ಯಶವಂತ್ ಶೆಟ್ಟಿ ಸದ್ಯ ಸ್ಯಾಂಡಲ್‌ವುಡ್‌ನ ಬೇಡಿಕೆಯ ನಟ. ತೆರೆ ಮೇಲೆ ಖಳನಾಯಕನಾಗಿ ಮಿಂಚುತ್ತಿದ್ದಾರೆ. ತುಳುನಾಡಿನ ಪ್ರತಿಭಾವಂತ ಕುವರನ ಜೊತೆ ಕನ್ನಡ ಪ್ರಭ ಆಪ್ತಮಾತು. 

ಐದನೇ ತರಗತಿಯಲ್ಲಿದ್ದಾಗಲೇ ಹೋಟೆಲ್‌ನಲ್ಲಿ ಕ್ಲೀನರ್, ಓದಿನ ಜತೆ ಹಾಲು ಮಾರುವ- ಲಾಡ್ಜ್ ಬಾಯ್ ಕೆಲಸ. ನಟನಾಗಬೇಕೆಂದು ಕನಸು ಕಟ್ಟಿಕೊಂಡ ಯಶವಂತ್ ಶೆಟ್ಟಿ ಕತೆ ಇದು. ಸ್ಯಾಂಡಲ್ವುಡ್‌ನಲ್ಲಿ ಖಳನಾಯಕನಾಗಿ ಮಿಂಚುತ್ತಿರುವ ತುಳುನಾಡಿನ ಪ್ರತಿಭಾವಂತ ಕುವರನ ಜತೆ ಆಪ್ತಮಾತು 

Add Asianetnews Kannada as a Preferred SourcegooglePreferred

- ನಿಮ್ಮ ಹಿನ್ನೆಲೆ ಏನು? ನಟನೆಯ ನಂಟು ಬೆಸೆದುಕೊಂಡಿದ್ದು ಹೇಗೆ?
ಹೆಸರು ಯಶವಂತ್ ಶೆಟ್ಟಿ. ಉಡುಪಿ ಜಿಲ್ಲೆಯ ಹಿರಿಯಡ್ಕ ಗ್ರಾಮ ದವನು. ಎಂಜಿಎಂ ಕಾಲೇಜಿನಲ್ಲಿ ಡಿಗ್ರಿ ಮುಗಿಸಿದ್ದೇನೆ. ಊರಲ್ಲಿ ಒಂದಿಷ್ಟು ಹುಡುಗರು ಸೇರಿಕೊಂಡು ನಾಟಕದ ತಂಡವನ್ನು ಕಟ್ಟಿಕೊಂಡು ಯಕ್ಷಗಾನ, ನಾಟಕಗಳನ್ನು ಪ್ರದರ್ಶಿಸುತ್ತಿದ್ವಿ.

-ನಟನೆಗೆ ನಿಮ್ಮ ಪೂರ್ವ ತರಬೇತಿ ಹೇಗಿತ್ತು?
ನಟನೆ ಹೇಳಿಕೊಡಲು ನೀನಾಸಂ ಸಂಸ್ಥೆ ಇದೆ ಅನ್ನೋದು ಗೊತ್ತಾಯಿತು. ನನ್ನ ಕಾಲೇಜಿನ ಶಿಕ್ಷಕರೇ ಒಂದಿಷ್ಟು ಹಣ ಸಂಗ್ರಹ ಮಾಡಿ ನನಗೆ ಕೊಟ್ಟು ನೀನಾಸಂಗೆ ಕಳುಹಿಸಿ ಕೊಟ್ಟರು. ಇಲ್ಲಿ ಒಂದು ವರ್ಷ ತರಬೇತಿ ಮುಗಿಸಿಕೊಂಡ ಮೇಲೆ ಎನ್‌ಎಸ್‌ಡಿ ಬಗ್ಗೆ ಗೊತ್ತಾಯಿತು. ಈ ಎರಡೂ ಸಂಸ್ಥೆಗಳಲ್ಲಿ ನಟನೆ ಕಲಿತೆ.

-ಎನ್‌ಎಸ್‌ಡಿಯಲ್ಲಿ ಕಲಿಕೆಯ ಅನುಭವ ಹೇಗಿತ್ತು?
ಇಲ್ಲಿ ಮೂರು ವರ್ಷ ಇದ್ದೆ. ನಾಷುರುದ್ದೀನ್ ಷಾ, ರಾಜ್‌ಪಾಲ್ ಯಾದವ್, ಅತುಲ್ ಕುಲಕರ್ಣಿ ಇವರೆಲ್ಲ ನಮ್ಮ ಸೀನಿಯರ್ಗಳು. ತರಬೇತಿ ಆದ ಮೇಲೆ ಏಷ್ಯನ್ ಎಜುಕೇಷನ್ ಥಿಯೇಟರ್ ಸೆಂಟರ್ (8ಸಿ) ಹೆಸರಿನಲ್ಲಿ ಚೈನಾದಲ್ಲಿ ಏಷ್ಯದ ಎಲ್ಲ ದೇಶಗಳು ಇಲ್ಲಿ ಸ್ಪರ್ಧಿಸುತ್ತವೆ. ಇಲ್ಲಿ ನನಗೆ ಅತ್ಯುತ್ತಮ ನಟ ಪ್ರಶಸ್ತಿ ಬಂತು. ಪ್ರಶಸ್ತಿ ಸ್ವೀಕರಿಸಿದ ನಂತರ ನನಗೆ ಎನ್‌ಎಸ್‌ಡಿಯಲ್ಲೇ ನಟನೆಯ ಪಾಠ ಹೇಳಿಕೊಡುವ ಹುದ್ದೇ ಅಫರ್ ಮಾಡಿದರು. ಆದರೆ, ನಾನು ಒಪ್ಪದೆ ಮುಂಬೈಗೆ ಬಂದೆ. ಹೀಗೆ ನನ್ನ ಎನ್‌ಎಸ್‌ಡಿ ಒಬ್ಬ ಕಲಾವಿದನನ್ನಾಗಿ ರೂಪಿಸಿತು.

-ಅಕಾಡೆಮಿಕ್ ಕಲಿಕೆಯ ಆಚೆಗೆ ಏನು ಮಾಡಿಕೊಂಡಿದ್ರಿ? ನಿಮ್ಮ ಮೊದಲ ಚಿತ್ರ ಯಾವುದು?
ಕೊಡ್ಲು ರಾಮಕೃಷ್ಣ ನಿರ್ದೇಶನದ ‘ಮಕ್ಕಳೇ ಮಾಣಿಕ್ಯ’ ಹಾಗೂ ದಿನೇಶ್ ಬಾಬು ನಿರ್ದೇಶನದ ‘ಸ್ವಾತಿಮುತ್ತು’ ಧಾರಾವಾಹಿಗೆ ಸಹಾಯಕನಾಗಿ ಕೆಲಸ ಮಾಡಿದೆ. ಈ ಧಾರಾವಾಹಿಗಳಲ್ಲಿ ಪರಿಚಯವಾದ ಅಂಬರೀಶ್ ಎಂಬುವವರು ನನಗೆ ‘ಜ್ವಲಂತಂ’ ಚಿತ್ರಕ್ಕೆ ಅವಕಾಶ ಕೊಡಿಸಿದರು. ಇಲ್ಲಿ ಘೋರನ ಪಾತ್ರ ಮಾಡಿದೆ. ಆ ನಂತರ ಸೋಜಿಗ, ಅಭಿಸಾರಿಕೆ, ಚೌಕ, ನೂರೊಂದು ನೆನಪು, ಜಾನ್ ಜಾನಿ ಜನಾರ್ಧನ್, ರೈಲ್ವೆ ಚಿಲ್ಡ್ರನ್, ಸಂಹಾರ, ಅಥರ್ವ, ಯಜಮಾನ, ಸೂಜಿದಾರ, ನಿರೂಪ್ ಬಂಜಾರಿ ಜತೆ ಚಿತ್ರ, ರವಿಚಂದ್ರನ್ ಜತೆ, ಉಪೇಂದ್ರ ಹಾಗೂ ರವಿಚಂದ್ರನ್ ಕಾಂಬಿನೇಷನ್ ಸಿನಿಮಾ, ಯಜಮಾನ ಚಿತ್ರದಲ್ಲಿ ದರ್ಶನ್ ಮುಂದೆ ಫೈಟ್ ಮಾಡಿದ್ದು... ಹೀಗೆ ಹಲವು ಚಿತ್ರಗಳಲ್ಲಿ ನಟಿಸುತ್ತ ಬಂದೆ. ಒಂದೊಂದು ಚಿತ್ರವೂ ಒಂದೊಂದು ರೀತಿಯ ಪಾತ್ರ ಕೊಟ್ಟವು. ಇದರ ಜತೆಗೆ ತಮಿಳಿ ‘ಮಾರ್ಗೆ’ಚಿತ್ರದಲ್ಲಿ ನಟಿಸಿದ್ದೇನೆ.

- ಚಿತ್ರರಂಗಕ್ಕೆ ಬಂದ ಮೇಲೆ ನಿಮಗೆ ಸವಾಲು ಅನಿಸುತ್ತಿರುವುದೇನು?
 ವಾಯ್ಸ್ ಮಾಡಿಲೇಷನ್‌ಗೆ ಸಾಕಷ್ಟು ಪ್ರಯತ್ನ. 20-30 ವರ್ಷ ನಮ್ಮ ಜತೆ ಇರೋ ಭಾಷೆ. ಏನೇ ಮಾತನಾಡಿದರೂ ದಕ್ಷಿಣ ಕನ್ನಡದ ಶೈಲಿ, ತುಳು ಭಾಷೆ ನುಸುಳುಬಿಡುತ್ತೆ. ಪಾತ್ರಕ್ಕೆ ತಕ್ಕಂತೆ ಯಾವ ಶೈಲಿಯಲ್ಲಿ ಮಾತನಾಡಬೇಕು ಎಂಬುದು ನನಗೆ ಒಂಚೂರು ಸವಾಲು ಅನಿಸುತ್ತಿದೆ.

ನಿಮ್ಮನ್ನು ತಲುಪಿಸಿದ ನಿಮ್ಮ ಬದುಕಿನ ಪಯಣ ಹೇಗಿತ್ತು?
ಚಿಕ್ಕಂದಿನಲ್ಲೇ ಅಪ್ಪನನ್ನ ಕಳೆದುಕೊಂಡೆ. ಹೋಟೆಲ್‌ನಲ್ಲಿ ಕ್ಲೀನಿಂಗ್ ಕೆಲಸ ಮಾಡಿದೆ. ನಂತರ ಸಪ್ಲೇರ್ ಆದೆ, ಕ್ಯಾಶೀಯರ್ ಜಾಗದಲ್ಲಿ ಕೂತುಕೊಂಡೆ. ಲಾಡ್ಜ್‌ನಲ್ಲಿ ರೂಮ್ ಬಾಯ್ ಆದೆ. ನೈಟ್ ರೂಮ್ ಬಾಯ್, ಹಗಲು ವಿದ್ಯಾರ್ಥಿ, ಬೆಳಗ್ಗಿನ ಜಾವ ಹಾಲು ಮಾರುವ ಹುಡುಗ. ಹೀಗೆ ಒದ್ದಾಡಿಕೊಂಡು ಬದುಕು ರೂಪಿಸಿಕೊಂಡ ಬೆಂಗಳೂರಿಗೆ ಬಂದಿರುವೆ. ಏನೂ ಮಾಡಕ್ಕೆ ಆಗಲ್ಲ.

- ನೀವು ತಿಳಿದುಕೊಂಡಂತೆ ನಟನೆ ಎಂದರೇನು?
ಟ್ಯಾಲೆಂಟ್ ಹುಟ್ಟಿನಿಂದ ಬಂದಿರುತ್ತದೆ. ಟ್ಯಾಲೆಂಟ್ ಯಾವಾಗ ಕೈ ಕೊಡುತ್ತೋ ಗೊತ್ತಾಗಲ್ಲ. ಆದರೆ, ಸ್ಕಿಲ್ ಯಾವತ್ತೂ ಕೈ ಕೊಡಲ್ಲ. ಟ್ಯಾಲೆಂಟ್ ಕೈ ಕೊಟ್ಟಾಗ ಸ್ಕಿಲ್ ಬಳಸಬೇಕು. ಸ್ಕಿಲ್ ನಾವು ಕ್ರಿಯೇಟ್ ಮಾಡಿಕೊಂಡಿರುವ ಕಲೆ. ಬ್ರೆಕ್ಟ್- ನೀನು ಅಳು, ಜನ ಯೋಚಿಸಬೇಕು ಅಂತಾನೆ. ಮೈಕಲ್ ಚೆಕಾವೋ- ಸೈಕಾಲಜಿಕಲ್ ಗೆಸ್ ಅನ್ನು ಯೂಸ್ ಮಾಡು ಅಂತಾನೆ. ಅಂದರೆ ನಮ್ಮ ಮನಸ್ಸಿನೊಳಗಿನ ಭಾವನಗಳು ಬಾಡಿ ಲಾಗ್ವೇಜ್‌ನಲ್ಲಿ ಕಾಣಬೇಕು ಎಂಬುದು ಅವನ ಥಿಯರಿ.

-ಆರ್. ಕೇಶವಮೂರ್ತಿ