Asianet Suvarna News Asianet Suvarna News

ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ಗುಡ್ ನ್ಯೂಸ್

  •  ಕೊರೋನಾ ಕಾರಣ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಮಧ್ಯಾಹ್ನದ ಬಿಸಿಯೂಟ
  •  ಅಡುಗೆ ಕೋಣೆ, ದಾಸ್ತಾನು ಕೊಠಡಿ, ಕುಡಿಯುವ ನೀರಿನ ಸ್ಥಳಗಳನ್ನು ಸ್ವಚ್ಛಗೊಳಿಸಲು ಸೂಚನೆ
mid Day Meal to start from october  21 in Karnataka Schools snr
Author
Bengaluru, First Published Oct 17, 2021, 7:32 AM IST

ಬೆಂಗಳೂರು (ಅ.17):  ಕೊರೋನಾ (Corona) ಕಾರಣ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಮಧ್ಯಾಹ್ನದ ಬಿಸಿಯೂಟ (Mid Day meal) ಗುರುವಾರದಿಂದ ಆರಂಭವಾಗಲಿದೆ. ಈ ನಿಮಿತ್ತ ಅಡುಗೆ ಕೋಣೆ (kuchen), ದಾಸ್ತಾನು ಕೊಠಡಿ, ಕುಡಿಯುವ ನೀರಿನ (Drinking Water) ಸ್ಥಳಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಶಿಕ್ಷಣ ಇಲಾಖೆ (education Department) ಸೂಚನೆ ನೀಡಿದೆ.

‘ಆಹಾರ ಧಾನ್ಯ ದಾಸ್ತಾನು ಪರಿಶೀಲಿಸಿಕೊಳ್ಳಿ. ಅವಧಿ ಮೀರಿದ ಪದಾರ್ಥಗಳನ್ನು ಬಳಕೆ ಮಾಡಬೇಡಿ. ಅಕ್ಷರ ದಾಸೋಹ (Akshara Dasoha) ಕಾರ್ಯಕ್ರಮದ ಅನುದಾನ ಬಳಸಿಕೊಂಡು ಸ್ಟೌವ್‌ ರಿಪೇರಿ ಇದ್ದರೆ ಮಾಡಿಸಿಕೊಳ್ಳಿ. ಅ.21 ರೊಳಗೆ ಅಕ್ಕಿ ಮತ್ತು ಗೋದಿ ಸರಬರಾಜಾಗಲಿದೆ. ಉಳಿದ ಆಹಾರ ಪದಾರ್ಥಗಳ (Food) ಖರೀದಿಗೆ ವಿದ್ಯಾರ್ಥಿಗಳ (Students) ಪರಿವರ್ತನಾ ವೆಚ್ಚ ಬಳಸಿಕೊಳ್ಳಿ’ ಎಂದು ಸೂಚಿಸಲಾಗಿದೆ.

‘ಅ.20 ರೊಳಗೆ ನಿಗದಿಪಡಿಸಿರುವಂತೆ ಶಾಲಾ ಸಿಬ್ಬಂದಿಯು ಆಹಾರ ಪದಾರ್ಥಗಳ ಗುಣಮಟ್ಟಪರಿಶೀಲಿಸಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಮುಖ್ಯ ಶಿಕ್ಷಕರನ್ನೇ ಹೊಣೆ ಮಾಡಲಾಗುವುದು. ಮುಖ್ಯ ಹಾಗೂ ಸಹಾಯಕ ಅಡುಗೆಯವರು ಕಡ್ಡಾಯವಾಗಿ ಕೋವಿಡ್‌ (Covid) ಎರಡೂ ಡೋಸ್‌ ಪಡೆದುಕೊಂಡಿರಬೇಕು’ ಎಂದು ವಿವರಿಸಲಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್‌ನಿಂದ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸ್ಥಗಿತ ಗೊಳಿಸಲಾಗಿತ್ತು. ಇದೀಗ 6 ರಿಂದ 10 ನೇ ತರಗತಿ ವರೆಗೆ ಶಾಲೆಗಳು ಆರಂಭವಾಗಿವೆ. 1 ರಿಂದ 5 ನೇ ತರಗತಿಯೂ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದೆ. ಕೊರೋನಾ ನಿಯಂತ್ರಣಕ್ಕೆ ಬಂದಿರುವುದರಿಂದ ಬಿಸಿಯೂಟವನ್ನು ಪುನರಾರಂಭಿಸಲಾಗುತ್ತಿದೆ.

ನೇರ ನಗದು

 

  ರಾಜ್ಯದ 1ರಿಂದ 8ನೇ ತರಗತಿ ವರೆಗಿನ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ 2021ರ ಮೇ ಮತ್ತು ಜೂನ್‌ ತಿಂಗಳ ಬೇಸಿಗೆ ರಜೆಯ ಆಹಾರ ಭದ್ರತಾ ಭತ್ಯೆಯ ಪರಿವರ್ತನಾ ವೆಚ್ಚವನ್ನು (ಕುಕಿಂಗ್‌ ಕಾಸ್ಟ್‌) ನಗದು ರೂಪದಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ನಗದನ್ನು ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗಳಿಗೆ ನೇರ ವರ್ಗಾವಣೆಗೆ ತೀರ್ಮಾನಿಸಿದ್ದು, ಸಂಬಂಧಿಸಿದ ಎಲ್ಲ ಮಕ್ಕಳ ಬ್ಯಾಂಕ್‌ ಖಾತೆಗಳ ಮಾಹಿತಿ ಸಂಗ್ರಹಿಸಿ ನೀಡುವಂತೆ ರಾಜ್ಯದ ಎಲ್ಲಾ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್‌ ಸೂಚನೆ ನೀಡಿದ್ದಾರೆ.

SSLC ವಿದ್ಯಾರ್ಥಿಗಳ ಪರೀಕ್ಷಾ ಕೊಠಡಿ ಮಾಹಿತಿಗೆ ಎಸ್‌ಎಂಎಸ್‌..!

ಕಳೆದ ವರ್ಷ ಕೋವಿಡ್‌ ಕಾರಣದಿಂದ ಶಾಲೆಗಳು ಭೌತಿಕವಾಗಿ ನಡೆಯದ ಕಾರಣ ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತವಾಗಿತ್ತು. ಇದಕ್ಕೆ ಪರ್ಯಾಯವಾಗಿ ಆಹಾರ ಧಾನ್ಯಗಳನ್ನು ಮಕ್ಕಳ ಮನೆಬಾಗಿಲಿಗೇ ಇಲಾಖೆ ತಲುಪಿಸಿತ್ತು. ಅದೇ ರೀತಿ ಪ್ರತೀ ವರ್ಷ ಬೇಸಿಗೆ ರಜೆ ಅವಧಿಯಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಲಾಗಿತ್ತು.

Follow Us:
Download App:
  • android
  • ios