'ನಾನ್ಯಾಕೆ ಕುಮಾರಸ್ವಾಮಿ ನಾಯಕತ್ವ ಪ್ರಶ್ನೆ ಮಾಡ್ಲಿ'
ಹೆಚ್.ಡಿ. ಕುಮಾರಸ್ವಾಮಿ ನಾಯಕತ್ವವನ್ನು ಪ್ರಶ್ನೆ ಮಾಡಿಲ್ಲ. ಅವರು ಯಾಕೆ ಆ ರೀತಿ ತಿಳಿದುಕೊಂಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದ ಬಸವರಾಜ್ ಹೊರಟ್ಟಿ| ಶಾಸಕರಾಗಿ ನಾವು ಕೆಲವೊಂದು ವಿಷಯಗಳನ್ನು ಹೇಳಿದ್ದೇವೆ ಅಷ್ಟೇ, ಹೇಳೋದು ತಪ್ಪಾ?| ನಾವೇನು ಅವರ ನಾಯಕತ್ವ ಪ್ರಶ್ನೆ ಮಾಡಿಲ್ಲ| ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಸರಿಯಾಗಿ ನಡೆದುಕೊಂಡು ಹೋಗುವಂತೆ ಎಲ್ಲರಿಗೂ ಹೇಳಿದ್ದಾರೆ| ಆ ಪ್ರಕಾರ ನಡದುಕೊಳ್ಳುತ್ತೇವೆ|
ಹುಬ್ಬಳ್ಳಿ(ಅ.19): ಸಮ್ಮಿಶ್ರ ಸರ್ಕಾರ ಸಂದರ್ಭದಲ್ಲಿ ನಮ್ಮನ್ನು ಕಡೆಗಣಿಸಿರುವ ಬಗ್ಗೆ ಚರ್ಚಿಸಿದ್ದೇವೆಯೇ ಹೊರತು ನಾವು ಪಕ್ಷದ ನಾಯಕತ್ವವನ್ನು ಪ್ರಶ್ನೆ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟನೆ ನೀಡಿದ್ದಾರೆ.
‘ನನ್ನ ನಾಯಕತ್ವ ಬೇಡವಾದರೆ ಬೇರೆಯವರನ್ನು ನೋಡಿಕೊಳ್ಳಲಿ, ನನ್ನ ನಾಯಕತ್ವದ ಬಗ್ಗೆ ಹೊರಟ್ಟಿಸೇರಿ ಯಾರದ್ದೇ ಸರ್ಟಿಫಿಕೇಟ್ ಬೇಕಿಲ್ಲ’ ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಅವರು ಶುಕ್ರವಾರ ಈ ಪ್ರತಿಕ್ರಿಯೆ ನೀಡಿದರು. ನಾವು 11 ಜನ ಶಾಸಕರು ಸೇರಿಕೊಂಡು ನಮಗೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡಿದ್ದೇವೆಯೇ ಹೊರತು ಪಕ್ಷದ ಯಾವ ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿಲ್ಲ. ಕುಮಾರಸ್ವಾಮಿ ನಮ್ಮ ನಾಯಕರು. ಅವರು ಯಾಕೆ ಈ ಮಾತು ಹೇಳಿದರು ಎಂಬುದು ಗೊತ್ತಿಲ್ಲ. ಪಕ್ಷದ ಹಿತದೃಷ್ಟಿಯಿಂದ ನೇರವಾಗಿ ಮಾತನಾಡಿದ್ದೇವೆ. ಅದನ್ನು ತಪ್ಪು ತಿಳಿದುಕೊಂಡರೆ, ಅದು ನಮ್ಮ ತಪ್ಪಲ್ಲ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರತಿ ಚುನಾವಣೆಯಲ್ಲಿ ನಮ್ಮನ್ನು ಬಳಕೆ ಮಾಡಿಕೊಳ್ಳುವ ಪಕ್ಷ, ಸಮ್ಮಿಶ್ರ ಸರ್ಕಾರ ಇದ್ದಾಗ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಅಷ್ಟೇ ಅಲ್ಲ, ನಮಗೆ ಯಾವುದೇ ಮಾನ್ಯತೆ ನೀಡಲಿಲ್ಲ. ಈ ಬಗ್ಗೆ ಅಸಮಾಧಾನವಿದೆ ಎಂದು ಇದೇ ವೇಳೆ ಹೊರಟ್ಟಿ ಪುನರುಚ್ಚರಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ಕರೆ ಮಾಡಿ ಅ.18 ರಂದು ಬೆಂಗಳೂರಿಗೆ ಬರಲು ತಿಳಿಸಿದ್ದರು. ಆದರೆ, ಮೊದಲೇ ನಿಗದಿಯಾದ ಕಾರ್ಯಕ್ರಮ ಹಾಗೂ ವೈಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ಬರಲು ಆಗುತ್ತಿಲ್ಲ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನನ್ನ ಸಹಮತವಿದೆ ಎಂಬುದನ್ನು ದೇವೇಗೌಡರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.