ಮಳೆಯಿಂದಾಗಿ ತಾಲೂಕಿನಲ್ಲಿ ಒಟ್ಟು 829 ಮನೆಗಳು ಬಿದ್ದಿವೆ| ಕಳೆದ 3 ದಿನಗಳಿಂದ ದಾಖಲೆಯ ಮಳೆ| ಕುಂಗೋಳದಲ್ಲಿ 110.5 ಮಿಮಿ ಮಳೆ| ಗುಡಗೇರಿ ವ್ಯಾಪ್ತಿಯಲ್ಲಿ 79.8 ಮಿಮಿ ಮಳೆ| ಬೆಣ್ಣಿಹಳ್ಳದ ಪ್ರವಾಹವು ಮತ್ತಷ್ಟು ಹೆಚ್ಚು| ಕುಂದಗೋಳ ಯರಗುಪ್ಪಿ ಮಧ್ಯೆ ಇರುವ ಹಳ್ಳ ತುಂಬಿ ಹರಿಯುತ್ತಿದೆ| ರಸ್ತೆ ಸಂಚಾರ ಸ್ಥಗಿತ|  

ಕುಂದಗೋಳ[ಅ.23]: ಪಟ್ಟಣದ ತಹಸೀಲ್ದಾರ್‌ ಕಚೇರಿಯ ಆವರಣದಲ್ಲಿ ನಿಂತಿರುವ ನೀರನ್ನು ಮಂಗಳವಾರ ಯಂತ್ರದ ಮೂಲಕ ಹೊರಹಾಕಲಾಯಿತು. ಸುತ್ತಮುತ್ತಲಿನ ಗಟಾರಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿ ನೀರು ಸಾಗಿಸಿದರು. ಮಳೆಯಿಂದಾಗಿ ತಾಲೂಕಿನಲ್ಲಿ ಒಟ್ಟು 829 ಮನೆಗಳು ಬಿದ್ದಿವೆ ಎಂದು ತಹಸೀಲ್ದಾರ್‌ ಅವರು ಮಾಹಿತಿ ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ಕಳೆದ 3 ದಿನಗಳಿಂದ ದಾಖಲೆಯ ಮಳೆಯಾಗಿದ್ದು, ಕುಂಗೋಳದಲ್ಲಿ 110.5 ಮಿಮಿ ಮಳೆಯಾಗಿದ್ದು ಗುಡಗೇರಿ ವ್ಯಾಪ್ತಿಯಲ್ಲಿ 79.8 ಮಿಮಿ ಮಳೆಯಾಗಿದೆ. ಬೆಣ್ಣಿಹಳ್ಳದ ಪ್ರವಾಹವು ಮತ್ತಷ್ಟುಹೆಚ್ಚಾಗಿದ್ದು ಕುಂದಗೋಳ ಯರಗುಪ್ಪಿ ಮಧ್ಯೆ ಇರುವ ಹಳ್ಳ ತುಂಬಿಹರಿಯುತ್ತಿದೆ. ಇದರಿಂದ ರಸ್ತೆ ಸಂಚಾರ ಸ್ಥಗಿತವಾಗಿದ್ದು ಕುಂದಗೋಳ-ಚಾಕಲಬ್ಬಿ ಮಧ್ಯೆ ಇರುವ ಹಳ್ಳ ತುಂಬಿ ಹರಿಯುತ್ತಿದ್ದು ಇಲ್ಲಿಯೂ ಸಂಚಾರ ಸ್ಥಗಿತವಾಗಿದೆ.

ಮ​ನೆ​ಗ​ಳಿಗೆ ನುಗ್ಗಿದ ನೀರು: ಪ್ರತಿ​ಭ​ಟ​ನೆ

ತಾಲೂಕಿನ ಗುಡಗೇರಿಯಲ್ಲಿ ಕಳೆದ 2 ದಿನಗಳಿಂದ ಸುರಿದ ಮಳೆಯಿಂದಾಗಿ ವಗೆಕೆರಿ, ಸಿದ್ದನಹೊಂಡ, ಹಾಗೂ ಕೋಟೆ ಹೊಂಡದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು ಇದರಿಂದ ಆ ಕುಟುಂಬಗಳು ಮಂಗಳವಾರ ಗ್ರಾಮ ಪಂಚಾಯ್ತಿ ಮುಂದೆ ಅಡಿಗೆ ಮಾಡುವ ಮೂಲಕ ಶಾಶ್ವತ ಆಶ್ರಯ ನೀಡಬೇಕೆಂದು ಆಗ್ರಹಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮುಂಜಾನೆ ಗ್ರಾಮ ಪಂಚಾಯ್ತಿಗೆ ಆಗಮಿಸಿದ ಸಂತ್ರ​ಸ್ತರು, ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗುತ್ತಿದ್ದು ಇದರಿಂದ ನಾವೆಲ್ಲರೂ ಬೀದಿಗೆ ಬಂದಿದ್ದೇವೆ. ನೀರು ಬರುವ ಮಾರ್ಗ ಬದಲಿಸಬೇಕು ಹಾಗೂ ನಮಗೆಲ್ಲ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಆಗ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೆನ್ನಬಸನಗೌಡ ಚಿಕ್ಕಗೌಡ್ರ ಮಾತ​ನಾ​ಡಿ, ಪಂಚಾಯ್ತಿಯಿಂದ ಶಾಶ್ವತ ಪರಿಹಾರ ನೀಡಲು ಆಗವುದಿಲ್ಲ. ತಾತ್ಕಾಲಿಕವಾಗಿ ವ್ಯವಸ್ಥೆ ಮಾಡುತ್ತೇವೆ ತಹಸೀಲ್ದಾರ ಹಾಗೂ ಶಾಸಕರೊಂದಿಗೆ ಸಮಾಲೋಚಿಸಿ ಸೂಕ್ತ ಪರಿಹಾರ ಕೊಡಿಸುವುದಾಗಿ ಹೇಳಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಮಹ್ಮದ ಕಿಲ್ಲೇದಾರ, ರಾಮಣ್ಣ ಪಶುಪತಿಹಾಳ, ಆನಂದ ಧರೆಣ್ಣವರ, ಹನುಮಂತ ನಾಯ್ಕರ, ದ್ಯಾಮವ್ವ ಹಿರೇಗೌಡ್ರ, ದ್ಯಾಮವ್ವ ಗೇಟಿ, ಶಂಕ್ರವ್ವ ನಾವಿ, ರಾಮಣ್ಣ ಮಲ್ಲಾಡ, ಸೇರಿದಂತೆ ನೂರಾರು ಜನರಿದ್ದರು.