕೊಳ್ಳುವಾಗ ನಾನು ಆರ್ಯ ಅವರಿಂದ ಮಾತ್ರ ಈ ಮಾಡಿಸುವುದಕ್ಕೆ ಸಾಧ್ಯ ಅಂತ ನಿರ್ಧಾರ ಮಾಡಿರಲಿಲ್ಲ. ಸಾಕಷ್ಟು ಹೆಸರು ಬಂದು ಹೋದವು. ಆದರೆ, ನಮಗೆ ಯಾರೂ ಸೂಕ್ತ ಅನಿಸದಿದ್ದಾಗ ಆರ್ಯ ನೆನಪಾಗಿದ್ದು. ಆ ಕಾರಣಕ್ಕೆ ಅವರನ್ನು ಈ ಚಿತ್ರಕ್ಕೆ ಕರೆತಂದಿ ದ್ದೇವೆ. ಜತೆಗೆ ಚಿತ್ರದಲ್ಲೊಂದು ಪವರ್ ಫುಲ್ ಪಾತ್ರ ಇದೆ. ಅಂಥ ಪಾತ್ರ ಮಾಡುವುದಕ್ಕೆ ಆರ್ಯ ಅವರೇ ಸೂಕ್ತ ಎಂಬುದನ್ನು ನೀವು ಸಿನಿಮಾ ನೋಡಿದಾಗ ಗೊತ್ತಾಗುತ್ತದೆ.
ಚಿತ್ರದಲ್ಲಿ ನಟಿಸಿರುವ ಕಲಾವಿದರ ಕುರಿತು ಹೇಳುವುದಾದರೆ?
ನಿರೂಪ್ ಇಲ್ಲಿ ಅಭಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವಂತಿಕಾ ಶೆಟ್ಟಿ ಅವರು ಮೇಘಾ ಎನ್ನುವ ಪಾತ್ರ ಮಾಡಿದ್ದಾರೆ. ಇವರ ಜತೆಗೆ ರವಿಶಂಕರ್ ಅವರು ಇದುವರೆಗೂ ಕಾಣಿಸಿಕೊಂಡಿರದ ಪಾತ್ರ ಮಾಡಿದ್ದಾರೆ. ಅವರ ಕ್ಯಾರೆಕ್ಟರ್ ಹೊಸದಾಗಿದೆ. ಎಲ್ಲರ ಪಾತ್ರಗಳು ಚೆನ್ನಾಗಿವೆ.
ರಾಜರಥ ನೋಡಲೇಬೇಕು ಎನ್ನುವುದಕ್ಕೆ ನೀವು ಕೊಡುವ ಕಾರಣಗಳೇನು?
ಯಾವುದೇ ರೀತಿಯಲ್ಲಿ ಬೇಸರ ಮೂಡಿಸದೆ ಮನರಂಜನೆ ಬೇಕು ಎಂದುಕೊಳ್ಳುವವರು, ತಾಂತ್ರಿಕತೆಯಲ್ಲೂ ಶ್ರೀಮಂತಿಕೆ ಬಯಸುವವರು, ಇಂಟರ್ನ್ಯಾಷನಲ್ ಸೌಂಡ್ ಕ್ವಾಲಿಟಿ ಕೇಳುವವರು ಈ ಚಿತ್ರವನ್ನು ನೋಡಬಹುದು.
ಹಳೆಯ ಹಾಡುಗಳನ್ನು ಹೊಸದಾಗಿ ಬಳಸುವುದು ನಿಮ್ಮ ಸೆಂಟಿಮೆಂಟಾ?
ನನಗೆ ವೈಯಕ್ತಿಕವಾಗಿ ಆ ರೀತಿಯ ಸೆಂಟಿಮೆಂಟ್ ಇಲ್ಲ. ಕತೆಗೆ ಸೂಕ್ತ ಅಂತ ಅನಿಸಿದಾಗ ಬಳಸಿಕೊಂಡಿರುವೆ. ‘ರಂಗಿತರಂಗ’ ಕತೆ ಮಾಡುವಾಗಲೇ ‘ಡೆನ್ನಾನ ಡೆನ್ನಾನ’ ಹಾಡು ನೆನಪಾಯಿತು. ಜತೆಗೆ ಅದು ಕತೆಗೆ ಅಗತ್ಯವಿತ್ತು. ಹಾಗೆ ‘ರಾಜರಥ’ ಸಿನಿಮಾ ಮಾಡುವ ಹೊತ್ತಿಗೆ ‘ಮುಂದೆ ಬನ್ನಿ’ ಹಾಡು ನೆನಪಾಯಿತು. ನನ್ನ ಮುಂದಿನ ಸಿನಿಮಾಗಳ ಕತೆಗಳಿಗೆ ಇಂತ ಕ್ಲಾಸಿಕ್ ಹಾಡುಗಳು ಸೂಕ್ತ ಅನಿಸಿದರೆ ಬಳಸಿಕೊಳ್ಳುತ್ತೇನೆ.
ನಿಮ್ಮ ಮುಂದಿನ ಚಿತ್ರಗಳ ಕುರಿತು ಹೇಳುವುದಾದರೆ?
ಪುನೀತ್ ರಾಜ್ಕುಮಾರ್ ಚಿತ್ರ ಮಾಡಬೇಕಿದೆ. ಆದರೆ, ಯಾವಾಗ ಸೆಟ್ಟೇರುತ್ತೋ ಗೊತ್ತಿಲ್ಲ. ಯಾಕೆಂದರೆ ‘ರಾಜರಥ’ ಚಿತ್ರದ ಬಿಡುಗಡೆ ತಡವಾಗಿದ್ದರಿಂದ ನಮ್ಮ ಪ್ಲಾನ್ಗಳು ಹಿಂದೆ ಮುಂದೆ ಆಗಿವೆ. ಈ
ಚಿತ್ರದ ಹೊರತಾಗಿ ಬೇರೆ ಏನೂ ಇಲ್ಲ.