SSLC ರಿಸಲ್ಟ್: ದಕ್ಷಿಣ ಕನ್ನಡ 12 ಸ್ಥಾನಕ್ಕೆ ಕುಸಿದ್ರೂ, ಅನುಷ್ ಸಾಧನೆಯಿಂದ ಬೆಳಗಿತು ಜಿಲ್ಲೆಯ ಕೀರ್ತಿ
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಟಾಪ್ನಲ್ಲಿರುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಇದೀಗ 12ನೇ ಸ್ಥಾನಕ್ಕೆ ಕುಸಿದೆ. ಆದ್ರೆ, ಅನುಷ್ ಇಡೀ ರಾಜ್ಯಕ್ಕೆ ಟಾಪರ್ ಆಗುವ ಮೂಲಕ ಜಿಲ್ಲೆಯ ಕೀರ್ತಿ ಎತ್ತಿಹಿಡಿದಿದ್ದಾನೆ.
ದಕ್ಷಿಣ ಕನ್ನಡ, (ಆ.10): ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ 12 ಸ್ಥಾನಕ್ಕೆ ಕುಸಿದಿದ್ದರೂ, ಅನುಷ್ ಸಾಧನೆಯಿಂದ ಜಿಲ್ಲೆಯ ಕೀರ್ತಿ ಮತ್ತೆ ಬೆಳಗಿದೆ.
ಹೌದು...ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿ ಅನುಷ್ ಎ.ಎಲ್ 625ಕ್ಕೆ 625 ಅಂಕ ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಚಿತ್ರಗಳು: ಇವರೇ ಕರ್ನಾಟಕ SSLC ಟಾಪರ್ಸ್, 625ಕ್ಕೆ 625 ಅಂಕ ಪಡೆದ ಸಾಧಕರು
ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಯ ಈ ಸಾಧನೆಗೆ ಪೋಷಕರು ಹಾಗೂ ಶಿಕ್ಷಕ ವರ್ಗ ಸಂತಸ ವ್ಯಕ್ತಪಡಿಸಿದೆ.
ಮೆಸ್ಕಾಂ ಸಿಬ್ಬಂದಿಯಾಗಿರುವ ಲೋಕೇಶ್ ಹಾಗೂ ಉಷಾ ದಂಪತಿಗಳ ಮಗನಾಗಿರುವ ಅನುಷ್ ಬಾಲ್ಯದಿಂದಲೇ ಓದಿನಲ್ಲಿ ಮುಂದಿದ್ದು, ತನ್ನ ಓದಿನ ಸಾಮರ್ಥ್ಯವನ್ನು ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮವಾಗಿ ಹೊರಹೊಮ್ಮುವ ಮೂಲಕ ತೋರಿಸಿಕೊಟ್ಟಿದ್ದಾನೆ.
ತರಗತಿಯಲ್ಲಿ ಕಲಿತದ್ದನ್ನು ಮನೆಗೆ ಬಂದು ಮತ್ತೆ ಮತ್ತೆ ಪುನರಾವರ್ತನೆ ಮಾಡಿರುವುದೇ ಈ ಸಾಧನೆಯ ಹಿಂದಿನ ಶಕ್ತಿ ಎನ್ನುವುದು ಅನುಷ್ ನಂಬಿಕೆ. ಅನುಷ್ ಸಾಧನೆಯ ಹಿಂದೆ ಕುಮಾರಸ್ವಾಮಿ ಶಿಕ್ಷಣ ಸಂಸ್ಥೆಯ ಆಡಳಿತವರ್ಗ ಹಾಗೂ ಶಿಕ್ಷಕ ವೃಂದದ ಶ್ರಮವೂ ಇದೆ.
ರಾಜ್ಯದಲ್ಲಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ 12 ಸ್ಥಾನಕ್ಕೆ ಕುಸಿದಿದ್ದರೂ, ಅನುಷ್ ಸಾಧನೆಯಿಂದ ಜಿಲ್ಲೆಯ ಕೀರ್ತಿ ಮತ್ತೆ ಬೆಳಗಿದೆ. ಎಲ್ಲಾ ವಿಷಯಗಳಲ್ಲೂ ಪೂರ್ಣ ಅಂಕಗಳನ್ನು ಗಳಿಸುವ ಮೂಲಕ ಅನುಷ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.