Asianet Suvarna News Asianet Suvarna News

ಪಿಯುಸಿ ಹುಡುಗನ ಜತೆ ಗೃಹಿಣಿ ಸ್ನೇಹ ಭೀಕರ ಕೊಲೆಯಲ್ಲಿ ಅಂತ್ಯ

*  ಮಹಿಳೆಗೆ ಕತ್ತರಿಯಿಂದ ಮನಸ್ಸೋ ಇಚ್ಛೆ ಇರಿದು ಹತ್ಯೆಗೈದ ಅಪ್ರಾಪ್ತ
*  ಬೆಟ್‌ಶೀಟಲ್ಲಿ ಮೃತದೇಹ ಸುತ್ತಿ ಬೆಂಕಿ ಹಚ್ಚಿದ
*  ಮನೆಗೆ ಬೀಗ ಹಾಕಿಕೊಂಡು ಪರಾರಿ
 

Woman Murder at Bengaluru grg
Author
Bengaluru, First Published Oct 21, 2021, 7:34 AM IST

ಬೆಂಗಳೂರು(ಅ.21): ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳಿಗೆ ಕತ್ತರಿಯಿಂದ ಮನಬಂದಂತೆ ಇರಿದು ಆಕೆಯ ಅಪ್ರಾಪ್ತ ಗೆಳೆಯ ಭೀಕರವಾಗಿ ಕೊಂದಿರುವ(Murder) ಘಟನೆ ಬನಶಂಕರಿ ಸಮೀಪದ ಯಾರಬ್‌ ನಗರದಲ್ಲಿ ನಡೆದಿದೆ.

ಯಾರಬ್‌ನಗರದ 10ನೇ ಕ್ರಾಸ್‌ ನಿವಾಸಿ ಅಫ್ರಿನ್‌ ಖಾನಂ (28) ಹತ್ಯೆಗೀಡಾದ ದುರ್ದೈವಿ. ಈ ಪ್ರಕರಣ ಸಂಬಂಧ ಮೃತಳ 17 ವರ್ಷದ ಅಪ್ರಾಪ್ತ ಸ್ನೇಹಿತನನ್ನು ಪೊಲೀಸರು(Police) ವಶಕ್ಕೆ(Arrest) ಪಡೆದಿದ್ದಾರೆ.  ಸ್ನೇಹದಲ್ಲಿ ಅಫ್ರಿನ್‌ ಮನೆಗೆ ಮಂಗಳವಾರ ಗೆಳೆಯ ತೆರಳಿದ್ದ. ಆಗ ವೈಯಕ್ತಿಕ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಸಿಟ್ಟಿನ ಭರದಲ್ಲಿ ಗೆಳತಿಗೆ ಕತ್ತರಿಯಿಂದ ಇರಿದು ಹತ್ಯೆಗೈದ ಬಳಿಕ ಮೃತದೇಹವನ್ನು(Deadbody) ಬಟ್ಟೆಯಲ್ಲಿ ಸುತ್ತಿಟ್ಟು ಬೆಂಕಿ ಹಚ್ಚಿ ಆತ ಪರಾರಿಯಾಗಿದ್ದ. ಈ ಘಟನೆ ಬಗ್ಗೆ ತಿಳಿದು ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಬೆಂಕಿ ನಂದಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ(Post Mortem) ಸಾಗಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಕೆಚ್ ಹಾಕಿದ್ದು ಯಾರಿಗೋ, ಹತ್ಯೆಯಾಗಿದ್ದು ಇನ್ಯಾರೋ, 'ಅವೆಂಜರ್' ತಂದ ಅವಾಂತರವಿದು!

ಗೆಳೆಯ ತಂದ ಆಪತ್ತು

ಒಂಭತ್ತು ವರ್ಷಗಳ ಹಿಂದೆ ಲಾಲು ಖಾನ್‌ ಹಾಗೂ ಅಫ್ರಿನ್‌ ಖಾನಂ ವಿವಾಹವಾಗಿದ್ದು(Marriage), ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮನೆಯಲ್ಲೇ ಅಫ್ರಿನ್‌ ಟೈಲರಿಂಗ್‌ ಕೆಲಸ ಮಾಡುತ್ತಿದ್ದರೆ, ಗುರಪ್ಪನಪಾಳ್ಯದ ಟಿಂಬರ್‌ ಯಾರ್ಡ್‌ನಲ್ಲಿ ಲಾಲು ದುಡಿಯುತ್ತಿದ್ದ. ಹೀಗಿರುವಾಗ ಆಕೆಗೆ ವರ್ಷದಿಂದ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ(Student) ಜತೆ ಗೆಳೆತನ ಬೆಳೆದಿತ್ತು. ಕ್ರಮೇಣ ಅದೂ ಇಬ್ಬರ ನಡುವೆ ‘ಆತ್ಮೀಯ’ ಒಡನಾಟಕ್ಕೂ ತಿರುಗಿತ್ತು. ಎಂದಿನಂತೆ ಮಂಗಳವಾರ ಬೆಳಗ್ಗೆ ಪತಿ ಕೆಲಸಕ್ಕೆ ತೆರಳಿದ ಬಳಿಕ ಮನೆಯಲ್ಲೇ ಖಾನಂ ಇದ್ದಳು. ಆಗ ಮನೆಗೆ ಗೆಳೆಯನ ಆಗಮನವಾಗಿದೆ. ಆ ವೇಳೆ ಇಬ್ಬರ ನಡುವೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಮಾತಿನ ಚಕಮಕಿ ನಡೆದು ಜೋರು ಗಲಾಟೆಗೆ ತಿರುಗಿದೆ. ಈ ಹಂತದಲ್ಲಿ ವಿದ್ಯಾರ್ಥಿ, ತನ್ನ ಕೈಗೆ ಸಿಕ್ಕಿದ ಕತ್ತರಿಯಿಂದ ಮನಬಂದಂತೆ ಗೆಳತಿಗೆ ಇರಿದು ಕೊಂದಿದ್ದಾನೆ. ಸಾಕ್ಷ್ಯ ನಾಶಪಡಿಸುವ ಸಲುವಾಗಿ ಬೆಟ್‌ಶೀಟ್‌ನಲ್ಲಿ ಮೃತದೇಹವನ್ನು ಸುತ್ತಿ ಬಟ್ಟೆಗೆ ಬೆಂಕಿ ಹಚ್ಚಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದ. ಸಂಜೆ 4.30ರಲ್ಲಿ ಮೃತಳ ಮನೆಯಿಂದ ದಟ್ಟಹೊಗೆ ಬರುತ್ತಿರುವುದನ್ನು ಗಮನಿಸಿ ಅಕ್ಕಪಕ್ಕದ ಮನೆಯವರು ಸಮೀಪದಲ್ಲೇ ನೆಲೆಸಿದ್ದ ಅಫ್ರಿನಾ ಅವರ ಸಹೋದರರಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಮಾಹಿತಿ ತಿಳಿದ ಪೊಲೀಸರು, ಅಗ್ನಿಶಾಮಕ ದಳವನ್ನು ಕರೆಸಿ ಬೆಂಕಿ ನಂದಿಸಿದ್ದಾರೆ. ನಂತರ ಪರಿಶೀಲಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರ ಮಾಹಿತಿ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios