ಅಕ್ರಮ ಸಂಬಂಧದಲ್ಲಿ ಹುಟ್ಟಿದ ಮಗು ಮಾರಾಟಕ್ಕೆ ಯತ್ನ
* ಮಗು ಕಾಣದೆ ತಾಯಿ ಕಂಗಾಲು
* ಮಗುವಿನ ತಂದೆ ಪತ್ತೆಗೆ ಪೊಲೀಸರ ಹುಡುಕಾಟ
* ಪೊಲೀಸರ ವಿಚಾರಣೆ ವೇಳೆ ಮಗು ಮಾರಾಟ ಕೃತ್ಯ ಬಯಲು
ಬೆಂಗಳೂರು(ಆ.19): ಅಕ್ರಮ ಸಂಬಂಧದಲ್ಲಿ ಜನಿಸಿದ ಎಂಬ ಕಾರಣಕ್ಕೆ 38 ದಿನಗಳ ಮಗುವನ್ನು 1.3 ಲಕ್ಷಕ್ಕೆ ಮಾರಲು ಯತ್ನಿಸಿದ್ದ ಮೂವರನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ಆಡುಗೋಡಿಯ ನಿವಾಸಿ ತರನಂ ಬಾನು (38), ನಿಶಾತ್ ಕೌಶರ್ (45) ಹಾಗೂ ಎಚ್ಬಿಆರ್ ಲೇಔಟ್ನ ಕೆ.ಸವೋದ್ ಬಂಧಿತರಾಗಿದ್ದು, ಆರೋಪಿಗಳಿಂದ 50 ಸಾವಿರ ಹಣ ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಮಗುವಿನ ತಂದೆ ಆರೋಪಿ ಮುಬಾರಕ್ ಪಾಷ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ವಿಲ್ಸನ್ ಗಾರ್ಡನ್ ಸಮೀಪದ ಖಾಸಗಿ ಆಸ್ಪತ್ರೆ ಮುಂದೆ ಹಣದ ವಿಚಾರವಾಗಿ ಆರೋಪಿಗಳು ಪರಸ್ಪರ ಜೋರಾಗಿ ಜಗಳ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಬ್ ಇನ್ಸ್ಪೆಕ್ಟರ್ ಪ್ರಿಯದರ್ಶಿನಿ ನೇತೃತ್ವದ ತಂಡವು, ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದು ವಿಚಾರಣೆಗೆ ಒಳಪಡಿಸಿದಾಗ ಮಗು ಮಾರಾಟ ಕೃತ್ಯ ಬಯಲಾಗಿದೆ.
ಸಮಾಜ ಸೇವಕಿ ಎಂದು ಬಿಂಬಿಸಿಕೊಂಡಿರುವ ತರನಂ ಬಾನು ಮನೆಯಲ್ಲಿ ಶಿರೀನ್ ಕೆಲಸ ಮಾಡುತ್ತಿದ್ದಳು. ಹಲವು ವರ್ಷಗಳಿಂದ ಆಕೆಗೆ ಆಟೋ ಚಾಲಕ ಮುಬಾರಕ್ ಪಾಷಾ ಜತೆಗೆ ಅನೈತಿಕ ಸಂಬಂಧ ಇತ್ತು. ಈ ಸಂಬಂಧದಿಂದ ಆಕೆ ಗರ್ಭವತಿಯಾಗಿದ್ದಳು. 38 ದಿನಗಳ ಹಿಂದೆ ಗಂಡು ಮಗುವಿಗೆ ಆಕೆ ಜನ್ಮ ನೀಡಿದ್ದಳು. ಈ ವಿಚಾರ ತಿಳಿದ ತರನಂ, ತನ್ನ ಮನೆ ಕೆಲಸದವಳ ಮಗುವನ್ನು ಕಳವು ಮಾಡಿಸಿ ಸಂಬಂಧಿಕನಿಗೆ ಮಾರಾಟ ಮಾಡಲು ಸಂಚು ರೂಪಿಸಿದ್ದಳು. ಇದಕ್ಕೆ ಮಗುವಿನ ತಂದೆ ಮುಬಾರಕ್ ನೆರವಾದ. ತರನಂ ಸಂಬಂಧಿ ನಿಶಾತ್ ಮೈದುನ ಕೆ. ಸವೋದ್ಗೆ ವಿವಾಹವಾಗಿ 15 ವರ್ಷ ಕಳೆದರೂ ಸಂತಾನವಿರಲಿಲ್ಲ. ಹೀಗಾಗಿ ಮಗುವನ್ನು ದತ್ತು ಪಡೆಯಲು ಸವೋದ್ ಯೋಚಿಸಿದ್ದರು. ಈ ವಿಚಾರ ಗೊತ್ತಿದ್ದ ತರುನಂ, ತನ್ನ ಮನೆ ಕೆಲಸ ದಾಳು ಶಿರೀನ್ಳ ಮಗುವನ್ನು ಸವೂದ್ಗೆ ಮಾರಾಟ ಮಾಡಿ ಸುಲಭವಾಗಿ ಹಣ ಸಂಪಾದಿಸಬಹುದು ಎಂದು ದುರಾಲೋಚನೆ ಮಾಡಿದ್ದಳು.
ಹಾವೇರಿ: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ, ವ್ಯಕ್ತಿಯ ಬರ್ಬರ ಕೊಲೆ
ಮುಬಾರಕ್ಗೆ ಹಣದ ಆಮೀಷವೊಡ್ಡಿ ನೆರವು ಪಡೆದ ಆಕೆ, ತನಗೆ 50 ಸಾವಿರ ನೀಡುವಂತೆ ಮುಬಾರಕ್ ಹೇಳಿದ್ದ. ತರುವಾಯ ಸವೋದ್ಗೆ 1.30 ಲಕ್ಷ ಕೊಟ್ಟರೆ ಮಗುವನ್ನು ಕೊಡಿಸುವುದಾಗಿ ಆಕೆ ವ್ಯವಹರಿಸಿದ್ದಳು. ಅಂತೆಯೇ ಆ.11ರಂದು ಗೆಳತಿಗೆ ಗೊತ್ತಾಗದಂತೆ ಮುಬಾರಕ್ ಮಗುವನ್ನು ಕಳವು ಮಾಡಿ ತರನಂಗೆ ತಲುಪಿಸಿದ್ದ. ಬಳಿಕ ಮಗುವನ್ನು ಸವೋದ್ಗೆ ತಲುಪಿಸಲಾಗಿತ್ತು. ಪಾಲು ಸಿಗದೆ ತಂದೆ ಜಗಳ ಕ್ವೀನ್ಸ್ ರಸ್ತೆಯ ಕಚೇರಿಯಲ್ಲಿ ಸವೋದ್ನಿಂದ ಮುಂಗಡವಾಗಿ 50 ಸಾವಿರ ಅನ್ನು ತರನಂ ಪಡೆದಿದ್ದಳು. ಆದರೆ, ಆ ಹಣದಲ್ಲಿ ಮುಬಾರಕ್ಗೆ ಪಾಲು ಕೊಟ್ಟಿರಲಿಲ್ಲ. ಈ ಹಣದ ವಿಚಾರ ಗೊತ್ತಾಗಿ ಕೆರಳಿದ ಆತ, ಮಾತುಕತೆ ನಡೆಸುವ ಸಲುವಾಗಿ ಆ.16ರಂದು ವಿಲ್ಸನ್ ಗಾರ್ಡನ್ನ ಅಗಡಿ ಆಸ್ಪತ್ರೆ ಬಳಿ ಬರುವಂತೆ ಆಕೆಗೆ ಸಸೂಚಿಸಿದ್ದ. ಆಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕೊನೆಗೆ ಈ ಜಗಳವು ಮಗು ರಕ್ಷಣೆಗೂ ದಾರಿ ಮಾಡಿಕೊಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಮಗು ಕಾಣದೆ ತಾಯಿ ಕಂಗಾಲು
ತನ್ನ ಮಗು ಕಾಣದೆ ಹೋದಾಗ ಕಂಗಾಲಾದ ಶಿರೀನ್, ಮಗು ನೆನೆದು ಗೆಳೆಯ ಮುಬಾರಕ್ ಹಾಗೂ ಮನೆಯೊಡೆತಿ ತರನಂ ಬಳಿ ಕಣ್ಣೀರಿಟ್ಟಿದ್ದಳು. ತನಗೇನು ಮಗು ವಿಚಾರ ಗೊತ್ತಿಲ್ಲ ಎಂದು ಮುಬಾರಕ್ ಹೇಳಿದ್ದ ಎನ್ನಲಾಗಿದೆ.