ಮೇಘನಾ ರಾಜ್ ನಿರ್ಮಾಪಕಿ ಆಗಬೇಕಿದ್ದನ್ನು ತಪ್ಪಿಸಿದವರು ಯಾರು?
ನಿರ್ದೇಶಕ ಮಹೇಶ್ ನನಗೆ ಕತೆ ಹೇಳಿದಾಗ ನಾನೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತೇನೆ ಎಂದಿದ್ದೆ. ನಾನು ಆಗ ನಾಯಕಿ ಪ್ರಧಾನ ಸಿನಿಮಾ ಮಾಡುವ ಯೋಚನೆ ಇತ್ತು. ಅದಕ್ಕೆ ನನ್ನ ತಂದೆ, ತಾಯಿ ಕೂಡ ಒಪ್ಪಿಗೆ ಕೊಟ್ಟರು. ಆದರೆ ಕೊನೆ ಹಂತದಲ್ಲಿ ನಿರ್ಮಾಪಕಿಯಾಗಲು ಆಗಲಿಲ್ಲ ಎಂದು ಮೇಘನಾ ರಾಜ್ ಹೇಳಿದ್ದಾರೆ.
ಈ ಚಿತ್ರಕ್ಕೆ ನಾನು ನಟಿ ಮಾತ್ರವಲ್ಲ, ನಿರ್ಮಾಪಕಿಯೂ ಆಗಬೇಕಿತ್ತು... - ಹೀಗೆ ಹೇಳಿಕೊಂಡಿದ್ದು ನಟಿ ಮೇಘನಾ ರಾಜ್. ಅವರ ಈ ಮಾತು ‘ಎಂಎಂಸಿಎಚ್’ ಚಿತ್ರದ ಕುರಿತು. ಮುಸ್ಸಂಜೆ ಮಹೇಶ್ ನಿರ್ದೇಶಿಸಿ, ಎಸ್ .ಪುರುಷೋತ್ತಮ್, ಜಾನಕಿರಾಮ್ ಹಾಗೂ ಅರವಿಂದ್ ಜಂಟಿ ನಿರ್ಮಾಣದ ಚಿತ್ರವಿದು.
ಸಂಯುಕ್ತಾ ಹೊರನಾಡು, ಪ್ರಥಮಾ ಹಾಗೂ ದೀಪ್ತಿ(ನಕ್ಷತ್ರ), ರಾಗಿಣಿ ಮುಖ್ಯ ಪಾತ್ರ ಮಾಡಿದ್ದಾರೆ. ಇಷ್ಟಕ್ಕೂ ಇಂಥ ಬಿಗ್ ಬಜೆಟ್ ಚಿತ್ರವನ್ನು ತಾನೇ ನಿರ್ಮಾಣ ಮಾಡುವುದಕ್ಕೆ ಮೇಘನಾ ರಾಜ್ ಹೊರಟಿದ್ದೇಕೆ? ಅವರೇ ಕೊಡುವ ಐದು ಕಾರಣಗಳು ಇಲ್ಲಿವೆ.
1. ನಿರ್ದೇಶಕ ಮುಸ್ಸಂಜೆ ಮಹೇಶ್ ಮಾಡಿಕೊಂಡಿದ್ದ ಕತೆ. ಒಂದು ಸಾಲಿನಲ್ಲೇ ಕತೆ ಇಂಪ್ರೆಸ್ ಆಗಿದ್ದು. ಒಂದು ಅಪರೂಪದ ಕ್ರೈಮ್ ಕತೆ. ನೈಜ ಘಟನೆಗಳ ಸಿನಿಮಾ.
2. ಈ ಚಿತ್ರಕ್ಕೆ ಕಲಾವಿದರನ್ನು ಸಂಯೋಜಿಸಿರುವ ರೀತಿ. ಕನ್ನಡ ಚಿತ್ರರಂಗದಲ್ಲಿ ಹೀಗಾಗಲೇ ತಮ್ಮದೇ ಛಾಪು ಮೂಡಿಸಿರುವ ಹಿರಿಯ ನಟಿಯರ ಮಕ್ಕಳೇ ಈ ಚಿತ್ರದ ಪಿಲ್ಲರ್ಗಳಾಗಿದ್ದು.
3. ಒಂದೇ ಭಾಷೆಗೆ ಸೀಮಿತವಾಗಿರದ ಕತೆ. ಕನ್ನಡದ ಜತೆಗೆ ತೆಲುಗು ಪ್ರೇಕ್ಷಕರಿಗೂ ಹತ್ತಿರವಾಗುವಂತಹ ಘಟನೆಗಳನ್ನು ಒಳಗೊಂಡಿದ್ದು.
4. ಕರ್ನಾಟಕದ ನಾಲ್ಕು ಜಿಲ್ಲೆಗಳ, ನಾಲ್ಕು ಮಂದಿ ಹೆಣ್ಣು ಮಕ್ಕಳ ಪಯಣ ಇಲ್ಲಿದೆ. ಹೀಗಾಗಿ ಇಡೀ ರಾಜ್ಯ ತಿರುಗಿ ನೋಡುವಂತೆ ಕತೆಯ ಹಿನ್ನೆಲೆ ಇತ್ತು.
5. ಪ್ರಸ್ತುತ ಬೆಳವಣಿಗಳಿಗೆ ಹತ್ತಿರವಾಗಿರುವ ಪಾತ್ರಗಳು. ನಾಲ್ವರು ಹುಡುಗಿಯರು, ಒಬ್ಬ ಪೊಲೀಸ್ ಅಧಿಕಾರಿ. ತುಂಬಾ ವಿಶೇಷವಾಗಿತ್ತು.
ನಿರ್ದೇಶಕ ಮಹೇಶ್ ನನಗೆ ಕತೆ ಹೇಳಿದಾಗ ನಾನೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತೇನೆ ಎಂದಿದ್ದೆ. ನಾನು ಆಗ ನಾಯಕಿ ಪ್ರಧಾನ ಸಿನಿಮಾ ಮಾಡುವ ಯೋಚನೆ ಇತ್ತು. ಅದಕ್ಕೆ ನನ್ನ ತಂದೆ, ತಾಯಿ ಕೂಡ ಒಪ್ಪಿಗೆ ಕೊಟ್ಟರು. ಈ ನಡುವೆ ನಮಗೆ ಹತ್ತಿರವಾದವರು ತೀರಿಕೊಂಡರು. ಅದೇ ಚಿಂತೆಯಲ್ಲಿದ್ದ ನಮಗೆ ಸಿನಿಮಾ ನಿರ್ಮಿಸುವ ಉತ್ಸಾಹ ಇರಲಿಲ್ಲ. ಚಿತ್ರತಂಡಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನಾನು ಹಿಂದೆ ಸರಿದೆ. ಒಂದು ಒಳ್ಳೆಯ ಕತೆಗೆ ನಾನು ನಿರ್ಮಾಪಕಿ ಆಗದಿದ್ದರೂ ಆ ಚಿತ್ರದ ನಾಯಕಿ ಆಗಿದ್ದೇನೆ. ಖುಷಿ ಇದೆ.
- ಮೇಘನಾ ರಾಜ್