ಕೂಲಿ ಹಣ ಹಂಚಿಕೆ ವೇಳೆ ಜಗಳ: ಮಾರಕಾಸ್ತ್ರಗಳಿಂದ ಕೊಚ್ಚಿ ಬಾಲಕನ ಕೊಂದ ಅಪ್ರಾಪ್ತರು
ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದ ಪೊಲೀಸರು| ಗಳಿಸಿದ ಹಣ ಹಂಚಿಕೊಳ್ಳುವ ವಿಚಾರವಾಗಿ ಬಾಲಕರ ಮಧ್ಯೆ ಜಗಳ| ಸ್ನೇಹಿತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದ ಇಬ್ಬರು ಅಪ್ರಾಪ್ತರು| ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಬೆಂಗಳೂರು(ಡಿ.26): ಕೂಲಿ ಹಣ ಹಂಚಿಕೊಳ್ಳುವ ವೇಳೆ ಉಂಟಾದ ಜಗಳ ವಿಕೋಪಕ್ಕೆ ಹೋಗಿ ಬಾಲಕನೊಬ್ಬನನ್ನು ಆತನ ಸ್ನೇಹಿತರು ಕೊಂದಿರುವ ದಾರುಣ ಘಟನೆ ಮೈಸೂರು ರಸ್ತೆಯ ಪಂತರಪಾಳ್ಯ ಸಮೀಪ ಶುಕ್ರವಾರ ರಾತ್ರಿ ನಡೆದಿದೆ.
14 ವರ್ಷದ ಬಾಲಕ ಹತ್ಯೆಗೀಡಾಗಿದ್ದು, ಈ ಕೊಲೆ ಪ್ರಕರಣ ಸಂಬಂಧ ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪತಿ-ಪತ್ನಿ ಕಲಹ: ಅಳಿಯನ ಕೊಲೆಯಲ್ಲಿ ಅಂತ್ಯ
ಮೃತನ ಪಾಲಕರು ಕೂಲಿ ಕೆಲಸಗಾರರಾಗಿದ್ದು, ಪಂತರಪಾಳ್ಯದಲ್ಲಿ ನೆಲೆಸಿದ್ದಾರೆ. ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಬಾಲಕರು, ಸ್ಥಳೀಯವಾಗಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಹಣ ಸಂಪಾದಿಸುತ್ತಿದ್ದರು. ಎಂದಿನಂತೆ ಶುಕ್ರವಾರ ಸಹ ಅವರು ದುಡಿಮೆಗೆ ಹೋಗಿದ್ದರು. ಇದರಿಂದ ಗಳಿಸಿದ ಹಣವನ್ನು ಹಂಚಿಕೊಳ್ಳುವ ವಿಚಾರವಾಗಿ ಬಾಲಕರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಇಬ್ಬರು, ಮತ್ತೊಬ್ಬ ಸ್ನೇಹಿತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.