*  ಚಿಂದಿ ಸಂಗ್ರಹಿಸುವ ನೆಪದಲ್ಲಿ ಬೀಗ ಹಾಕಿದ ಮನೆಗೆ ಕನ್ನ*  ಕದ್ದ ಚಿನ್ನಾಭರಣದೊಂದಿಗೆ ತವರು ರಾಜ್ಯಗಳಿಗೆ ಪರಾರಿಯಾಗಲು ಸಿದ್ಧತೆ ಮಾಡಿಕೊಂಡಿದ್ದ ಆರೋಪಿಗಳು *  ಹೊರರಾಜ್ಯದ ಕಳ್ಳರನ್ನು ಬಾಗಲಗುಂಟೆ ಠಾಣೆ ಪೊಲೀಸರು 

ಬೆಂಗಳೂರು(ಮೇ.28): ಚಿಂದಿ ಹೆಕ್ಕುವ ನೆಪದಲ್ಲಿ ಬೀಗ ಹಾಕಿದ ಮನೆ ಗುರುತಿಸಿ ಕಳವು ಮಾಡುತ್ತಿದ್ದ ಇಬ್ಬರು ಹೊರರಾಜ್ಯದ ಕಳ್ಳರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಚಿಕ್ಕಬಾಣವಾರ ನಿವಾಸಿಗಳಾದ ಸಮೀರ್‌ ಅರೋನ್‌(28) ಮತ್ತು ಮೊಹಮದ್‌ ದಿನ್‌(28) ಬಂಧಿತರು. ಇವರಿಂದ 390 ಗ್ರಾಂ ತೂಕದ ಚಿನ್ನಾಭರಣ ಮತ್ತು ಒಂದು ಆಟೋ ರಿಕ್ಷಾ ಜಪ್ತಿ ಮಾಡಲಾಗಿದೆ. ಬಾಗಲಗುಂಟೆಯ ಸಿದ್ದೇಶ್ವರಲೇಔಟ್‌ನ 2ನೇ ಮುಖ್ಯರಸ್ತೆ ನಿವಾಸಿಯೊಬ್ಬರು ಮೇ 5ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಹಿತ ದೆಹಲಿಗೆ ತೆರಳಿದ್ದರು. ಮೇ 9ರಂದು ಮನೆಗೆ ವಾಪಾಸ್‌ ಬಂದಾಗ ದುಷ್ಕರ್ಮಿಗಳು ಮನೆಯ ಬಾಗಿಲಿಗೆ ಹಾಕಿದ್ದ ಗ್ರೀನ್‌ ಡೋರ್‌ ಮುರಿದು ಮನೆ ಪ್ರವೇಶಿಸಿ ಬೆಡ್‌ ರೂಮ್‌ನ ವಾರ್ಡ್‌ ರೂಬ್‌ನಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Belagavi Crime: 50 ಕೆಜಿ ತೂಕದ 900 ಚೀಲ ರಸಗೊಬ್ಬರ ಕಳ್ಳತನ

ಪಶ್ಚಿಮ ಬಂಗಾಳ ಮೂಲದ ಸಮೀರ್‌ ಅರೋನ್‌ ಹಾಗೂ ದೆಹಲಿ ಮೂಲದ ಮೊಹಮದ್‌ ಕಳೆದ ಆರು ವರ್ಷಗಳಿಂದ ಚಿಕ್ಕಬಾಣವಾರದಲ್ಲಿ ನೆಲೆಸಿದ್ದರು. ಬಾಗಲಗುಂಟೆ ಪ್ರದೇಶದಲ್ಲಿ ರಸ್ತೆ ಬದಿ ಚಿಂದಿ ಆಯ್ದು ಬಳಿಕ ಗುಜರಿಗೆ ಹಾಕಿ ಬಂದ ಹಣದಲ್ಲಿ ಜೀವನ ದೂಡುತ್ತಿದ್ದರು. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಚಿಂದಿ ಸಂಗ್ರಹಿಸುವ ವೇಳೆ ಸಿದ್ದೇಶ್ವರ ಲೇಔಟ್‌ನಲ್ಲಿ ಬೀಗ ಹಾಕಿದ ಮನೆ ಗುರುತಿಸಿ ರಾತ್ರಿ ಕಳವು ಮಾಡಿದ್ದರು.

ಆರೋಪಿಗಳು ಕದ್ದ ಚಿನ್ನಾಭರಣದೊಂದಿಗೆ ತವರು ರಾಜ್ಯಗಳಿಗೆ ಪರಾರಿಯಾಗಲು ಸಿದ್ಧತೆ ಮಾಡಿಕೊಂಡಿದ್ದರು. ಅಷ್ಟರಲ್ಲಿ ಜಾಡು ಹಿಡಿದು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಬಂಧನದಿಂದ ಬಾಗಲಗುಂಟೆ ಠಾಣೆಯಲ್ಲಿ ದಾಖಲಾಗಿದ್ದ ಒಂದು ಮನೆಗಳವು ಹಾಗೂ ಒಂದು ಆಟೋ ರಿಕ್ಷಾ ಕಳವು ಪ್ರಕರಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.