ಮಗ್ಗಿ ಹೇಳದ್ದಕ್ಕೆ ಡ್ರಿಲ್ ಮಷಿನ್ನಿಂದ ಗಾಯ: ಯುಪಿಯಲ್ಲಿ ವಿದ್ಯಾರ್ಥಿಗೆ ಹೇಯ ಶಿಕ್ಷೆ
ಬಾಲಕ ಸರಿಯಾಗಿ ಮಗ್ಗಿ ಹೇಳಲು ವಿಫಲವಾಗಿದ್ದಕ್ಕೆ ಆಕ್ರೋಶಗೊಂಡ ಶಿಕ್ಷಕ, ದುರಸ್ತಿ ಕಾಮಗಾರಿಗೆ ತಂದಿದ್ದ ಡ್ರಿಲ್ಲಿಂಗ್ ಮಷಿನ್ ಅನ್ನೇ ಬಾಲಕನ ಕೈಗೆ ಇಟ್ಟು ಮಷಿನ್ ಆನ್ ಮಾಡಿದ್ದಾನೆ. ಈ ವೇಳೆ ಬಾಲಕ ಕೈ ಎಳೆದುಕೊಳ್ಳುವಷ್ಟರಲ್ಲಿ ಆತನ ಕೈಯಲ್ಲಿ ಸಣ್ಣ ರಂಧ್ರವಾಗಿದೆ.

ಕಾನ್ಪುರ: ಸರಿಯಾಗಿ ಮಗ್ಗಿ (Maths Tables) ಹೇಳಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕನೊಬ್ಬ (Teacher) 9 ವರ್ಷದ ವಿದ್ಯಾರ್ಥಿಯ (Student) ಕೈಯನ್ನು ಡ್ರಿಲ್ ಮಶಿನ್ (Drill Machine) ಬಳಸಿ ಗಾಯಗೊಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರ (Kanpur) ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಅದೃಷ್ಟವಶಾತ್ ಬಾಲಕನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಘಟನೆ ಕುರಿತು ಬಾಲಕನ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಮೇಲೆ ಹಿರಿಯ ಶಿಕ್ಷಣ ಅಧಿಕಾರಿಗಳು (Education Officers) ಶಾಲೆಗೆ ದೌಡಾಯಿಸಿದ್ದು, ಘಟನೆ ಕುರಿತು ತನಿಖೆಗೆ (Investigation) ಆದೇಶಿಸಿದ್ದಾರೆ. ಅಲ್ಲದೆ ಆರೋಪ ಸಾಬೀತಾದರೆ ಶಿಕ್ಷಕನ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.
ಏನಾಯ್ತು?:
ಕಾನ್ಪುರ ಜಿಲ್ಲೆಯ ಪ್ರೇಮನಗರದ ಖಾಸಗಿ ಶಾಲೆಯೊಂದಲ್ಲಿ 9 ವರ್ಷದ ಬಾಲಕ ಸಿಸಮೌ ಎಂಬಾತ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಕಳೆದ ಗುರುವಾರ ಶಿಕ್ಷಕ ಅನುಜ್ ಪಾಂಡೆ ಎಂಬಾತ ಶಾಲೆಯ ಗ್ರಂಥಾಲಯದಲ್ಲಿ ದುರಸ್ತಿ ಕೆಲಸ ನೋಡಿಕೊಳ್ಳುತ್ತಿದ್ದಾಗ, ಸಮೀಪದಲ್ಲೇ ಹೋಗುತ್ತಿದ್ದ ಬಾಲಕ ಸಿಸಮೌನನ್ನು ಕರೆದು ಎರಡರ ಮಗ್ಗಿ ಹೇಳುವಂತೆ ಕೇಳಿದ್ದಾನೆ.
ಇದನ್ನು ಓದಿ: ಎಚ್.ಡಿ.ಕೋಟೆ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ
ಈ ವೇಳೆ ಬಾಲಕ ಸರಿಯಾಗಿ ಮಗ್ಗಿ ಹೇಳಲು ವಿಫಲವಾಗಿದ್ದಕ್ಕೆ ಆಕ್ರೋಶಗೊಂಡ ಶಿಕ್ಷಕ, ದುರಸ್ತಿ ಕಾಮಗಾರಿಗೆ ತಂದಿದ್ದ ಡ್ರಿಲ್ಲಿಂಗ್ ಮಷಿನ್ ಅನ್ನೇ ಬಾಲಕನ ಕೈಗೆ ಇಟ್ಟು ಮಷಿನ್ ಆನ್ ಮಾಡಿದ್ದಾನೆ. ಈ ವೇಳೆ ಬಾಲಕ ಕೈ ಎಳೆದುಕೊಳ್ಳುವಷ್ಟರಲ್ಲಿ ಆತನ ಕೈಯಲ್ಲಿ ಸಣ್ಣ ರಂಧ್ರವಾಗಿದೆ. ಈ ವೇಳೆ ಸಿಸಮೌನ ಜೊತೆಗೇ ಇದ್ದ ಮತ್ತೊಬ್ಬ ಬಾಲಕ, ಡ್ರಿಲ್ ಮಷಿನ್ಗೆ ನೀಡಿದ್ದ ವಿದ್ಯುತ್ ಸಂಪರ್ಕದ ಸ್ವಿಚ್ ಆಫ್ ಮಾಡಿದ ಕಾರಣ ದೊಡ್ಡ ದುರ್ಘಟನೆ ತಪ್ಪಿದೆ.
ಇಷ್ಟೆಲ್ಲಾ ಅನಾಹುತವಾದರೂ ಬಾಲಕನಿಗೆ ಯಾವುದೇ ಚಿಕಿತ್ಸೆ ನೀಡದೆ ಮನೆಗೆ ಕಳುಹಿಸಿಕೊಡಲಾಗಿದೆ. ಶಾಲೆಯ ಉಸ್ತುವಾರಿ ಹೊತ್ತಿದ್ದ ಹಿರಿಯ ಶಿಕ್ಷಕರು ಕೂಡಾ ಈ ವಿಷಯವನ್ನು ಯಾರ ಗಮನಕ್ಕೂ ತರುವ ಕೆಲಸ ಮಾಡಿಲ್ಲ.
ಇದನ್ನೂ ಓದಿ: ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿ ಪೋಸ್ಟ್ ಹಾಕಿದ ಕರ್ನಾಟಕದ ವಿದ್ಯಾರ್ಥಿಗೆ 5 ವರ್ಷ ಜೈಲು!
ಈ ನಡುವೆ ಬಾಲಕ ಮನೆಗೆ ತೆರಳಿ ವಿಷಯ ತಿಳಿಸಿದ ಬಳಿಕ, ಪೋಷಕರು ಮತ್ತು ಸಂಬಂಧಿಕರು ಶಾಲೆಗೆ ಆಗಮಿಸಿದ ಬಳಿಕ ವಿಷಯ ಎಲ್ಲರ ಕಿವಿಗೆ ಬಿದ್ದಿದೆ. ಬಳಿಕ ಹಿರಿಯ ಶಿಕ್ಷಣ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆಗೆ ಆದೇಶಿಸಿದ್ದಾರೆ.
ಇತ್ತೀಚೆಗೆ, ಕರ್ನಾಟಕದಲ್ಲೂ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರೊಬ್ಬರು ಸ್ಟೀಲ್ ಸ್ಕೇಲ್ನಿಂದ ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿತ್ತು. ಎಚ್.ಡಿ.ಕೋಟೆ ಪಟ್ಟಣದ ಶಾಂತಿಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ ಎನ್ನಲಾಗಿದೆ. ಶಿಕ್ಷಕನಿಂದ ಹೊಡೆತ ತಿಂದ ವಿದ್ಯಾರ್ಥಿ ಕೈಗೆ ಗಂಭೀರವಾದ ಗಾಯವಾಗಿದೆ ಎಂದೂ ತಿಳಿದುಬಂದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು 8ನೇ ತರಗತಿಯ ಅಮೃತ್ ಎಂದು ತಿಳಿದುಬಂದಿದ್ದು, ಬಿಡುವಿನ ವೇಳೆಯಲ್ಲಿ ಶಾಲಾ ಕೊಠಡಿಯಲ್ಲಿ ಸೀಮೆಸುಣ್ಣ ಮುರಿದು ಅಮೃತ್ ಆಟವಾಡುತ್ತಿದ್ದ. ಈ ಹಿನ್ನೆಲೆ ಸೀಮೆಸುಣ್ಣ ಮುರಿದಿದಕ್ಕೆ ವಿದ್ಯಾರ್ಥಿಗೆ ಶಿಕ್ಷಕ ಸಿದ್ದರಾಜು ಮನಬಂದಂತೆ ಥಳಿಸಿದ್ದಾರೆ ಎಂದು ಹೇಳಲಾಗಿತ್ತು. ಈಗ ಉತ್ತರ ಪ್ರದೇಶದಲ್ಲಿ 9 ವರ್ಷದ ವಿದ್ಯಾರ್ಥಿಗೆ ಇದಕ್ಕಿಂತ ಹೇಯವಾಗಿ ಶಿಕ್ಷೆ ಕೊಡಲಾಗಿದೆ.
ಇದನ್ನೂ ಓದಿ: ತುಮಕೂರು: ತರಗತಿಯಲ್ಲಿ ಮಾತಾಡಿದಕ್ಕೆ ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿದ ಪ್ರಾಧ್ಯಾಪಕ