ಬಾಲಕಿಯರು ಸೆಹೋರ್ ಜಿಲ್ಲೆಯ ಅಷ್ಟಾ ಪಟ್ಟಣದಲ್ಲಿರುವ ತಮ್ಮ ಶಾಲೆಯ ತರಗತಿಯನ್ನು ಬಂಕ್ ಮಾಡಿ 100 ಕಿ.ಮೀ ದೂರದಲ್ಲಿರುವ ಇಂದೋರ್‌ಗೆ ಬಸ್‌ನಲ್ಲಿ ಮೃತ ಬಾಲಕಿಯೊಬ್ಬರ ಬಾಯ್‌ ಫ್ರೆಂಡ್‌ ಅನ್ನು ಭೇಟಿಯಾಗಲು ತೆರಳಿದ ನಂತರ ಶುಕ್ರವಾರ ವಿಷ ಸೇವಿಸಿದ್ದಾರೆ. 

ಮಧ್ಯಪ್ರದೇಶದ (Madhya Pradesh) ಇಂದೋರ್ (Indore) ಜಿಲ್ಲೆಯಲ್ಲಿ ಶಾಲೆಯಲ್ಲಿ (School) ಓದುತ್ತಿದ್ದ ಇಬ್ಬರು 16 ವರ್ಷದ ಬಾಲಕಿಯರು (Girls) ವಿವಿಧ ಕಾರಣಗಳಿಗಾಗಿ ಒಟ್ಟಿಗೆ ವಿಷ (Poison) ಸೇವಿಸಿದ ನಂತರ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇನ್ನು, ಇವರ ಜತೆಗೆ ವಿಷ ಸೇವಿಸಿದ ಮತ್ತೊಬ್ಬಳು ಸಹಪಾಠಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಬಾಲಕಿಯರು ಸೆಹೋರ್ (Sehore) ಜಿಲ್ಲೆಯ ಅಷ್ಟಾ (Ashta) ಪಟ್ಟಣದಲ್ಲಿರುವ ತಮ್ಮ ಶಾಲೆಯ ತರಗತಿಯನ್ನು ಬಂಕ್ ಮಾಡಿ 100 ಕಿ.ಮೀ ದೂರದಲ್ಲಿರುವ ಇಂದೋರ್‌ಗೆ ಬಸ್‌ನಲ್ಲಿ ಮೃತ ಬಾಲಕಿಯೊಬ್ಬರ ಬಾಯ್‌ ಫ್ರೆಂಡ್‌ (Boy Friend) ಅನ್ನು ಭೇಟಿಯಾಗಲು ತೆರಳಿದ ನಂತರ ಶುಕ್ರವಾರ ಈ ಘಟನೆ ನಡೆದಿದೆ. ಆ ಗೆಳೆಯ ಬಾಲಕಿಯ ಫೋನ್‌ ಕಾಲ್‌ಗೆ ಉತ್ತರಿಸುತ್ತಿರಲಿಲ್ಲ ಎಂಬ ಹಿನ್ನೆಲೆ ಅವನನ್ನು ಭೇಟಿ ಮಾಡಲು ಮೂವರು ಬಾಲಕಿಯರು ಒಟ್ಟಿಗೆ ತೆರಳಿದ್ದಾರೆ. 

ಇನ್ನು, ವಿಷ ಸೇವಿಸಿದ ಮೂವರು ಬಾಲಕಿಯರ ಪೈಕಿ ಇಬ್ಬರು ಮೃತಪಟ್ಟಿದ್ದರೆ, ಎಂ.ವೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತೊಬ್ಬ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಚೌಬೆ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. “ಪ್ರಾಥಮಿಕ ತನಿಖೆಯಿಂದ ಮತ್ತು ಬದುಕುಳಿದ ಹುಡುಗಿಯ ಹೇಳಿಕೆಯಿಂದ, ಮೂವರು ಸೆಹೋರ್‌ನ ಅಷ್ಟಾ ಪಟ್ಟಣದ ಒಂದೇ ಶಾಲೆಯಲ್ಲಿ ಓದುತ್ತಿದ್ದರು ಮತ್ತು ತುಂಬಾ ಆತ್ಮೀಯರಾಗಿದ್ದರು ಎಂದು ತಿಳಿದುಬಂದಿದೆ. ಶುಕ್ರವಾರ ಬೆಳಗ್ಗೆ ಇಂದೋರ್‌ಗೆ ಬಸ್ ಹಿಡಿಯಲು ಅವರು ತಮ್ಮ ತರಗತಿಯನ್ನು ತೊರೆದಿದ್ದರು’’ ಎಂದೂ ಪ್ರಶಾಂತ್ ಚೌಬೆ ಹೇಳಿದ್ದಾರೆ. 

ಒಬ್ಬ ಬಾಲಕಿಯ ಗೆಳೆಯ ಅಲ್ಲಿ ವಾಸಿಸುತ್ತಿದ್ದರಿಂದ ಆತನನ್ನು ಭೇಟಿ ಮಾಡಲು ಇಂದೋರ್‌ಗೆ ಹೋಗಿದ್ದರು. ಅವನು ತನ್ನ ಕರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರಿಂದ ಅವಳು ಅವನನ್ನು ಭೇಟಿಯಾಗಲು ಬಯಸಿದ್ದಳು. ಆದ್ದರಿಂದ, ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಇಂದೋರ್‌ಗೆ ಹೋಗಲು ನಿರ್ಧರಿಸಿದ್ದಳು ಎಂದೂ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಹೇಳಿದ್ದಾರೆ.

ಅಲ್ಲದೆ, ಬಾಯ್ ಫ್ರೆಂಡ್ ಭೇಟಿಯಾಗದಿದ್ದರೆ ಇಬ್ಬರು ಗೆಳೆಯರ ಜೊತೆ ಸೇರಿ ಜೀವನ ಅಂತ್ಯ ಮಾಡಿಕೊಳ್ಳಲು ಸಹ ಆಕೆ ನಿರ್ಧರಿಸಿದ್ದಳು.. ಮೂವರು ಅಷ್ಟಾದ ಅಂಗಡಿಯಿಂದ ವಿಷವನ್ನು ತೆಗೆದುಕೊಡಿದ್ದರು ಮತ್ತು ಅವರಲ್ಲಿ ಒಬ್ಬರು ಇಂದೋರ್ ತಲುಪಿದ ನಂತರ ಹುಡುಗನನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಬಳಿಕ, ಮೂವರು ಬಾಲಕಿಯರು ಭಾವರ್ಕುವಾನ್ ಪ್ರದೇಶದ ಬಳಿಯ ಉದ್ಯಾನವನದಲ್ಲಿ ಬಾಯ್‌ ಫ್ರೆಂಡ್‌ಗಾಗಿ ಕಾಯುತ್ತಿದ್ದರು, ಆದರೆ ಅವನು ಹಿಂತಿರುಗದ ಕಾರಣ, ಮನನೊಂದ ಹುಡುಗಿ ವಿಷ ಸೇವಿಸಿದ್ದಾಳೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಚೌಬೆ ಹೇಳಿದರು.

ಇದಾದ ಕೂಡಲೇ ಆಕೆಯ ಸ್ನೇಹಿತರೊಬ್ಬರು ವಿಷ ಸೇವಿಸಿ ಬದುಕುಳಿದಿರುವ ಬಾಲಕಿಗೆ ತನ್ನ ಕುಟುಂಬದಲ್ಲಿ ಗಂಭೀರ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದ್ದಾಳೆ. ಕೊನೆಯ ಹುಡುಗಿ ತನ್ನ ಇಬ್ಬರು ಸ್ನೇಹಿತರಿಗೆ ತುಂಬಾ ಹತ್ತಿರವಾಗಿದ್ದ ಕಾರಣ ಅವಳೂ ವಿಷ ತೆಗೆದುಕೊಂಡಳು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಕೊನೆಯದಾಗಿ ವಿಷ ತೆಗೆದುಕೊಂಡ ಬಾಲಕಿ ಬದುಕುಳಿದಿದ್ದಾಳೆ ಎಂದೂ ಅವರು ಹೇಳಿದ್ದಾರೆ. 

ಸುತ್ತಮುತ್ತಲಿನ ಜನರು ಬಾಲಕಿಯರನ್ನು ಗಮನಿಸಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಎಂ.ವೈ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದೂ ಪ್ರಶಾಂತ್‌ ಚೌಬೆ ಹೇಳಿದರು. ''ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಬಾಲಕಿಯರಿಂದ ಯಾವುದೇ ಪತ್ರ ಪತ್ತೆಯಾಗಿಲ್ಲ. ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ಹೇಳಿಕೆಯ ಮೇಲೆ ನಾವು ಅವಲಂಬಿತರಾಗಿದ್ದೇವೆ, ಇದು ನಮ್ಮ ತನಿಖೆಯ ಆಧಾರವಾಗಿದೆ ಎಂದು ಅವರು ಹೇಳಿದರು. ಸದ್ಯ, ಬಾಲಕಿಯರ ಪೋಷಕರು ಇಂದೋರ್ ತಲುಪಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದೂ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಚೌಬೆ ತಿಳಿಸಿದ್ದಾರೆ.