'ಲಕ್ಷ್ಮಿ ಬಾರಮ್ಮ' ಚಿನ್ನುವಿಗೆ ಶೇ.70 ಕಣ್ಣು ಕಾಣಿಸೋಲ್ವಂತೆ!
'ಲಕ್ಷೀ ಬಾರಮ್ಮ...'ವನ್ನು ಹೆಂಗಳೆಯರು ಮನೆಗೆ ಪ್ರೀತಿಯಿಂದ ಬರ ಮಾಡಿಕೊಳ್ಳುತ್ತಾರೆ. ಅರ್ಧ ಗಂಟೆ ಸಂಪೂರ್ಣ ಮನೋರಂಜನೆ ನೀಡುವ ಈ ಸೀರಿಯಲ್ನ ಚಿನ್ನು-ಗೊಂಬೆಯರಲ್ಲಿ ಚಿನ್ನುವಿಗೆ ನಿಜಜೀವನದಲ್ಲೂ ನೋವು ತಪ್ಪಿದ್ದಲ್ಲ. ಏನದು?
ಚಿನ್ನು -ಗೊಂಬೆ ಕಣ್ಣಲ್ಲಿ ನೀರು ಬಂದರೆ, ಈ ಹೆಂಗಳೆಯರಿಗೂ ಕಣ್ಣೀರು ತಪ್ಪಿದ್ದಲ್ಲ. ತಮ್ಮನೆ ಮಗಳಂತೆ ನೋಡಿಕೊಳ್ಳುವ ಈ ಅಕ್ಕ-ತಂಗಿಯರ ನೋವು ಧಾರಾವಾಹಿ ಪ್ರಿಯರಿಗೂ ನೋವೇ. ಅದರಲ್ಲಿಯೂ ಹಳ್ಳಿ ಮುಗ್ಧೆ ಚಿನ್ನುವೆಂದರೆ ತುಸು ಹೆಚ್ಚಿನ ಅಭಿಮಾನ. ಒಂದರ್ಧ ಗಂಟೆ ಸಂಪೂರ್ಣ ಮನೋರಂಜನೆ ನೀಡುವ 'ಲಕ್ಷ್ಮಿ ಬಾರಮ್ಮಾ...' ಧಾರಾವಾಹಿಯ ನಾಯಕಿ ನಟಿಯಾದ ಚಿನ್ನು ಆಲಿಯಾಸ್ ರಶ್ಮಿ ಪ್ರಭಾಕರ್ಗೆ ಶೇ.70ರಷ್ಟು ಕಣ್ಣು ಕಾಣಿಸುವುದಿಲ್ಲವಂತೆ!
'ನಾನು ಚಿಕ್ಕವಳಾಗಿದ್ದಾಗಲೇ ಶಿವರಾತ್ರಿಯಂದು ಸುಣ್ಣದ ಡಬ್ಬಿಯೊಂದಿಗೆ ಆಡುವಾಗ, ಅದು ಸ್ಫೋಟಗೊಂಡು ಕಣ್ಣಿಗೆ ಹಾರಿತ್ತು. ಅಂದಿನಿಂದಲೂ ನಾನು ದೃಷ್ಟಿ ಕಳೆದುಕೊಂಡೆ. ಅದರಲ್ಲಿಯೂ ಒಂದು ಕಣ್ಣು ಶೇ.70ರಷ್ಟು ಕಾಣಿಸುವುದಿಲ್ಲ,' ಎಂದು ತಮ್ಮ ನೋವಿನ ಮಾತನ್ನು ಹೇಳಿಕೊಂಡಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಕಲರ್ಸ್ 'ನಾಯಕಿ' ಕಾರ್ಯಕ್ರಮದಲ್ಲಿ ಚಿನ್ನು ಅವರೇ ಈ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ.
ಅಭಿನಯವೆಂದರೆ ಬಹಳ ಪ್ರೀತಿ ಇರೋ ರಶ್ಮಿಗೆ ಆ್ಯಕ್ಟಿಂಗ್ ರಕ್ತದಲ್ಲಿಯೇ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಅಪಾರ ಹೆಸರು ಮಾಡಿದ ನಟಿ ದಿ.ಸೌಂದರ್ಯ ಅವರ ಸಂಬಂಧಿಯೂ ಹೌದು. ಹಾಗಂತ ರಶ್ಮಿಗೆ ಅವಕಾಶವೂ ಸುಲಭವಾಗಿ ಸಿಗಲಿಲ್ಲವಂತೆ. ಕಣ್ಣು ಸರಿ ಇಲ್ಲವೆಂದೇ ಬಹಳಷ್ಟು ಮಂದಿ ಇವರನ್ನು ರಿಜೆಕ್ಟ್ ಮಾಡಿದ್ದಾರಂತೆ. ಆದರೆ, ಲಚ್ಚಿ ಅಂದ್ರೆ ಚಿನ್ನು ಪಾತ್ರದ ಅವಕಾಶ ಸಿಕ್ಕಿ, ಇದೀಗ ಎಲ್ಲರ ಮನೆ ಮಾತನಾಗಿದ್ದಾರೆ ರಶ್ಮಿ.