ಜನರು ಸಂಕಷ್ಟಕ್ಕೆ ಸಿಲುಕಿದಾಗ ಸಿನಿಮಾ ಮಂದಿ ಉದಾರವಾಗಿ ದೇಣಿಗೆ ನೀಡುವುದು ಸಹಜ. ಆದರೆ, ಈ ಹೆಬ್ಬುಲಿ ನಟಿ ಕೈ ಮುರಿದುಕೊಂಡರೂ ಮಳೆ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ, ರಾಜ್ಯದ ಜನರ ನೋವಿಗೆ ಸ್ಪಂದಿಸುತ್ತಿದ್ದಾರೆ.
ತಿರುವನಂತಪುರಂ (ಆ.18): ಮನೆಯೊಂದಿಗೆ ಬಂಧುಗಳನ್ನು ಕಳೆದುಕೊಂಡು ಮಳೆ ಸಂತ್ರಸ್ತರು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಕೇರಳ ಮತ್ತು ಕೊಡಗಿಗೆ ಎಷ್ಟು ನೆರವು ನೀಡಿದರೂ ಸಾಲದು. ಈ ಸಂದರ್ಭದಲ್ಲಿ 'ಹೆಬ್ಬುಲಿ' ನಟಿ ಅಮಲಾ ಪೌಲ್ ಕೈ ಮುರಿದಿದ್ದರೂ, ಕೇರಳ ಮಳೆ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ.
ಕುಂಭದ್ರೋಣ ಮಳೆಗೆ ಕೇರಳದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಲಕ್ಷಾಂತರ ಮಂದಿ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ನೀರು-ಆಹಾರವಿಲ್ಲದೇ ಪರದಾಡುತ್ತಿದ್ದಾರೆ. ಇವರಿಗೆ ನೆರವಾಗಲು ದಕ್ಷಿಣ ಭಾರತೀಯ ಸಿನಿಮಾ ತಾರೆಯರಾದ ಸೂರ್ಯ, ಅಲ್ಲು ಅರವಿಂದ್, ಕಾರ್ತಿ, ವಿಜಯ್ ಸೇತುಪತಿ, ಧನುಷ್, ಶಿವಕಾರ್ತಿಕೆಯನ್, ನಯನತಾರಾ ಮತ್ತಿತರರು ಉದಾರವಾಗಿ ದೇಣಿಗೆ ನೀಡಿದ್ದಾರೆ.
ನಟಿ ಅಮಲಾ ಪೌಲ್ ಅವರಂತೂ ಕೈ ಮುರಿದಿದ್ದರೂ, ಮಳೆ ಪೀಡಿತ ಪ್ರದೇಶಗಳಲ್ಲಿಯೇ ಕುಟುಂಬದ ಇತರೆ ಸದಸ್ಯರೊಂದಿಗೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ.

'ಅದೋ ಅಂತ ಪರವೈ ಪೋಲಾ' ಚಿತ್ರದ ಆ್ಯಕ್ಷನ್ ದೃಶ್ಯವೊಂದರ ಚಿತ್ರೀಕರಣದ ವೇಳೆ ಅಮಲಾ ಕೈ ಮುರಿದುಕೊಂಡಿದ್ದಾರೆ. ತಮ್ಮ ದೈಹಿಕ ನೋವಿನಲ್ಲಿಯೂ ತನ್ನ ರಾಜ್ಯದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ನಟಿಯ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
