ಜೀವನದಲ್ಲಿ ಜಿಗುಪ್ಸೆ| ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕ| ಸಹೋದರ ಊರಿಗೆ ಹೋಗಿದ್ದಾಗ ಸಾವಿಗೆ ಶರಣು| ಬೆಂಗಳೂರಿನ ಮಹಾದೇವಪುರದಲ್ಲಿ ನಡೆದ ಘಟನೆ| ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ದೂರು ದಾಖಲು| 

ಬೆಂಗಳೂರು(ಮಾ.21): ಯುವಕನೊಬ್ಬ ತಲೆಗೆ ಪ್ಲಾಸ್ಟಿಕ್‌ ಕವರ್‌ ಕಟ್ಟಿಕೊಂಟು ವಿಷಾನಿಲ (ನೈಟ್ರೋಜನ್‌ ಗ್ಯಾಸ್‌) ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್‌ ಸಿಟಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಮಹದೇವಪುರದ ಲಕ್ಷ್ಮೀನಗರ ಲೇಔಟ್‌ ನಿವಾಸಿ ಜೀವನ್‌ ಅಂಬಟೆ (29) ಆತ್ಮಹತ್ಯೆ ಮಾಡಿಕೊಂಡ ಯುವಕ. ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಬೀದರ್‌ ಮೂಲದ ಜೀವನ್‌ ಅಂಬಟೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದು, ಕಳೆದ ಕೆಲ ವರ್ಷಗಳಿಂದ ಲಕ್ಷ್ಮೇನಗರ ಲೇಔಟ್‌ನಲ್ಲಿ ಸಹೋದರನೊಂದಿಗೆ ವಾಸವಿದ್ದರು. ಐದು ವರ್ಷಗಳಿಂದ ಜೀವನ್‌ ಅಮೆಜಾನ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಇತ್ತೀಚೆಗೆ ಯುವಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಕುಟುಂಬಸ್ಥರು, ಸಹೋದರ ಎಷ್ಟೇ ಬುದ್ಧಿವಾದ ಹೇಳಿದ್ದರೂ ಜೀವನ್‌ ಒತ್ತಡದಿಂದ ಹೊರ ಬಂದಿರಲಿಲ್ಲ.
ಕಳೆದ ಮಾ.13ರಂದು ರೂಮ್‌ನಲ್ಲಿ ಜೀವನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾ.16ರಂದು ಜೀವನ್‌ ರೂಮ್‌ನಿಂದ ದುರ್ವಾಸನೆ ಬರತೊಡಗಿತ್ತು. ಊರಿಗೆ ಹೋಗಿದ್ದ ಜೀವನ್‌ ಸಹೋದರನಿಗೆ ನೆರೆ ಮನೆ ನಿವಾಸಿಗಳು ಕರೆ ಮಾಡಿ ವಿಷಯ ತಿಳಿಸಿದ್ದರು. ಅಲ್ಲದೆ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಯಂತ್ರದ ರೀತಿಯಲ್ಲಿ ಜೀವನ: ಡೆತ್‌ನೋಟ್‌

ಜೀವನ್‌ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ ಬರೆದಿಟ್ಟಿರುವುದು ಪೊಲೀಸರಿಗೆ ಸಿಕ್ಕಿದೆ. ಟೇಬಲ್‌ವೊಂದರ ಮೇಲೆ ಸಿಕ್ಕ ಡೆತ್‌ನೋಟ್‌ನಲ್ಲಿ ‘ನಾನು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ನಾನು ಯಂತ್ರದ ರೀತಿ ಜೀವಿಸಿದ್ದೇನೆ. ಅದು ನನಗೆ ಇಷ್ಟವಿಲ್ಲ. ಅದಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇನೆ. ಇದಕ್ಕೆ ಯಾರೂ ಕಾರಣರಲ್ಲ’ ಎಂದು ಬರೆದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಸಾಲಬಾಧೆ: ಕೃಷಿ ಹೊಂಡಕ್ಕೆ ಹಾರಿ ಮೂವರು ಆತ್ಮಹತ್ಯೆ

ಸಾಯುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ!

ಆತ್ಮಹತ್ಯೆಗೂ ಜೀವನ್‌ ಮುನ್ನ ಸುಲಭವಾಗಿ ಸಾಯುವುದು ಹೇಗೆ? ಎಂಬುದನ್ನು ಅಂತಾರ್ಜಾಲದಲ್ಲಿ ಹುಡುಕಾಡಿದ್ದರು. ಈ ವೇಳೆ ಸಿಲಿಂಡರ್‌ನಲ್ಲಿ ಬರುವ ಮೊನಾಕ್ಸೈಡ್‌ ಮೂಲಕ ಸುಲಭವಾಗಿ ಸಾಯಬಹುದು ಎಂಬ ಅಂಶವನ್ನು ಗಮನಿಸಿದ್ದರು. ಕೂಡಲೇ ಸಿಲಿಂಡರ್‌ಗೆ ಬೇಕಾದ ಪೈಪ್‌ ಹಾಗೂ ಅದಕ್ಕೆ ಅಳವಡಿಸಬೇಕಾದ ಉಪಕರಣಗಳನ್ನು ಸಿದ್ಧಪಡಿಸಿಕೊಂಡಿದ್ದರು. ಬಳಿಕ ರೂಮ್‌ನಲ್ಲಿ ಬೀನ್‌ ಬ್ಯಾಗ್‌ ಮೇಲೆ ಕುಳಿತ ಸ್ಥಿತಿಯಲ್ಲಿ ನೈಟ್ರೋಜನ್‌ ಗ್ಯಾಸನ್ನು ಆಕ್ಸಿಜನ್‌ ಮಾಸ್ಕ್‌ ಮೂಲಕ ತನ್ನ ಮೂಗಿಗೆ ಮತ್ತು ಬಾಯಿಗೆ ತೆಗೆದುಕೊಂಡು ತಲೆಗೆ ಪ್ಲಾಸ್ಟಿಕ್‌ ಕವರ್‌ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಒಳ ಪ್ರವೇಶದ ಬಗ್ಗೆ ಡೈಯಾಗ್ರಾಮ್‌

ಆತ್ಮಹತ್ಯೆಗೂ ಮುನ್ನ ಮನೆ ಬಾಗಿಲಿಗೆ ಸೂಚನಾ ಫಲಕ ಅಂಟಿಸಿದ್ದ ಜೀವನ್‌, ಯಾರಾದರೂ ಏಕಾಏಕಿ ಒಳಗೆ ಬಂದರೆ ಅನಾಹುತವಾಗಬಹುದು. ಯಾವ ರೀತಿ ಮನೆ ಒಳಗೆ ಬರಬೇಕು ಎಂದು ಡೈಯಾಗ್ರಾಮ್‌ ಹಾಕಿದ್ದರು. ಮನೆ ಬಾಗಿಲು ತೆಗೆದ ಕೂಡಲೇ ಕಿಟಕಿಗಳನ್ನು ತೆರೆಯಿರಿ. ಯಾರೂ ಕೂಡ ಲೈಟ್ಸ್‌ ಆನ್‌ ಮಾಡಬೇಡಿ ಎಂದು ಬರೆದಿದ್ದ. ಅದರಂತೆ ಪೊಲೀಸರು ಮನೆ ಒಳಗಡೆ ಪ್ರವೇಶಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.