25 ವರ್ಷಗಳ ನಂತರ ಮತ್ತೆ ಬೆಳ್ಳಿ ತೆರೆಗೆ ಬರ್ತಾ ಇದ್ದಾರೆ ಈ ಖ್ಯಾತ ನಿರೂಪಕಿ!
ನಟಿ, ನಿರೂಪಕಿ, ಮಜಾ ಟಾಕೀಸ್ ವರಲಕ್ಷ್ಮೀ ಅಪರ್ಣಾ ವಸ್ತಾರೆ 25 ವರ್ಷಗಳ ನಂತರ ಬೆಳ್ಳಿ ತೆರೆಗೆ ಬರುತ್ತಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾವುದು ಆ ಸಿನಿಮಾ? ಯಾರ್ಯಾರು ನಟಿಸುತ್ತಿದ್ದಾರೆ? ಇಲ್ಲಿದೆ ಓದಿ.
ಬೆಂಗಳೂರು (ಆ. 23): ನಟಿ, ನಿರೂಪಕಿ ಅಪರ್ಣಾ ಇದೇ ಮೊದಲು ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪುತ್ರನಾಗಿ ನಟಿಸುತ್ತಿರುವುದು ವಿನಯ್ ರಾಜ್ಕುಮಾರ್. ‘ಗ್ರಾಮಾಯಣ’ ಚಿತ್ರದಲ್ಲಿ. ಎನ್.ಎಲ್.ಎನ್ ಮೂರ್ತಿ ನಿರ್ಮಾಣದಲ್ಲಿ ದ್ಯಾವನೂರು ಚಂದ್ರು ನಿರ್ದೇಶಿಸುತ್ತಿರುವ ಚಿತ್ರವಿದು.
ವಿನಯ್ ರಾಜ್ ಕುಮಾರ್ ಹೀರೋ. ಅಮೃತಾ ಅಯ್ಯರ್ ನಾಯಕಿ. ಶ್ರೀನಿವಾಸ ಪ್ರಭು ಚಿತ್ರದಲ್ಲಿದ್ದಾರೆ. ಸೆಪ್ಟೆಂಬರ್ 18 ರಿಂದ ಚಿತ್ರೀಕರಣ ಶುರು. ಸೆ.6 ರಂದು ಟೀಸರ್ ಲಾಂಚ್ಗೆ ಸಿದ್ಧತೆ ನಡೆಸಿದೆ ಚಿತ್ರತಂಡ. ‘ಅಪರ್ಣಾ ಪಾತ್ರದ ಪ್ರಾಮುಖ್ಯತೆ ತಿಳಿದು ಅಭಿನಯಿಸಲು ಒಪ್ಪಿಕೊಂಡರು. ಹೆಸರಾಂತ ನಟಿ ನಮ್ಮ ಸಿನಿಮಾ ಭಾಗವೇ ಆಗಿದ್ದು ಖುಷಿ ಆಗುತ್ತಿದೆ’ ಎನ್ನುತ್ತಾರೆ ನಿರ್ಮಾಪಕ ಎನ್.ಎಲ್. ಎನ್. ಮೂರ್ತಿ.
ಸರಿ ಸುಮಾರು 25 ವರ್ಷಗಳೇ ಆಗಿ ಹೋದವು. ನಿರ್ದೇಶಕ ಚಂದ್ರು ಈ ಪಾತ್ರದ ಬಗ್ಗೆ ಹೇಳಿದಾಗ ಖುಷಿಯಾಯಿತು. ಕತೆ ದೇಸಿ ಸೊಗಡಿನಿಂದ ಕೂಡಿತ್ತು. ಕಡೂರು ಸುತ್ತಮುತ್ತಲ ಭಾಷೆ ಅದು, ಜತೆಗೆ ಒರಟು ತಾಯಿ. ಮಗನ ಮೇಲೆ ಪ್ರಾಣವನ್ನೇ ಇಟ್ಟುಕೊಂಡವಳು. ಒಂದು ಕ್ಷಣ ನನಗೆ ರೋಮಾಂಚನಗೊಳಿಸಿತು ಆ ಪಾತ್ರ. ಹಾಗಾಗಿ ಒಪ್ಪಿಕೊಂಡಿದ್ದೇನೆ.
-ಅಪರ್ಣಾ, ನಟಿ