ಪತಿಯೊಂದಿಗೆ ಬಳೆ ಖರೀದಿಗೆಂದು ಹೋಗಿ ಕೈ ಕೊಟ್ಟ ಪತ್ನಿ: ಮದುವೆಯಾದ ಒಂದೇ ವಾರಕ್ಕೆ ಪ್ರಿಯಕರನೊಂದಿಗೆ ಎಸ್ಕೇಪ್
ನವವಿವಾಹಿತೆಯೊಬ್ಬಳು ಸಿನಿಮಾ ಶೈಲಿಯಲ್ಲಿ ಮದುವೆಯಾದ 7ನೇ ದಿನಕ್ಕೆ ಪತಿಯ ಎದುರೇ ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರ (ಜೂ. 23): ನವವಿವಾಹಿತೆಯೊಬ್ಬಳು ಸಿನಿಮಾ ಶೈಲಿಯಲ್ಲಿ ಮದುವೆಯಾದ 7ನೇ ದಿನಕ್ಕೆ ಪತಿಯ ಎದುರೇ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಸ್ಕಾರ್ಪಿಯೋ ಕಾರಲ್ಲಿ ಬಂದಿದ್ದ ಹೆಂಡತಿಯ ಪ್ರಿಯಕರ, ಆಕೆಯನ್ನು ಕರೆದುಕೊಂಡು ಹೋಗುವುದನ್ನು ಗಂಡ ನೋಡುತ್ತಲೇ ಇದ್ದ. ಆದರೆ ಆತನಿಗೆ ಎಲ್ಲವು ಅರ್ಥವಾಗುವಷ್ಟರಲ್ಲಿ ಹೆಂಡತಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಬೇಕಾಪುರ ಸಂತೋಷಿ ಮಾತಾ ಗಲಿ ಪೊದ್ದಾರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಇಲ್ಲಿನ ನಿವಾಸಿ ವಿವೇಕ್ ಪೊದ್ದಾರ್ ಎಂಬುವವರಿಗೆ ವಾರದ ಹಿಂದೆ ಜೂ.14ರಂದು ನೌವಾಗರ್ಹಿ ನಿವಾಸಿ ರಾಮ್ ವಿಲಾಸ್ ಎಂಬುವರ ಪುತ್ರಿ ಮೋನಿಯೊಂದಿಗೆ ವಿವಾಹವಾಗಿತ್ತು. ಮದುವೆಯಾದ 7ನೇ ದಿನವಾದ ಮಂಗಳವಾರ ಸಂಜೆ ಮಾರುಕಟ್ಟೆ ಮಧ್ಯದಿಂದ ಪ್ರಿಯಕರನೊಂದಿಗೆ ಪತ್ನಿ ಪರಾರಿಯಾಗಿದ್ದಾಳೆ. ಘಟನೆಯ ನಂತರ ಪತಿ ವಿವೇಕ್ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಕೊತ್ವಾಲಿ ಪೊಲೀಸ್ ಠಾಣೆಗೆ ಬಂದಿದ್ದಾನೆ.
ಮದುವೆ ಆಭರಣ ಧರಿಸಿ ಓಡಿ ಹೋದ ಪತ್ನಿ: ಮದುವೆಯ ನಂತರ ಜೂನ್ 16 ರಂದು ಆರತಕ್ಷತೆ ನಡೆಯಿತು ಎಂದು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ವಿವೇಕ್ ಹೇಳಿದ್ದಾರೆ. ಜೂನ್ 18 ರಂದು ಪತ್ನಿ ತನ್ನ ತಾಯಿಯ ಮನೆಗೆ ಹೋಗಿದ್ದಳು. ಅವಳು ಜೂನ್ 21 ಸೋಮವಾರದಂದು ಮರಳಿ ಬಂದಳು ಮತ್ತು ಮಂಗಳವಾರ ರಾತ್ರಿ ನನ್ನೊಂದಿಗೆ ಬಳೆಗಳನ್ನು ಖರೀದಿಸಲೆಂದು ಮಾರುಕಟ್ಟೆಗೆ ಹೋದಳು.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ನಲ್ವತ್ತೈದೇ ದಿನಕ್ಕೆ ಚಿನ್ನಾಭರಣ ಕದ್ದು ಮಾಜಿ ಪ್ರಿಯಕರನೊಂದಿಗೆ ಪತ್ನಿ ಪರಾರಿ
ನಾವು ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ದೀನದಯಾಳ್ ಚೌಕ್ನಲ್ಲಿ ಅಂಜಲಿ ಚೂರಿ ಘರ್ಗೆ (ಬಳೆ ಅಂಗಡಿ) ಹೋಗುತ್ತಿದ್ದೆವು. ಆಗ ನನ್ನ ಹೆಂಡತಿ ನನ್ನ ಕೈ ಬಿಡಿಸಿಕೊಂಡು ಮತ್ತೊಬ್ಬ ಯುವಕನ ಕೈ ಹಿಡಿದು ರಸ್ತೆಯಲ್ಲಿ ನಿಂತಿದ್ದ ಸ್ಕಾರ್ಪಿಯೋ ಮೇಲೆ ಕುಳಿತು ಹೊರಟು ಹೋದಳು. ಮದುವೆಯ ಆಭರಣಗಳನ್ನೂ ಧರಿಸಿದ್ದಳು.
ಈ ಬಗ್ಗೆ ಮಾತನಾಡಿದ ವಿವೇಕ್ ತಾಯಿ ಕಾಂಚನ್ ದೇವಿ "ನನ್ನ ಪತಿ ತೀರಿಕೊಂಡಿದ್ದಾರೆ. ನಮಗೆ ಒಬ್ಬನೇ ಹುಡುಗ. ಬಹಳ ಸಡಗರದಿಂದ ಮದುವೆಯಾದರು, ಆದರೆ ಸೊಸೆ ತಪ್ಪು ಮಾಡಿಬಿಟ್ಟಳು. ಪ್ರಿಯಕರನೊಂದಿಗೆ ಹೋಗುವ ಇರಾದೆಯಿದ್ದರೆ, ಅವಳು ಮದುವೆಯಾಗುತ್ತಿರಲಿಲ್ಲ" ಎಂದು ಹೇಳಿದ್ದಾರೆ
ಇದನ್ನೂ ಓದಿ: ಎರಡೂವರೆ ಲಕ್ಷ ಸಾಲಕ್ಕಾಗಿ ಪತ್ನಿ ಕೊಂದ ಪತಿ: ಮಗಳ ಮೇಲೂ ಹಲ್ಲೆ!
ಮತ್ತೊಂದೆಡೆ, ಕಾಂಚನ್ ದೇವಿ ಅವರ ಅರ್ಜಿಯ ಮೇರೆಗೆ ಅಪರಿಚಿತ ವ್ಯಕ್ತಿ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಎಸ್ಎಚ್ಒ ಡಿ.ಕೆ.ಪಾಂಡೆ ತಿಳಿಸಿದ್ದಾರೆ ಎಂದು ಭಾಸ್ಕರ್ ವರದಿ ಮಾಡಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.