'ಕೋಟಿ ಕೊಟ್ಟರೂ ಹೋಗಲ್ಲ' ಎಂದಿದ್ದ ಚಿನ್ನು ಬಿಬಿ ಮನೆಯಲ್ಲಿ!
ಈ ಬಿಗ್ಬಾಸ್ ಮನೆ ಎಂಥವರನ್ನೂ ಆಕರ್ಷಿಸುತ್ತೆ. ನಮ್ಮನ್ನು ನಾವು ಅರಿತುಕೊಳ್ಳಲು ಒಂದೊಳ್ಳೆ ವೇದಿಕೆ ನೀಡುವ ಬಿಗ್ಬಾಸ್ ಸ್ಪರ್ಧೆ, ಭವಿಷ್ಯ ನಿರ್ಮಿಸಿಕೊಳ್ಳಲೂ ನೆರವಾಗುತ್ತೆ. ನಾನು ಹೋಗೋಲ್ಲಪ್ಪ ಎಂದವರೂ ಈ ಮನೆ ಪ್ರವೇಶಿಸುತ್ತಾರೆ....
'ಲಕ್ಷ್ಮೀ ಬಾರಮ್ಮ...' ಧಾರವಾಹಿ ಮೂಲಕ ಅಳು, ಮುಗ್ಧ ಗ್ರಾಮ್ಯ ಭಾಷಯಿಂದಲೇ ಮನೆ, ಮನದಲ್ಲಿ ಸ್ಥಾನ ಪಡೆದವರು ಚಿನ್ನು ಆಲಿಯಾಸ್ ಕವಿತಾ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದರೂ ಗ್ರಾಮ್ಯ ಭಾಷ್ಯದಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದವರು.
'ಕೋಟಿ ಕೊಟ್ಟರೂ ಬಿಗ್ಬಾಸ್ ಮನೆಗೆ ಹೋಗೋಲ್ಲ..' ಎನ್ನುತ್ತಿದ್ದ ಕವಿತಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ. 'ಬಿಗ್ ಬಾಸ್ ಮನೆಯನ್ನು ಅನುಭವಿಸಬೇಕು. ತನ್ನನ್ನು ತಾನು ಅರ್ಥ ಮಾಡಿಕೊಳ್ಳಲು ಇದಕ್ಕಿಂತ ಮತ್ತೊಂದು ಒಳ್ಳೆಯ ಅವಕಾಶ ಸಿಗುವುದಿಲ್ಲ,' ಎಂದು ಹೇಳಿಕೊಂಡಿದ್ದಾರೆ ಕವಿತಾ. ಮಲ್ಲೇಶ್ವರಂ ಹುಡುಗಿ ಎಂದೇ ಹೇಳಿಕೊಳ್ಳುವ ಕವಿತಾಗೆ ಅದೇ ಒಂದು ಪುಟ್ಟ ಪ್ರಪಂಚವಂತೆ. ಬೇರೆ ಸ್ಥಳಗಳಿಗೂ ಭೇಟಿ ನೀಡಿದ್ದು ಕಡಿಮೆಯಂತೆ!
ಮೂರು ವರ್ಷಗಳ ಕಾಲ ಚಿನ್ನುವಾಗಿ ಮಿಂಚಿದ ಕವಿತಾ, ನಂತರ ತಮಿಳು ಕಿರುತೆರೆ ಲೋಕಕ್ಕೆ ಕಾಲಿಟ್ಟವರು. ಈ ನಡುವೆ 'ಶ್ರೀ ನಿವಾಸ ಕಲ್ಯಾಣ' ಚಿತ್ರದಲ್ಲಿಯೂ ನಟಿಸಿದ್ದಾರೆ.
ನೀವೇಕೆ ಬಿಗ್ ಬಾಸ್ ಮನೆಯಲ್ಲಿ 100 ದಿನಗಳ ಕಾಲ ಉಳಿಯಬೇಕೆಂದು ಕೇಳಿದರೆ, 'ನಾನು ಶಾಂತ ಜೀವಿ. ಎಲ್ಲ ಸಂದರ್ಭವನ್ನೂ ಕೂಲ್ ಆಗಿಯೇ ನಿಭಾಯಿಸುತ್ತೇನೆ. ಜಗಳ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಸಾಮರ್ಥ್ಯವಿದೆ ನಂಗೆ,' ಎಂದಿದ್ದಾರೆ.
ಭರತನಾಟ್ಯ ಡ್ಯಾನ್ಸರ್ ಆದ ಕವಿತಾ, ಇನ್ನು ಬೇರೆ ಬೇರೆ ನ್ಯತ್ಯ ಪ್ರಕಾರವನ್ನು ಕಲಿಯಬೇಕೆಂಬ ಆಸೆ ಹೊಂದಿದ್ದಾರೆ.