Asianet Suvarna News Asianet Suvarna News

ಹುಬ್ಬಳ್ಳಿ ಸ್ಫೋಟ​: ನನ್ನ ಮಗನ ಕೈಯಲ್ಲೇಕೆ ಸ್ಫೋಟಕ ನೀಡಿದಿರಿ?

ನನಗೆ ನ್ಯಾಯ ಕೊಡಿಸಿ | ಸ್ಫೋಟ​ದಲ್ಲಿ ಗಾಯ​ಗೊಂಡ ಹುಸೇನಸಾಬ್‌ ತಾಯಿ ರಾಬಿಯಾ ಪ್ರಶ್ನೆ| ಘಟನೆಗೆ ಕಾರಣರಾದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮವಾಗಬೇಕು| ರಾಬಿಯಾ ರೈಲ್ವೆ ಪೊಲೀಸ್‌ ಠಾಣೆಗೆ ದೂರು| 

Hubballi Blast: Why Given Explosive to My Son
Author
Bengaluru, First Published Oct 23, 2019, 7:29 AM IST

ಹುಬ್ಬಳ್ಳಿ[ಅ.23]: ‘ನನ್ನ ಮಗನ ಕೈಗೆ ಹೇಗೆ ಸ್ಫೋಟಕ ಕೊಟ್ಟಿರಿ? ಇದಕ್ಕೆ ಹೊಣೆ ಯಾರು? ನನಗೆ ನ್ಯಾಯ ಕೊಡಿಸಿ. ಸೂಕ್ತ ಪರಿಹಾರ ಕೊಡಬೇಕು. ಘಟನೆಗೆ ಕಾರಣರಾದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮವಾಗಬೇಕು’ ಎಂದು ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ಫೋಟದಿಂದ ಕೈ ಸುಟ್ಟುಕೊಂಡಿರುವ ಹುಸೇನಸಾಬ್‌ ನಾಯಕವಾಲೆ ತಾಯಿ ರಾಬಿಯಾ ರೈಲ್ವೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಹುಸೇನ್‌ಸಾಬ್‌ ನಾಯಕವಾಲೆ ಕಳೆದ 10 ವರ್ಷಗಳಿಂದ ಕೌಸೀಫ್‌ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ ಇಬ್ಬರು ಸಹೋದರರಿದ್ದಾರೆ. ಅವರೂ ಇದೇ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಾರೆ. ಆ ಕ್ಯಾಂಟೀನ್‌ನಲ್ಲಿ ಚಹಾ ತೆಗೆದುಕೊಂಡು ಬಳ್ಳಾರಿ- ವಾಸ್ಕೋ, ಮೀರಜ್‌ವರೆಗೂ ಇವರು ರೈಲಿನಲ್ಲಿ ಸಂಚರಿಸಿ ಚಹಾ ಮಾರಾಟ ಮಾಡುತ್ತಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಚಹಾ ಮಾರಾಟವಾಗಿದ್ದರ ಆಧಾರದ ಮೇಲೆ ಇವರಿಗೆ ಶೇ. 10 ರಷ್ಟು ಕಮಿಷನ್‌ ನೀಡಲಾಗುತ್ತದೆಯಂತೆ. ಈತ ದಿನಕ್ಕೆ  300 ರಿಂದ . 500 ರವರೆಗೂ ದುಡಿತಾನಂತೆ. ಈತನಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಎರಡನೆಯ ಮಗಳು ಆರು ತಿಂಗಳ ಕೂಸು. ಈತನ ದುಡಿಮೆ ಮೇಲೆ ಈತನ ಕುಟುಂಬ ನಡೆಯುತ್ತದೆ. ಏನಿದು ನೋಡು ಎಂದು ಆರ್‌ಪಿಎಫ್‌ ಸಿಬ್ಬಂದಿ ಹೇಳಿದ್ದಕ್ಕೆ ಈತ ಅದನ್ನು ಒಡೆದಿದ್ದಾನೆ. ಅದರಿಂದ ಕೈ ಛಿದ್ರಗೊಂಡಿದೆ. ಇದಕ್ಕೆ ಹೊಣೆ ಯಾರು? ಇಂಥ ಪ್ರಯೋಗಗಳಿಗೆ ಬಡವರ ಮಕ್ಕಳೇ ಬೇಕಾ? ಎಂದು ರಾಬಿಯಾ ಪ್ರಶ್ನಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ತಿಳಿಸುತ್ತಾರೆ.

4ನೇ ತರಗತಿ:

ಹುಸೇನಸಾಬ್‌ ನಾಯಕವಾಲೆಯ ತಂದೆ ಜಹಾಂಗೀರಸಾಬ್‌ ಈಗಿಲ್ಲ. ಆದರೆ ಅವರು ಕೂಡ ಇದೇ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದರಂತೆ. ಜಹಾಂಗೀರಸಾಬ್‌ಗೆ ಇಬ್ಬರು ಪುತ್ರಿಯರು, ಮೂವರು ಪುತ್ರರು. ಅದರಲ್ಲಿ ಹುಸೇನಸಾಬ್‌ ಎರಡನೆಯವನು. ಹುಸೇನಸಾಬ್‌ ಸೇರಿದಂತೆ ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರ ಗಂಡಂದಿರು ಇದೇ ಕ್ಯಾಂಟೀನ್‌ನಲ್ಲೇ ಕೆಲಸ ಮಾಡುತ್ತಿದ್ದಾರೆ. ಹುಸೇನಸಾಬ್‌ ಬರೀ 4ನೇ ತರಗತಿ ಕಲಿತಿರುವುದು. ಮನೆಯಲ್ಲಿ ಬಡತನದಿಂದಾಗಿ ಈ ಮನೆಯಲ್ಲಿ ಯಾರೊಬ್ಬರೂ ಹೆಚ್ಚಿಗೆ ಓದಲು ಹೋಗದೇ ತಂದೆ ಮಾಡುತ್ತಿದ್ದ ಕೆಲಸಕ್ಕೆ ಸೇರಿದ್ದಾರೆ.

ನಮಗೆ ರೈಲ್ವೆ ಇಲಾಖೆಯಿಂದ ಗುರುತಿನ ಚೀಟಿ, ಶೂ, ಯುನಿಫಾರಂ ಎಲ್ಲ ಕೊಟ್ಟಿದ್ದಾರೆ. ನಾವು ಅಧಿಕೃತ ಚಹಾ ಮಾರಾಟ ಮಾಡುವವರು ಎಂದು ಸಹೋದರ ಇಮಾಮಸಾಬ್‌ ತಿಳಿಸುತ್ತಾನೆ. ಹುಸೇನಸಾಬ್‌ನ ಕೈಗೆ ಅದ್ಹೇಗೆ ಆರ್‌ಪಿಎಫ್‌ ಸಿಬ್ಬಂದಿ ಸ್ಪೋಟಕ ಕೊಟ್ಟರು? ಎಂಬ ಪ್ರಶ್ನೆ ಇದೀಗ ನಾಗರಿಕ ವಲಯದಲ್ಲಿ ಕಾಡುತ್ತಿದೆ.

ಚೇತರಿಕೆ:

ಈ ನಡುವೆ ಕಿಮ್ಸ್‌ನ ಪ್ಲಾಸ್ಟಿಕ್‌ ಸರ್ಜರಿ ವಿಭಾಗದಲ್ಲಿ ದಾಖಲಾಗಿರುವ ಹುಸೇನಸಾಬ್‌ ನಾಯಕವಾಲೆಗೆ ಮಂಗಳವಾರ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಕಿಮ್ಸ್‌ನ ವೈದ್ಯಕೀಯ ಮೂಲಗಳು ತಿಳಿಸಿವೆ.
 

Follow Us:
Download App:
  • android
  • ios