ಶಾಲೆ ಆರಂಭಕ್ಕೆ ಮುಹೂರ್ತ ಫಿಕ್ಸ್: ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ
ಕೊರೋನಾ ಭೀತಿಯಿಂದ ಶೈಕ್ಷಣಿಕ ಕ್ಷೇತ್ರ ನೆಲಕಚ್ಚಿದ್ದು, ಇದೀಗ ಶಾಲೆ ಪುನರಾರಂಭಿಸಲು ಸಿಎಂ ಅಧಿಕಾರಿಗಳಿಗೆ ಮಹತ್ವದ ಸೂಚನೆಯನ್ನು ಹೊರಡಿಸಿದ್ದಾರೆ.
ಹೈದರಾಬಾದ್, (ಜುಲೈ.31): ಸೆಪ್ಟೆಂಬರ್ 5 ರಿಂದ ಶಾಲೆಗಳ ಪುನಾರಂಭ ಮಾಡಲು ಆಂಧ್ರಪ್ರದೇಶ ಸರ್ಕಾರ ಯೋಜನೆ ರೂಪಿಸಿದೆ.
ಸೆಪ್ಟಂಬರ್ 5 ರ ಶಿಕ್ಷಕರ ದಿನಾಚರಣೆಯೊಂದಿಗೆ ಶಾಲೆಗಳು ಪುನರಾರಂಭಗೊಳ್ಳಲಿದ್ದು, ಅದೇ ದಿನ 'ವೈ.ಎಸ್.ಆರ್. ವಿದ್ಯಾ ಕನುಕಾ' ಯೋಜನೆಗೆ ಚಾಲನೆ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಶಾಲೆ ಆರಂಭದ ದಿನವೇ ಸ್ಕೂಲ್ ಬ್ಯಾಗ್, ಪಠ್ಯ ಪುಸ್ತಕ, ನೋಟ್ಬುಕ್, 3 ಜೊತೆ ಸಮವಸ್ತ್ರಕ್ಕೆ ಬಟ್ಟೆ, 1 ಜೊತೆ ಶೂ, 2 ಜೊತೆ ಸಾಕ್ಸ್ ಮತ್ತು ಬೆಲ್ಟ್ ಒಳಗೊಂಡ ಕಿಟ್ ನೀಡಲಾಗುವುದು.
1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ..!
ಕಿಟ್ ನಲ್ಲಿ ಮಾಸ್ಕ್ ಗಳನ್ನು ಕೂಡ ನೀಡಲಿದ್ದು, ಅವುಗಳನ್ನು ಬಳಸುವ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎಂದು ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೆಪ್ಟಂಬರ್ 5ರ ವೇಳೆಗೆ ಪರಿಸ್ಥಿತಿ ಸುಧಾರಿಸಬಹುದು. ಶಿಕ್ಷಕರ ದಿನಾಚರಣೆಯೊಂದಿಗೆ ಶಾಲೆಗಳ ಪುನಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆ ಎಲ್ಲಾ ರೀತಿಯ ಸಿದ್ದತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಮತ್ತೊಂದೆಡೆ ಪ್ರಸ್ತುತ ಆಂಧ್ರ ಪ್ರದೇಶದಲ್ಲಿ ಒಟ್ಟು 1,40,933 ಕೊರೋನಾ ಪ್ರಕರಣಗಳು ಇದ್ದು, ಒಟ್ಟು ಸಾವಿನ ಸಂಖ್ಯೆ 1,349 ಇದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಆಂಧ್ರಪ್ರದೇಶ ಮೂ3ನೇ ಸ್ಥಾನದಲ್ಲಿದೆ. ಆದ್ರೂ ಶಾಲೆಗಳನ್ನ ಆರಂಭಿಸಲು ಮುಂದಾಗಿದೆ.
ಇನ್ನು ಕರ್ನಾಟಕದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಶಾಲೆ ಆರಂಭಕ್ಕೆ ಇನ್ನೂ ತೀರ್ಮಾನಿಸಿಲ್ಲ. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹಿರಿಯ ಸಲಹೆಗಳನ್ನ ಪಡೆದುಕೊಳ್ಳುತ್ತಿದ್ದಾರೆ.