ಪಾಲಿಕೆ ಚುನಾವಣೆಯಲ್ಲಿ 45 ವಾರ್ಡ್‌ ಪೈಕಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್‌ ಪಕ್ಷವು ಭರ್ಜರಿ ಜಯಭೇರಿ ಭಾರಿಸಲಿದೆ ಎಂದು ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ದಾವಣಗೆರೆ [ಅ.26]:  ಪಾಲಿಕೆ ಚುನಾವಣೆಯಲ್ಲಿ 45 ವಾರ್ಡ್‌ ಪೈಕಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್‌ ಜಯಭೇರಿ ಭಾರಿಸಲಿದ್ದು, ಕಳೆದ ಬಾರಿಯ ಫಲಿತಾಂಶವೇ ಪುನರಾವರ್ತನೆಯಾಗಲಿದೆ ಎಂದು ಮಾಜಿ ಸಚಿವ, ಪಾಲಿಕೆ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಸಮಿತಿ ಸದಸ್ಯ ಪಿ.ಟಿ.ಪರಮೇಶ್ವರ ನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಚುನಾವಣೆಯಲ್ಲಿ 40ಕ್ಕೂ ಹೆಚ್ಚು ವಾರ್ಡ್‌ ಗೆಲ್ಲುವ ಮೂಲಕ ಕಾಂಗ್ರೆಸ್‌ ಕ್ಲೀನ್‌ ಸ್ವೀಪ್‌ ಮಾಡಲಿದ್ದು, ಮತ್ತೆ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.

ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಗೆ ಪ್ರಥಮ ಹಂತದಲ್ಲೇ ನಗರ ಆಯ್ಕೆಯಾಗಲು ಕಾಂಗ್ರೆಸ್‌ ಉತ್ತಮ ಆಡಳಿತ, ಜನಪರ, ಅಭಿವೃದ್ಧಿ ಕಾರ್ಯಗಳೇ ಕಾರಣ. ಉತ್ತಮ ರಸ್ತೆ, ಒಳ ಚರಂಡಿ, ಮಳೆ ನೀರು ಚರಂಡಿ ನಿರ್ಮಿಸಿ, ಮಹಾ ನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿಸುವಲ್ಲಿ ಮಾಜಿ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಪರಿಶ್ರಮವಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಾಮನೂರು ಹಾಗೂ ಎಸ್ಸೆಸ್‌ಗೆ ದೂರದೃಷ್ಟಿಇರುವುದರಿಂದಲೇ ಉತ್ತಮ ಆಡಳಿತ ಸಾಧ್ಯವಾಗಿದೆ. ಇನ್ನು ಮುಂದೆಯೂ ಅಭಿವೃದ್ಧಿ ಕಾರ್ಯಗಳಾಗಲು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಇಲ್ಲಿನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು. ಈ ಮೂಲಕ ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯವೆಂಬುದನ್ನು ಎದುರಾಳಿಗಳಿಗೆ ತೋರಿಸಬೇಕು ಎಂದು ಪರಮೇಶ್ವರ ನಾಯ್ಕ ಮನವಿ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಡಾ.ಎಚ್‌.ಬಿ.ಅರವಿಂದ್‌, ಡಿ.ಎನ್‌.ಜಗದೀಶ, ಎ.ನಾಗರಾಜ, ವೆಂಕಟೇಶ ನಾಯ್ಕ, ಕೆ.ಎಲ್‌.ಹರೀಶ, ಮಹೇಶ ಪಟೇಲ್‌ ಇತರರು ಇದ್ದರು.