ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಹತ್ಯೆ| ಆನೇಪಾಳ್ಯದ ನಿವಾಸಿ ಶಬಾನಾ ಭಾನು ಬಂಧಿತ ಆರೋಪಿತೆ|  . ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆರೋಪಿ| ಹಣಕ್ಕಾಗಿ ಚಿಕ್ಕಮ್ಮನ ಆಭರಣ ಕಳ್ಳತನ ಸಂಚು ರೂಪಿಸಿದ್ದ ಚಾಲಾಕಿ ಮಹಿಳೆ| 

ಬೆಂಗಳೂರು(ಮಾ.10): ಇತ್ತೀಚೆಗೆ ಆನೇಪಾಳ್ಯದಲ್ಲಿ ನಡೆದಿದ್ದ ದಿಲ್ಷಾನ್‌ ಭಾನು (62) ಕೊಲೆ ಪ್ರಕರಣ ಸಂಬಂಧ ಮೃತಳ ಅಕ್ಕನ ಮಗಳನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆನೇಪಾಳ್ಯದ ನಿವಾಸಿ ಶಬಾನಾ ಭಾನು (29) ಬಂಧಿತಳಾಗಿದ್ದು, ಹಣಕ್ಕಾಗಿ ತನ್ನ ಚಿಕ್ಕಮ್ಮನ್ನು ಕೊಂದಿದ್ದಾಗಿ ಆಕೆ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಆನೇಪಾಳ್ಯದಲ್ಲಿ ಪುತ್ರನ ಕುಟುಂಬದ ಜತೆ ದಿಲ್ಷಾನ್‌ ಭಾನು ನೆಲೆಸಿದ್ದರು. ಟೆಂಪೋ ಚಾಲಕನಾಗಿರುವ ಅವರ ಮಗ, ಮಾ.4ರಂದು ತೆಂಗಿನ ಕಾಯಿ ಸಾಗಿಸಲು ಚನ್ನರಾಯನಪಟ್ಟಣ ತಾಲೂಕಿನ ಹಿರಿಸಾವೆಗೆ ತೆರಳಿದ್ದರು. ಅದೇ ದಿನ ಕೊರಟೆಗೆರೆ ತಾಲೂಕಿನಲ್ಲಿರುವ ತವರು ಮನೆಗೆ ಮೃತರ ಸೊಸೆ ಮತ್ತು ಮೊಮ್ಮಕ್ಕಳು ಹೋಗಿದ್ದರು. ಈ ಸಮಯ ನೋಡಿಕೊಂಡು ಶಬಾನಾ ಭಾನು, ಚಿಕ್ಕಮ್ಮನ ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಮನೆಗೆ ಬಂದು ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಹುಡುಗಿ ವಿಚಾರಕ್ಕೆ ಸ್ಟುಡೆಂಟ್ಸ್ ಗಲಾಟೆ? ಬಿಡಿಸಲು ಹೋದವನೆ ಕೊಲೆಯಾದ

ಆನೇಪಾಳ್ಯದ 3ನೇ ಅಡ್ಡರಸ್ತೆಯಲ್ಲಿ ಆರೋಪಿ ಕುಟುಂಬ ನೆಲೆಸಿದೆ. ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆರೋಪಿ, ಹಣಕ್ಕಾಗಿ ಚಿಕ್ಕಮ್ಮನ ಆಭರಣ ಕಳ್ಳತನ ಸಂಚು ರೂಪಿಸಿದ್ದಳು. ಅಂತೆಯೇ ಮಾ.4ರಂದು ಮನೆಯಲ್ಲಿ ಚಿಕ್ಕಮ್ಮ ಒಬ್ಬಳೇ ಇದ್ದಾಳೆ ಎಂದು ಖಚಿತಪಡಿಸಿಕೊಂಡು ಹೋಗಿ ಕೃತ್ಯ ಎಸಗಿದ್ದಾಳೆ. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೃತರ ಮನೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಶಬಾನಾ ಭಾನು ಸಂಚಾರ ಮಾಹಿತಿ ಸಿಕ್ಕಿದೆ. ಈ ಸುಳಿವು ಆಧರಿಸಿ ಪೊಲೀಸರು, ಶಂಕೆ ಮೇರೆ ಆಕೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.