Asianet Suvarna News Asianet Suvarna News

ಮಕ್ಕಳಿಗಿನ್ನೂ ಇಲ್ಲ ಶೂ-ಸಾಕ್ಸ್‌ ಭಾಗ್ಯ: ಬರಿಗಾಲಲ್ಲಿ ಶಾಲೆಗೆ ಬರುತ್ತಿದ್ದಾರೆ ಬಡವರ ಮಕ್ಕಳು..!

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳು ಶೂ, ಸಾಕ್ಸ್‌ ಭಾಗ್ಯದಿಂದ ವಂಚಿತರಾಗಿದ್ದು, ಬರಿಗಾಲಲ್ಲಿ ಶಾಲೆಗೆ ಬರುವಂತಾಗಿದೆ.

School Children's Not Yet Get Shoe Socks in Belagavi grg
Author
First Published Nov 18, 2022, 7:32 PM IST

ಸಿದ್ದಯ್ಯ ಹಿರೇಮಠ

ಕಾಗವಾಡ(ನ.18): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದ ಶೂ ಮತ್ತು ಸಾಕ್ಸ್‌ ಭಾಗ್ಯ ಯೋಜನೆಯಡಿ ಈ ಬಾರಿ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಆರು ತಿಂಗಳು ಗತಿಸಿದರೂ ಕೂಡ ಶೂ ಮತ್ತು ಸಾಕ್ಸ್‌ ವಿತರಿಸಿಲ್ಲ. ಇದರಿಂದಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳು ಶೂ, ಸಾಕ್ಸ್‌ ಭಾಗ್ಯದಿಂದ ವಂಚಿತರಾಗಿದ್ದು, ಬರಿಗಾಲಲ್ಲಿ ಶಾಲೆಗೆ ಬರುವಂತಾಗಿದೆ.

ಅಥಣಿ ಹಾಗೂ ಕಾಗವಾಡ ತಾಲೂಕಿನ 34 ಕ್ಲಸ್ಟರ್‌ಗಳ 429 ಸರ್ಕಾರಿ ಪ್ರಾಥಮಿಕ ಶಾಲೆಗಳು, ಹಾಗೂ 97 ಪ್ರೌಢಶಾಲೆಗಳಿವೆ. 1ರಿಂದ 10ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್‌ ವಿತರಣೆಗೆ ಸರ್ಕಾರ ಆದೇಶಿಸಿದ್ದು, ಎರಡೂ ತಾಲೂಕುಗಳಲ್ಲಿ ಸುಮಾರು 75 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಶೂ-ಮತ್ತು ಸಾಕ್ಸ್‌ಗೆ ತರಗತಿವಾರು ದರ ನಿಗದಿಪಡಿಸಲಾಗಿದೆ. 1ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಜೊತೆಗೆ .265 ಹಾಗೂ 6ರಿಂದ 8ನೇ ತರಗತಿಯವರೆಗೆ ಒಂದು ಜೋಡಿಗೆ .295 ಹಾಗೂ 9ರಿಂದ 10ನೇ ತರಗತಿವರೆಗೆ ಒಂದು ಜೋಡಿಗೆ .325 ನಿಗದಿಪಡಿಸಲಾಗಿದೆ. ಈ ಹಣದಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಶೂ ಮತ್ತು 2 ಜೊತೆ ಸಾಕ್ಸ್‌ ಖರೀದಿಸುವಂತೆ ಸೂಚಿಸಿ ಶಿಕ್ಷಣ ಇಲಾಖೆ ಆಯಾ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯಶಿಕ್ಷಕರ ಜಂಟಿ ಖಾತೆಗೆ ಅನುದಾನ ವರ್ಗಾವಣೆ ಮಾಡಿದೆ.

ಶಿಕ್ಷಣ ಬದಲಾವಣೆಯ ಸಾಧನ: ವೆಂಕಯ್ಯ ನಾಯ್ಡು

ಹಣ ಜಮೆಯಾಗಿ ಹಲವಾರು ದಿನಗಳು ಗತಿಸಿದರೂ ವಿದ್ಯಾರ್ಥಿಗಳಿಗೆ ಶೂ-ಮತ್ತು ಸಾಕ್ಸ್‌ ಭಾಗ್ಯ ದೊರೆಯದಿರುವುದು ಬಡ ಮಕ್ಕಳ ಆಸæಗೆ ತಣ್ಣೀರು ಎರಚಿದಂತಾಗಿದೆ. ಹಣ ಜಮೆಯಾದ ತಕ್ಷಣ ಶಾಲೆಗಳ ಎಸ್‌ಡಿಎಂಸಿ ಸಭೆ ಕರೆದು ಠರಾವು ಪಾಸ್‌ ಮಾಡಬೇಕು. ನಂತರದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು-ಮುಖ ಗುರುಗಳು ಹಾಗೂ 5 ಜನ ಸಮಿತಿ ಸದಸ್ಯರು ಸೇರಿ ಶೂ-ಸಾಕ್ಸ್‌ ಖರೀದಿಸಬೇಕು. ಆದರೆ, ಶೈಕ್ಷಣಿಕ ವರ್ಷ ಆರಂಭದ ಜೂನ್‌ ಕೊನೆಯಲ್ಲಿ ಮಕ್ಕಳಿಗೆ ಶೂ-ಸಾಕ್ಸ್‌, ಪಠ್ಯ ಪುಸ್ತಕ ಸಮವಸ್ತ್ರ, ಸೈಕಲ್‌ ವಿತರಿಸಬೇಕು. ಆದರೆ, ಶೈಕ್ಷಣಿಕ ವರ್ಷದ ಆರು ತಿಂಗಳು ಗತಿಸಿದರೂ ಮಕ್ಕಳಿಗೆ ಸೌಲಭ್ಯ ಕಲ್ಪಿಸದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶೂ ಹಾಗೂ ಸಾಕ್ಸ್‌ ಖರೀದಿಸುವುದು ಶಿಕ್ಷಣ ಇಲಾಖೆ ಆಯಾ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಮುಖ್ಯಶಿಕ್ಷಕರ ಜಂಟಿ ಖಾತೆಗೆ ಅನುದಾನ ವರ್ಗಾವಣೆ ಮಾಡಿದೆ. ಬರುವ ವಾರದೊಳಗಾಗಿ ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಅಂತ ಕಾಗವಾಡ ಬಿಇಒ ಎಂ.ಆರ್‌.ಮುಂಜೆ ಹಾಗೂ ಅಥಣಿ ಬಿಇಒ ಬಸವರಾಜ ತಳವಾರ ಹೇಳಿದ್ದಾರೆ. 

ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್‌ ಇನ್ನೂವರೆಗೆ ವಿತರಿಸಿಲ್ಲ. ಒಂದು ವಾರದೊಳಗಾಗಿ ವಿತರಿಸದಿದ್ದರೆ ತಾಲೂಕಿನಾದ್ಯಂತ ಹೋರಾಟ ಮಾಡಲಾಗುವುದು ಅಂತ ಕಾಗವಾಡ ಕರವೇ ತಾಲೂಕು ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ (ಬಮ್ನಾಳ) ತಿಳಿಸಿದ್ದಾರೆ. 
 

Follow Us:
Download App:
  • android
  • ios