ಕತೆಗೆ ಹೊಸ ತಿರುವು ಕೊಡ್ತಾರೆ ಸುದೀಪ್
ಸುದೀಪ್ ಹಾಗೂ ರಾಗಿಣಿ ಒಟ್ಟಿಗೆ ತೆರೆ ಮೇಲೆ ಬಾರದೆ ವರ್ಷಗಳೇ ಉರುಳಿದರೂ ಅಭಿಮಾನಿಗಳಿಗೆ ಮಾತ್ರ ಅವರಿಬ್ಬರನ್ನು ಒಟ್ಟಿಗೆ ತೆರೆ ಮೇಲೆ ಕಾಣುವ ಕಾತರ ಇದ್ದೇ ಇತ್ತು. ಅದೀಗ ‘ಕಿಚ್ಚು’ ಚಿತ್ರ ಮೂಲಕ ನೆರವೇರುತ್ತಿದೆ. ಕಾಡಿಸುವ ಕತೆಯೊಂದನ್ನು ‘ಕಿಚ್ಚು’ ರೂಪದಲ್ಲಿ ನೀಡುತ್ತಿರುವ ನಿರ್ದೇಶಕ ಪ್ರದೀಪ್ ರಾಜ್ ಜತೆಗಿನ ಮಾತುಕತೆ ಇಲ್ಲಿದೆ.
ಸುದೀಪ್ ಹಾಗೂ ರಾಗಿಣಿ ಒಟ್ಟಿಗೆ ತೆರೆ ಮೇಲೆ ಬಾರದೆ ವರ್ಷಗಳೇ ಉರುಳಿದರೂ ಅಭಿಮಾನಿಗಳಿಗೆ ಮಾತ್ರ ಅವರಿಬ್ಬರನ್ನು ಒಟ್ಟಿಗೆ ತೆರೆ ಮೇಲೆ ಕಾಣುವ ಕಾತರ ಇದ್ದೇ ಇತ್ತು. ಅದೀಗ ‘ಕಿಚ್ಚು’ ಚಿತ್ರ ಮೂಲಕ ನೆರವೇರುತ್ತಿದೆ. ಕಾಡಿಸುವ ಕತೆಯೊಂದನ್ನು ‘ಕಿಚ್ಚು’ ರೂಪದಲ್ಲಿ ನೀಡುತ್ತಿರುವ ನಿರ್ದೇಶಕ ಪ್ರದೀಪ್ ರಾಜ್ ಜತೆಗಿನ ಮಾತುಕತೆ ಇಲ್ಲಿದೆ.
ಇದು ಯಾವ ಕಿಚ್ಚು, ಯಾರ ವಿರುದ್ಧದ ಕಿಚ್ಚು?
ಇದು ಪ್ರತಿಯೊಬ್ಬ ಮನುಷ್ಯರಲ್ಲೂ ಇರಬೇಕಾದ ಎದೆಯೊಳಗಿನ ಕಿಚ್ಚು. ಹಾಗಂತ ಅದು ದ್ವೇಷ, ಅಸೂಯೆ, ಸಿಟ್ಟು-ಸೆಡವಿನ ಕಿಚ್ಚಲ್ಲ. ಇದು ಕಾಡಿನ ಮೇಲಿನ ಪ್ರೀತಿ ಮತ್ತು ಕಾಳಜಿಯ ಕಿಚ್ಚು.
ಕಾಡು ಉಳಿಸಬೇಕೆನ್ನುವ ಕೂಗು ಅರಣ್ಯರೋದನವಾಗಿರುವಾಗ ಈ ವಿಷಯವೇ ನಿಮ್ಮ ಸಿನಿಮಾದ ಕತೆ ಆದದ್ದು ಹೇಗೆ?
ನನಗೆ ಕಾಡಂದ್ರೆ ಪ್ರೀತಿ. ಅದು ನನಗೊಬ್ಬನಿಗೇ ಮಾತ್ರವಲ್ಲ, ಕಾಡಿನ ನಡುವೆ ಹುಟ್ಟಿ ಬೆಳೆದವರಿಗೆ ಅದು ಸರ್ವೇ ಸಾಮಾನ್ಯ. ಆದ್ರೆ ನನಗೆ ಕಾಡಿನ ನಾಶ ಮತ್ತು ಅರಣ್ಯವಾಸಿಗಳ ಹೀನಾಯ ಬದುಕು ತೀವ್ರವಾಗಿ ಕಾಡಿದೆ. ಅವೆರಡನ್ನು ನೋಡುವಾಗ ನೋವು, ಯಾತನೆ, ವ್ಯವಸ್ಥೆಯ ವಿರುದ್ಧ ಸಿಟ್ಟಿತ್ತು. ಅದನ್ನು ನನ್ನದೇ ಮಾಧ್ಯಮದಲ್ಲಿ ಹೇಳಬೇಕೆನಿಸುವ ತುಡಿತವಿತ್ತು. ಆ ಅವಕಾಶ ಈಗ ಸಿಕ್ಕಿದೆ.
ಈ ಕತೆಯಲ್ಲಿ ನಕ್ಸಲರು ಇದ್ದಾರೆನ್ನುವ ಸುದ್ದಿ...
ಖಂಡಿತವಾಗಿಯೂ ನಾನಿಲ್ಲಿ ನಕ್ಸಲೀಯರ ಹೋರಾಟದ ಬಗ್ಗೆ ಹೇಳುತ್ತಿಲ್ಲ. ಕಾಡಿನೊಳಗಿನ ಆದಿವಾಸಿಗಳಿಗೆ ಅವರು ಯಾರು ಅಂತ ಗೊತ್ತಿಲ್ಲ. ನಕ್ಸಲರ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಆದ್ರೆ ಅದು ಸರಿಯಲ್ಲ. ಕಾಡು ಉಳಿಯಬೇಕು ಆದಿವಾಸಿಗಳ ಹೋರಾಟ ಕಾನೂನಿನ ಚೌಕಟ್ಟಿನಲ್ಲೇ ಇರ ಬೇಕೆನ್ನುವುದು ಈ ಚಿತ್ರದ ಒನ್ಲೈನ್ ಸ್ಟೋರಿ.
ಚಿತ್ರದ ಮುಖ್ಯಪಾತ್ರಗಳಿಗೆ ಇಬ್ಬರೂ ಕಿವಿ ಕೇಳದ, ಮಾತು ಬಾರದ ಮೂಗರೇ ಬೇಕೆನಿಸಿದ್ದೇಕೆ?
ಆದಿವಾಸಿಗಳು, ಬಡವರು, ನಿರ್ಗತಿಕರ ಪಾಲಿಗೆ ಸರಕಾರ ಅಂದ್ರೆ ಕಿವಿ ಕೇಳದ, ಮಾತು ಬಾರದ ಒಂದು ವ್ಯವಸ್ಥೆ. ಅದನ್ನು ಸಾಂಕೇತಿಕವಾಗಿ ಹೇಳಬೇಕಿತ್ತು. ಚಿತ್ರದ ಮುಖ್ಯ ಪಾತ್ರಗಳ ಮೂಲಕವೇ ಅದನ್ನು ತೋರಿಸಬೇಕಿತ್ತು. ಅದಕ್ಕೆ ತಕ್ಕಂತೆ ಕಲಾವಿದರನ್ನು ಹುಡುಕುತ್ತಾ ಹೊರಟಾಗ ಸಿಕ್ಕಿದ್ದು ಧ್ರುವ ಶರ್ಮಾ, ನಟಿ ಅಭಿನಯ.
ಪಾತ್ರಕ್ಕೆ ತಕ್ಕಂತೆ ಅವರನ್ನು ಅಭಿನಯಿಸುವಂತೆ ಮಾಡುವುದು ಸವಾಲು ಎನಿಸಲಿಲ್ವಾ?
ಅವರಿಬ್ಬರು ಕಿವಿ ಕೇಳದ, ಮಾತು ಬಾರದ ಕಲಾವಿದರು ಎನ್ನುವುದು ನಿಜ, ಆದ್ರೆ ಅವರು ಅಭಿನಯಿಸಿದ್ದು ಇದೇ ಮೊದಲಲ್ಲ. ಆದ್ರೂ ಅವರಿಬ್ಬರ ಪಾತ್ರಗಳ ಮೂಲಕ ನಾನು ಕತೆಯ ಒಟ್ಟು ಆಶಯ ಹೇಳಬೇಕಿತ್ತು. ಅದಕ್ಕೆ ತಕ್ಕಂತೆ ಇಬ್ಬರು ಅಭಿನಯಿಸಬೇಕಿತ್ತು. ಚಿತ್ರೀಕರಣಕ್ಕೂ ಮುನ್ನವೇ ಸಂಜ್ಞೆಗಳ ಮೂಲಕ ಸಂಭಾಷಣೆ ನಡೆಸಿದೆ. ನಾನು ಹೇಳಿದ್ದನ್ನು ಅವರಿಬ್ಬರು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಿದ್ದರು. ಹಾಗಾಗಿ ಸೆಟ್ನಲ್ಲಿ ಹೆಚ್ಚೇನು ಕಷ್ಟ ಆಗಲಿಲ್ಲ. ವಿಶೇಷ ಅಂದ್ರೆ ತಮ್ಮ ಪಾತ್ರಗಳಿಗೆ ಅವರೇ ಡಬ್ಬಿಂಗ್ ಮಾಡಿದ್ದಾರೆ. ಧ್ರುವ ಶರ್ಮಾ ಡಬ್ಬಿಂಗ್ ಮುಗಿಸಿದ ನಂತರ ಇನ್ನಿಲ್ಲವಾದರು. ಅವರಿಲ್ಲದ ಈ ಕ್ಷಣದಲ್ಲಿ ಸಿನಿಮಾ ತೆರೆ ಕಾಣುತ್ತಿರುವುದು ತೀವ್ರ ದುಃಖ ತರಿಸಿದೆ.
ಗ್ಲಾಮರಸ್ ನಟಿ ರಾಗಿಣಿ ಅವರನ್ನು ಡಿ ಗ್ಲಾಮರ್ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದೇಕೆ?
ಚಿತ್ರದ ಪ್ರಮುಖ ಪಾತ್ರವಿದು. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟ ಹುಡುಗಿ. ಆ ಊರಿನಲ್ಲಿ ಗಟ್ಟಿಗಿತ್ತಿ ಎನಿಸಿಕೊಂಡವಳು. ವ್ಯವಸ್ಥೆಯ ಕುರಿತು ಊರಿನ ಜನರಿಗೆ ಟೀಚಿಂಗ್ ಮಾಡುತ್ತಾಳೆ. ಆ ಮಟ್ಟಿಗೆ ತುಂಬಾನೆ ಬೋಲ್ಡ್ ಇರುವಂತಹ ಪಾತ್ರ. ಆ ಪಾತ್ರಕ್ಕೆ ಯಾರು ಸೂಕ್ತ ಅಂತ ಹುಡುಕುತ್ತಿದ್ದಾಗ ನಮಗೆ ಸಿಕ್ಕವರು ರಾಗಿಣಿ. ಅವರು ಪಾತ್ರದ ಬಗ್ಗೆ ಕೇಳಿ ಥ್ರಿಲ್ ಆದ್ರು. ಅಭಿನಯಿಸುವುದಾಗಿ ಒಪ್ಪಿಕೊಂಡರು. ಪಾತ್ರದಲ್ಲಿ ತಕ್ಕಂತೆ ಸೊಗಸಾಗಿ ಅಭಿನಯಿಸಿದ್ದಾರೆ. ಇದು ಅವರ ಸಿನಿಜರ್ನಿ ಟರ್ನಿಂಗ್ ಪಾಯಿಂಟ್ ಆಗುವುದು ಗ್ಯಾರಂಟಿ.
ಸುದೀಪ್ ಅವರ ಪಾತ್ರದ ಬಗ್ಗೆ ಹೇಳೋದಾದ್ರೆ..
ಅವರೊಬ್ಬ ಡಾಕ್ಟರ್. ಇಡೀ ಕತೆಗೆ ತಿರುವು ಸಿಗುವುದೇ ಈ ಪಾತ್ರದ ಎಂಟ್ರಿಯ ಮೂಲಕ. ಸದ್ಯಕ್ಕೆ ಅವರ ಪಾತ್ರದ ಬಗ್ಗೆ ಇಷ್ಟು ಹೇಳಬಹುದು. ಹೆಚ್ಚು ಹೇಳಿದ್ರೆ ಕತೆ ರಿವೀಲ್ ಆಗುತ್ತೆ. ಅಷ್ಟು ಪ್ರಾಮುಖ್ಯತೆ ಇರುವ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳುವುದು ಅಂತ ಚರ್ಚೆ ಮಾಡುತ್ತಿದ್ದಾಗ ನಮಗೆ ಸಿಕ್ಕವರು ಸುದೀಪ್. ಒಂದು ದಿನ ಭೇಟಿ ಮಾಡಿ ಕತೆ ಹೇಳಿದಾಗ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು. ಅನವಶ್ಯಕ ಬಿಲ್ಡಪ್ ಇರಬಾರದು, ಕತೆಗೆ ಪಾತ್ರದ ಅವಶ್ಯಕತೆ ಎಷ್ಟೋ ಅಷ್ಟೇ ಇರಬೇಕು ಅಂತ ಸಲಹೆ ಕೊಟ್ಟರು. ಆ ಪ್ರಕಾರವೇ ಅವರಿಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಚಿತ್ರೀಕರಣಕ್ಕೆ ಬಂದಿದ್ದು ಮೂರು ದಿವಸ. ಅವರ ಜತೆಗೆ ಕೆಲಸ ಮಾಡಿದ್ದು ಮರೆಯಲಾಗದ ಅನುಭವ.
ಕಿಚ್ಚು ಚಿತ್ರೀಕರಣವೆಲ್ಲ ಕಾಡಿನೊಳಗೆ ಆಗಿದ್ದು ಎನ್ನುವ ಮಾಹಿತಿ, ಚಿತ್ರೀಕರಣದ ಅನುಭವ ಹೇಗಿತ್ತು?
ಇದು ಹೇಳಿ-ಕೇಳಿ ಕಾಡಿನ ಕತೆ. ಅದನ್ನು ಕಾಡಿನೊಳಗೆಯೇ ಹೇಳಬೇಕಿತ್ತು. ಅದಕ್ಕೆ ನಾನು ಆಯ್ಕೆ ಮಾಡಿಕೊಂಡಿದ್ದು ಭದ್ರಾ ಫಾರೆಸ್ಟ್. ಅಲ್ಲಿ ನಾವು ಒಟ್ಟು 42 ದಿನಗಳ ಕಾಲ ಇದ್ದೆವು. ಆರ್ಟಿಸ್ಟ್ ಬಿಟ್ಟರೆ ಇಡೀ ಸೆಟ್ ಅಲ್ಲಿಯೇ ಉಳಿದುಕೊಂಡಿತ್ತು. ಸಾಯಿಕುಮಾರ್, ಸುಚೇಂದ್ರ ಪ್ರಸಾದ್, ಧ್ರುವ ಶರ್ಮಾ, ಅಭಿನಯ, ರಾಗಿಣಿ ಮತ್ತಿತರರು ಚಿಕ್ಕಮಗಳೂರಿನಿಂದ ಬಂದು ಹೋಗುತ್ತಿದ್ದರು. ನಾವು ಮಾತ್ರ ಅಲ್ಲಿಯೇ ಉಳಿದುೊಂಡಿದ್ದೆವು. ಅಲ್ಲಿನ ಅರಣ್ಯಕ್ಕೆ ಕಿಂಚಿತ್ತು ಧಕ್ಕೆಯಾಗದ ಹಾಗೆ, ಪರಿಸರ ಸಂರಕ್ಷಣೆಯ ಕಾಳಜಿಯಿಟ್ಟುಕೊಂಡೆ ಚಿತ್ರೀಕರಣ ನಡೆಸಿದೆವು. ನನಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ಅದೊಂದು ಅದ್ಭುತ ಅನುಭವ.