‘ಮಾದೇಶ್ವರ’ ಧಾರಾವಾಹಿಗೆ ಎದುರಾಯ್ತು ಸಂಕಷ್ಟ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯ ಪ್ರಸಾರವನ್ನು ಸ್ಥಗಿತಗೊಳಿಸಿ, ತಕ್ಷಣ ವಾಹಿನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಬಸವ ದಳದ ಕಾರ್ಯಾಧ್ಯಕ್ಷರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಚಾಮರಾಜನಗರ: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯ ಪ್ರಸಾರವನ್ನು ಸ್ಥಗಿತಗೊಳಿಸಿ, ತಕ್ಷಣ ವಾಹಿನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಬಸವ ದಳದ ಕಾರ್ಯಾಧ್ಯಕ್ಷ ಸು.ಮಲ್ಲಿಕಾರ್ಜುನಸ್ವಾಮಿ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮಾದೇಶ್ವರರು ಬಸವಣ್ಣನ ನಂತರ ಇಷ್ಟಲಿಂಗತತ್ವದ ಲಿಂಗಾಯತ ಧರ್ಮವನ್ನು ಬೆಳಕಿಗೆ ತಂದವರು. ಮಾದೇಶ್ವರ ಬೆಟ್ಟದಲ್ಲಿ ಸೋಲಿಗರು, ಜೇನುಕುರುಬರು, ಬೇಡರಿಗೆ ಕೃಷಿ ಕಾಯಕ ಕಲಿಸಿ, ಉದ್ಯೋಗ, ಜಾತಿ, ಲಿಂಗ ಭೇದಗಳಿಲ್ಲದೇ ಅವರನ್ನು ಇಷ್ಟಲಿಂಗಾಧಾರಿಗಳನ್ನಾಗಿ ಮಾಡಿದರು.
ಮಾದೇಶ್ವರರ ಕೊರಳಿನಲ್ಲಿ ಸದಾ ಇಷ್ಟಲಿಂಗವಿರುತ್ತಿತ್ತು. ಅವರ ಭಾವಚಿತ್ರಗಳಲ್ಲಿ ಕೊರಳಲ್ಲಿ ಇಷ್ಟಲಿಂಗ, ಹಣೆಯಲ್ಲಿ ವಿಭೂತಿ ಈಗಲೂ ಇದೆ. ಹೀಗಿದ್ದರೂ ಧಾರಾವಾಹಿಯಲ್ಲಿ ಮಾದೇಶ್ವರ ಪಾತ್ರಧಾರಿಯ ಕೊರಳಲ್ಲಿ ಇಷ್ಟಲಿಂಗವಿಲ್ಲ. ಜೊತೆಗೆ ಹಣೆಯಲ್ಲಿ ವಿಭೂತಿ ಜೊತೆಗೆ ಕುಂಕುಮ ಹಚ್ಚಲಾಗಿದೆ. ಇದು ಶರಣ ಸಂಸ್ಕೃತಿಗೆ ವಿರುದ್ಧವಾದುದು ಎಂದು ದೂರಿದ್ದಾರೆ.