ರಾಯ​ಚೂರಿನಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಗೆ ರಾಷ್ಟ್ರೀಯ ಮಹತ್ವದ ಶಿಕ್ಷಣ ಸಂಸ್ಥೆ ಸ್ಥಾನಮಾನ ನೀಡುವ ಮಸೂದೆಗೆ ಸಂಸತ್ತು ಅಂಗೀಕಾರಿಸಿದ್ದು, ಇದಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ ಅಭಿನಂದನೆ ತಿಳಿಸಿದ್ದಾರೆ.

ಬೆಂಗಳೂರು, (ಸೆ.23) :ಕರ್ನಾಟಕದ ರಾಯ​ಚೂರಿನಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಸೇರಿ ದೇಶದ 5 ಐಐಐಟಿಗಳಿಗೆ ರಾಷ್ಟ್ರೀಯ ಮಹತ್ವದ ಶಿಕ್ಷಣ ಸಂಸ್ಥೆ ಸ್ಥಾನಮಾನ ನೀಡುವ ಮಸೂದೆಗೆ ಸಂಸತ್ತು ಅಂಗೀಕಾರದ ಮುದ್ರೆಯೊತ್ತಿದೆ. ಇದಕ್ಕೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 

Add Asianetnews Kannada as a Preferred SourcegooglePreferred

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸವದಿ, ರಾಯಚೂರು ಸೇರಿದಂತೆ ದೇಶದ ಐದು ಕಡೆಗಳಲ್ಲಿ ಕಾರ್ಯ ನಿರ್ವಹಿಸಲಿರುವ ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಇನ್‍ಫಾರ್ಮೇಷನ್ ಟೆಕ್ನಾಲಜಿ (ಐಐಐಟಿ)ಗಳಿಗೆ ರಾಷ್ಟ್ರೀಯ ಸಂಸ್ಥೆಗಳ ಸ್ಥಾನಮಾನ ನೀಡುವ ವಿಧೇಯಕವನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿರುವುದರಿಂದ ರಾಯಚೂರಿನ ಐಐಐಟಿ ಸಂಸ್ಥೆಯ ಚಟುವಟಿಕೆಗಳಿಗೆ ಹೆಚ್ಚಿನ ಚಾಲನೆ ಸಿಕ್ಕಿದಂತಾಗಿರುವುದು ಅತ್ಯಂತ ಸಂತೋಷದ ಸಂಗತಿ. ಈ ಬಗ್ಗೆ ನಾನು ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂಬುದಾಗಿ ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ರಾಯಚೂರು: ಎಂಜಿನಿಯರಿಂಗ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಐಐಐಟಿ ಪ್ರಾರಂಭ

ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ಐಐಐಟಿಯನ್ನು ಅತೀ ಶೀಘ್ರವಾಗಿ ಕಾರ್ಯಾರಂಭಿಸಬೇಕೆಂಬುದು ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಕಳೆದ ಮಾರ್ಚ್‍ನಲ್ಲಿಯೇ ಲೋಕಸಭೆಯಲ್ಲಿ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಗಿದ್ದು, ಈಗ ರಾಜ್ಯಸಭೆಯಲ್ಲೂ ಈ ವಿಧೇಯಕವನ್ನು ಅಂಗೀಕರಿಸಿರುವುದರಿಂದ ರಾಯಚೂರಿನ ಐಐಐಟಿಯು ಸಂಪೂರ್ಣ ಸಾಕಾರಗೊಂಡಂತಾಗಿದೆ. ಈ ಬಗ್ಗೆ ಆಸಕ್ತಿವಹಿಸಿ ವಿಶೇಷ ಪ್ರಯತ್ನ ನಡೆಸಿದ ಸನ್ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀ, ಕೇಂದ್ರದ ಶಿಕ್ಷಣ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್, ಗೃಹ ಸಚಿವರಾದ ಶ್ರೀ ಅಮಿತ್ ಶಾ, ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರಿಗೆ ನಾನು ವಂದನೆಗಳನ್ನು ತಿಳಿಸಬಯಸುತ್ತೇನೆ ಎಂದಿದ್ದಾರೆ.

ಈ ಐಐಐಟಿ ಗೆ ಹಸಿರು ನಿಶಾನೆ ಸಿಕ್ಕಿರುವುದರಿಂದ ಕರ್ನಾಟಕದ ಶೈಕ್ಷಣಿಕ ಕ್ಷೇತ್ರವು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೌರವಕ್ಕೆ ಪಾತ್ರವಾಗಿದೆ. ಐಐಐಟಿಗಳಿಗೆ ಪದವಿಯಿಂದ ಹಿಡಿದು ಪಿಹೆಚ್.ಡಿ.ವರೆಗೆ ವಿವಿಧ ಉನ್ನತ ಶಿಕ್ಷಣಗಳ ಪದವಿಗಳನ್ನು ನೀಡುವ ಕಾನೂನುಬದ್ಧ ಅರ್ಹತೆಯು ಈ ಮಸೂದೆಯಿಂದ ಸಿಕ್ಕಿದಂತಾಗಿದೆ ಎಂದು ಹೇಳಿದ್ದಾರೆ.

ಧಾರವಾಡದಲ್ಲಿ IIT, ರಾಯಚೂರಿನಲ್ಲಿ IIIT ನಿರ್ಮಾಣ ಕಾಮಗಾರಿಗೆ ಮೋದಿ ಚಾಲನೆ

ನಮ್ಮ ರಾಜ್ಯಕ್ಕೆ ಕೇಂದ್ರದ ವರದಾನವಾಗಿರುವ ಈ ಮಹತ್ವಪೂರ್ಣ ಶಿಕ್ಷಣ ಕೇಂದ್ರವು ಯಶಸ್ವಿಯಾಗಿ ಕೆಲಸ ನಿರ್ವಹಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಕ್ಕೆ ನಮ್ಮ ರಾಜ್ಯ ಸರ್ಕಾರವೂ ಸಂಪೂರ್ಣ ಬದ್ಧವಾಗಿದೆ ಎಂದು ಮತ್ತೊಮ್ಮೆ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.