ಮದುವೆಗೆ ಬಂದವರಿಂದ ಚಿನ್ನದ ಸರ ಕಿತ್ತು ಪರಾರಿ| ಪ್ರತ್ಯೇಕ ಘಟನೆಯಲ್ಲಿ ಸರಗಳ್ಳರ ಕರಾಮತ್ತು| ಬೆಂಗಳೂರಿನ ಬನಶಂಕರಿ ಹಾಗೂ ಬಸವನಗುಡಿ ವ್ಯಾಪ್ತಿಯಲ್ಲಿ ನಡೆದ ಘಟನೆ| 

ಬೆಂಗಳೂರು(ಡಿ.09): ಉದ್ಯಾನಗಳು ಹಾಗೂ ದೇವಸ್ಥಾನಗಳ ಬಳಿಕ ಈಗ ಕಲ್ಯಾಣ ಮಂಟಪಗಳನ್ನು ಗುರಿಯಾಗಿಸಿ ಸರಗಳ್ಳರ ಕಾರ್ಯಾರಣೆ ಶುರು ಮಾಡಿದ್ದಾರೆ. ನಗರದಲ್ಲಿ ಸೋದರ ಸಂಬಂಧಿ ಮದುವೆಯಲ್ಲಿ ಪಾಲ್ಗೊಳ್ಳುವ ವೇಳೆ ಪ್ರತ್ಯೇಕವಾಗಿ ಇಬ್ಬರು ಮಹಿಳೆಯರಿಂದ ದುಷ್ಕರ್ಮಿಗಳು ಸರ ಅಪಹರಿಸಿ ಪರಾರಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬನಶಂಕರಿ ಹಾಗೂ ಬಸವನಗುಡಿ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ 6.30ರಿಂದ 7.30ರ ಅವಧಿಯಲ್ಲಿ ಕೃತ್ಯಗಳು ನಡೆದಿದ್ದು, ಇದರಲ್ಲಿ ಒಂದೇ ತಂಡ ನಡೆಸಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ವಯಸ್ಸು 25ರಿಂದ 30 ವರ್ಷ ಇರಬಹುದು ಎಂದು ಸಂತ್ರಸ್ತರು ಹೇಳಿದ್ದಾರೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಶೀಘ್ರವೇ ಬಂಧಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮತ್ತೆ ಮುಂದುವರಿದ ಸರಗಳ್ಳರ ಹಾವಳಿ ; ಸರಕ್ಕನೇ ಎಗರಿಸಿ ಪರಾರಿ

ಬಸವನಗುಡಿ ಹತ್ತಿರದ ಪೈ ವಿಶಿಷ್ಟಕನ್ವೆಷನ್‌ಹಾಲ್‌ನಲ್ಲಿ ಅಣ್ಣನ ಮಗಳ ಮದುವೆಗೆ ಸೋಮವಾರ ಬೆಳಗ್ಗೆ 6.30ರಲ್ಲಿ ರಾಜರಾಜೇಶ್ವರಿ ನಗರದ ಬಿಇಎಲ್‌ಲೇಔಟ್‌ನ ಪದ್ಮಿನಿ ಪ್ರಕಾಶ್‌ಬಂದಿದ್ದರು. ಆ ವೇಳೆ ಕಲ್ಯಾಣ ಮಂಟಪ ಬಳಿ ಕಾರಿನಿಂದಿಳಿದು ಬ್ಯಾಗ್‌ತೆಗೆದುಕೊಳ್ಳುವಾಗ ಪದ್ಮಿನಿ ಅವರಿಂದ 50 ಗ್ರಾಂ ಚಿನ್ನದ ಕದ್ದು ಬೈಕ್‌ನಲ್ಲಿ ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಇದಾದ ನಂತರ ಬನಶಂಕರಿ 2ನೇ ಹಂತದ ಧರ್ಮಗಿರಿ ಕಲ್ಯಾಣ ಮಂಟಪ ಸಮೀಪ ಬೆಳಗ್ಗೆ 7.30ರ ಸಮಯದಲ್ಲಿ ಮತ್ತೊಂದು ಘಟನೆ ನಡೆದಿದೆ. ಜೆ.ಪಿ.ನಗರದ ಗೊಟ್ಟಿಗೆರೆ ಮುಖ್ಯರಸ್ತೆಯ ಸಾರಥಿನಗರದ ಲಾವಣ್ಯ (23) ಚಿನ್ನ ಕಳೆದುಕೊಂಡವರು. ಧರ್ಮಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ಸಂಬಂಧಿಕರ ಮದುವೆಗೆ ಅವರು ಬಂದಿದ್ದರು. ಆಗ ತಮ್ಮ ಮಗಳಿಗೆ ಬಿಸ್ಕೆಟ್ಸ್‌ಖರೀದಿಗೆ ಮದುವೆ ಮಂಟಪದಿಂದ ಹೊರ ಬಂದಾಗ ದುಷ್ಕರ್ಮಿಗಳ ದಾಳಿಗೆ ತುತ್ತಾಗಿದ್ದಾರೆ. ಲಾವಣ್ಯ ಅವರ ಕುತ್ತಿಗೆ ಚಾಕುವಿನಿಂದ ಹಿಡಿದು ಬೆದರಿಸಿ 46 ಗ್ರಾಂ ಚಿನ್ನದ ಸರ ದೋಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.