Asianet Suvarna News Asianet Suvarna News

ಸರ್ಕಾರ-ಅತಿಥಿ ಉಪನ್ಯಾಸಕರ ಹಗ್ಗ ಜಗ್ಗಾಟ: ವಿದ್ಯಾರ್ಥಿಗಳ ಪರದಾಟ

ಅತಿಥಿ ಉಪನ್ಯಾಸಕರ ಮುಷ್ಕರಿಂದ ತರಗತಿಗಳು ಸರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಕಾಯಂ ಶಿಕ್ಷಕರೇ ಹೆಚ್ಚುವರಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಕೆಲ ವಿಷಯಗಳಿಗೆ ಕಾಯಂ ಶಿಕ್ಷಕರೂ ಇಲ್ಲ. ಇದರಿಂದ ತರಗತಿ ನಡೆಸಲು ತೊಂದರೆ ಆಗುತ್ತಿದೆ. 

Students Faces Problems For Conflict Between Government and Guest Lecturers in Kolar grg
Author
First Published Dec 17, 2023, 2:00 AM IST

ಕೋಲಾರ(ಡಿ.17):  ಕಾಯಂ ಮಾಡುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಮುಷ್ಕರವು ಶುಕ್ರವಾರಕ್ಕೆ ೨೨ ದಿನಗಳು ಕಳೆದಿರುವುದರಿಂದ ಕೋಲಾರ ನಗರ ಸೇರಿದಂತೆ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಗತಿಗಳು ಸರಿಯಾಗಿ ನಡೆಯದೆ ವಿದ್ಯಾರ್ಥಿಗಳು ತೊಂದರೆಗೆ ಸಿಲುಕುವ ಪರಿಸ್ಥಿತಿ ಒದಗಿಬಂದಿದೆ.

ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆಯೂ ಕಾಡುತ್ತಿದ್ದು, ಪಾಠ ಮಾಡಲು ತೊಂದರೆ ಉಂಟಾಗಿದೆ. ಜನವರಿ ಅಂತ್ಯದಲ್ಲಿ ಪರೀಕ್ಷೆಗಳು ನಡೆಯಲಿದ್ದು, ಕೆಲ ಕಾಲೇಜುಗಳಲ್ಲಿ ಇಲ್ಲಿವರೆಗೆ ಶೇ.೫೦ರಷ್ಟು ಪಾಠ ಪೂರ್ತಿಯಾಗಿಲ್ಲ.

ಅನುದಾನಿತ ಶಿಕ್ಷಕರಿಗೂ ಜ್ಯೋತಿ, ಸಂಜೀವಿನಿ ವಿಸ್ತರಣೆಗೆ ಪರಿಶೀಲನೆ; ಸಿಎಂ ಭರವಸೆ

ತರಗತಿಗಳು ನಡೆಯದ ಕಾರಣ ವಿದ್ಯಾರ್ಥಿಗಳು ವಿಧಿ ಇಲ್ಲದೆ ಅಲೆದಾಡುವ ಪರಿಸ್ಥಿತಿ ಒದಗಿದೆ, ಈ ವೇಳೆಗಾಗಲೇ ಶೇ ೭೫ರಷ್ಟು ಪಾಠ ಪೂರ್ಣಗೊಂಡಿರಬೇಕಿತ್ತು. ಹೆಚ್ಚುವರಿ ತರಗತಿ ನಡೆಸುವಂತೆ ಕಾಯಂ ಉಪನ್ಯಾಸಕರಿಗೆ ಸೂಚನೆ ನೀಡಲಾಗಿದೆ. ಗ್ರಂಥಾಲಯಕ್ಕೆ ಹೋಗಿ ಓದುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಿದ್ದೇವೆ. ಆದರೆ, ಕೆಲವರು ಅಡ್ಡಾಡುವುದು ಕಂಡು ಬರುತ್ತಿದೆ’ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎನ್. ಶ್ರೀನಿವಾಸಗೌಡ ವಿವರಿಸಿದ್ದಾರೆ.

ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೧,೭೫೦ ವಿದ್ಯಾರ್ಥಿಗಳು ಇದ್ದಾರೆ. ೪೭ ಅತಿಥಿ ಉಪನ್ಯಾಸಕರು ಇದ್ದಾರೆ. ಅವರಾರೂ ೧೮ ದಿನಗಳಿಂದ ತರಗತಿಗೆ ಬರುತ್ತಿಲ್ಲ. ಕೇವಲ ೩೭ ಕಾಯಂ ಉಪನ್ಯಾಸಕರು ಇದ್ದಾರೆ. ಆದರೆ, ಇಂಗ್ಲೀಷ್, ಕೆಮಿಸ್ಟ್ರಿ ಹಾಗೂ ಕಂಪ್ಯೂಟರ್ ಸೈನ್ಸ್, ಬಾಟನಿ ವಿಷಯಗಳಿಗೆ ಒಬ್ಬರೂ ಕಾಯಂ ಇಲ್ಲ. ಅತಿಥಿ ಉಪನ್ಯಾಸಕರೇ ನಿಭಾಯಿಸಬೇಕಾಗಿದೆ. ಅವರೆಲ್ಲಾ ತರಗತಿ ಬಹಿಷ್ಕರಿಸಿರುವುದರಿಂದ ಈ ವಿಷಯಗಳ ಪಾಠ ನಿಂತು ಹೋಗಿದೆ. ದಿನಕ್ಕೆ ಸರಾಸರಿ ೪೯ ಗಂಟೆ ಪಾಠ ನಷ್ಟವಾಗುತ್ತಿದೆ.

ನಗರದ ಬಾಲಕಿಯರ ಸರ್ಕಾರಿ ಪದವಿ ಕಾಲೇಜಿನಲ್ಲಿ ೩,೨೦೦ ವಿದ್ಯಾರ್ಥಿನಿಯರು ಇದ್ದಾರೆ. ಇವರಿಗೆ ಇರುವುದು ಕೇವಲ ೩೭ ಕಾಯಂ ಶಿಕ್ಷಕರು. ಇಲ್ಲಿ ೭೫ ಮಂದಿ ಅತಿಥಿ ಉಪನ್ಯಾಸಕರಿದ್ದು, ಅವರೆಲ್ಲಾ ಈಗ ಗೈರಾಗುತ್ತಿದ್ದಾರೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ.

ಜಿಲ್ಲೆಯಲ್ಲಿ ೧೧ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿವೆ. ಕೋಲಾರ (೩), ವೇಮಗಲ್ (೧), ಬಂಗಾರತಿರುಪತಿ (೧), ದೇವರಾಯ ಸಮುದ್ರ (೧), ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್, ಬಂಗಾರಪೇಟೆ (ತಲಾ ೧) ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಅತಿಥಿ ಉಪನ್ಯಾಸಕರ ಮುಷ್ಕರಿಂದ ತರಗತಿಗಳು ಸರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಕಾಯಂ ಶಿಕ್ಷಕರೇ ಹೆಚ್ಚುವರಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಕೆಲ ವಿಷಯಗಳಿಗೆ ಕಾಯಂ ಶಿಕ್ಷಕರೂ ಇಲ್ಲ. ಇದರಿಂದ ತರಗತಿ ನಡೆಸಲು ತೊಂದರೆ ಆಗುತ್ತಿದೆ ಎಂದು ಕೋಲಾರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಎನ್.ಶ್ರೀನಿವಾಸಗೌಡ ತಿಳಿಸಿದ್ದಾರೆ. 

ಡಿಸಿಇಟಿ-2023: ಡಿ.16ರಿಂದ ಕ್ಯಾಶುಯಲ್ ತೆರವು ಹಂತದ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ

ನಮ್ಮ ಮುಷ್ಕರದಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವುದು ನಿಜ. ಆದರೆ, ನಮಗೆ ಆಗುತ್ತಿರುವ ತೊಂದರೆಯನ್ನು ಅಲಿಸುವವರು ಯಾರು? ನಮ್ಮ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ, ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಅಧ್ಯಕ್ಷ ನಾಗನಾಳ ಮುನಿಯಪ್ಪ ಹೇಳಿದ್ದಾರೆ. 

ನಾವು ತರಗತಿಗೆ ಬರುತ್ತೇವೆ. ಪಾಠ ಮಾಡಲು ಉಪನ್ಯಾಸಕರೇ ಇಲ್ಲವಲ್ಲ. ಹೀಗಾಗಿ, ದೂರದ ಹಳ್ಳಿಗಳಿಂದ ನಿತ್ಯ ಕಾಲೇಜಿಗೆ ಬಂದು ವಾಪಸ್ ತೆರಳುತ್ತಿದ್ದೇವೆ. ಕೆಲವೊಂದು ತರಗತಿ ಮಾತ್ರ ನಡೆಯುತ್ತಿದೆ. ಮುಂದೇನು ಎಂಬುದು ನಮಗೂ ಗೊತ್ತಿಲ್ಲ ಎಂದು ಕೋಲಾರದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ತಿಳಿಸಿದ್ದಾರೆ. 

Follow Us:
Download App:
  • android
  • ios