*  ಲಾಕ್‌ಡೌನ್‌ನಿಂದ 15 ಲಕ್ಷ ಸಾಲ*  ಈತನ ಗೆಳೆಯರಿಬ್ಬರಿಗೂ ಆರ್ಥಿಕ ಸಂಕಷ್ಟ*  ಇಂದಿರಾ ನಗರದ ಚಿನ್ನದಂಗಡಿಗೆ ದೋಚಿ ಪರಾರಿ 

ಬೆಂಗಳೂರು(ಅ.22): ಕೊರೋನಾ(Coronavirus) ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ ಹೋಟೆಲ್‌ ಮಾಲೀಕನೊಬ್ಬ, ಯೂಟ್ಯೂಬ್‌ನಲ್ಲಿ(YouTube) ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ಮಾಡುವುದನ್ನು ಕಲಿತು ತನ್ನ ಸಹಚರರ ಜತೆ ಕನ್ನ ಹಾಕಿ ಈಗ ಪರಪ್ಪನ ಅಗ್ರಹಾರ ಕಾರಾಗೃಹ(Jail) ಸೇರಿದ್ದಾನೆ.

Add Asianetnews Kannada as a Preferred SourcegooglePreferred

ಆಡುಗೋಡಿ ಸಮೀಪದ ನಿವಾಸಿ ಮಹೇಂದ್ರ, ಜೆ.ಬಿ.ನಗರದ ಸ್ಯಾಮ್‌ ಸನ್‌ ಹಾಗೂ ನೀಲಕಂಠ ಬಂಧಿತರಾಗಿದ್ದು(Arrest), ಆರೋಪಿಗಳಿಂದ 60 ಲಕ್ಷ ಮೌಲ್ಯದ 1.315 ಗ್ರಾಂ ಚಿನ್ನಾಭರಣ(Gold) ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಇಂದಿರಾನಗರದ ಸಿಎಂಎಚ್‌ ರಸ್ತೆಯ ಮೀನಾ ಜ್ಯುವೆಲರಿ ಮಳಿಗೆಗೆ ಮಹೇಂದ್ರ ತಂಡ ಕನ್ನ ಹಾಕಿತ್ತು. ಈ ಕೃತ್ಯ ತನಿಖೆ ಕೈಗೆತ್ತಿಕೊಂಡ ಇಂದಿರಾ ನಗರ ಪೊಲೀಸರು(Police), ಕೃತ್ಯಕ್ಕೆ ಬಳಸಿದ್ದ ಕಾರಿನ ನೋಂದಣಿ ಸಂಖ್ಯೆ ಹಾಗೂ ಸಿಸಿಟಿವಿ ಕ್ಯಾಮೆರಾ(CCTV Camera) ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು(Accused) ಪತ್ತೆ ಹಚ್ಚಿದ್ದಾರೆ.

15 ಲಕ್ಷ ಸಾಲಕ್ಕೆ ಚಿನ್ನ ದೋಚಿದರು:

ಕುಂದಾಪುರ(Kundapur) ತಾಲೂಕಿನ ಮಹೇಂದ್ರ, ಹಲವು ವರ್ಷಗಳ ಹಿಂದೆ ಉದ್ಯೋಗ(Job) ಅರಸಿ ನಗರಕ್ಕೆ ಬಂದಿದ್ದ. ಬಳಿಕ ಜೆ.ಬಿ.ನಗರ ಸಮೀಪ ರಸ್ತೆ ಬದಿ ಪುಟ್ಟ ಹೋಟೆಲ್‌ ತೆರೆದು ಆತ, ಎಗ್‌ ರೈಸ್‌ ಮಾರಾಟ ಮಾಡುತ್ತಿದ್ದ. ಆ ವೇಳೆ ಆತನಿಗೆ ಖಾಸಗಿ ಕಂಪನಿ ಉದ್ಯೋಗಿ ಸ್ಯಾಮ್‌ಸನ್‌ ಹಾಗೂ ಮರಳು ವ್ಯಾಪಾರಿ ನೀಲಕಂಠನ ಪರಿಚಯವಾಗಿದೆ. ತರುವಾಯ ರಸ್ತೆ ಬದಿ ಬಿಟ್ಟು ಎಚ್‌ಎಸ್‌ಆರ್‌ ಲೇಟ್‌ನಲ್ಲಿ ಹೊಸದಾಗಿ ಹೋಟೆಲ್‌ಅನ್ನು ಮಹೇಂದ್ರ ಆರಂಭಿಸಿದ್ದ. ಅದೇ ಹೊತ್ತಿಗೆ ಕೊರೋನಾ ಸೋಂಕಿನ ಹಾವಳಿ ಶುರುವಾದ ಪರಿಣಾಮ ಆತನಿಗೆ ಆರ್ಥಿಕ ಸಂಕಷ್ಟ ತಂದಿತು. ಇದರಿಂದ ಸುಮಾರು .15 ಲಕ್ಷ ಸಾಲ(Loan) ಮಾಡಿಕೊಂಡು ಮಹೇಂದ್ರನಿಗೆ ಪರದಾಡುವಂತಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಸರ್ಕಾರಿ ಬಸ್‌ ಎಗರಿಸಿ ಡೀಸೆಲ್‌ ಖಾಲಿಯಾದ ಬಳಿಕ ಬಿಟ್ಟೋದರು!

ತನ್ನ ಕಷ್ಟವನ್ನು ಗೆಳೆಯರಾದ ಸ್ಯಾಮ್‌ಸನ್‌ ಹಾಗೂ ನೀಲಕಂಠನ ಬಳಿ ಆತ ಹೇಳಿಕೊಂಡಿದ್ದ. ಇನ್ನು ಲಾಕ್‌ಡೌನ್‌ನಿಂದ(Lockdown) ವಹಿವಾಟಿಲ್ಲದೆ ಆತನ ಗೆಳೆಯರಿಗೆ ತೊಂದರೆಯಾಗಿತ್ತು. ಈ ಮೂವರು ಸ್ನೇಹಿತರು, ತಮ್ಮ ಆರ್ಥಿಕ ಸಮಸ್ಯೆ ನಿವಾರಣೆಗೆ ಚಿನ್ನಾಭರಣ ಮಳಿಗೆಗೆ ಕನ್ನ ಹಾಕಲು ಯೋಜಿಸಿದ್ದರು. ಅಂತೆಯೇ ಇಂದಿರಾ ನಗರ ವ್ಯಾಪ್ತಿಯಲ್ಲಿ ಹುಡುಕಾಡಿದ್ದರು. ಆಗ ಸಿಎಂಎಚ್‌ ರಸ್ತೆಯ ಮೀನಾ ಜ್ಯುವೆಲರಿ ಮಳಿಗೆ(Jewellery Shop) ಕಣ್ಣಿಗೆ ಬಿದ್ದಿತ್ತು. ಆಗ ಕಳ್ಳತನಕ್ಕೆ ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ನೋಡಿ ಅವರು ಸಿದ್ಧತೆ ಮಾಡಿಕೊಂಡಿದ್ದರು.

ಮಳೆ ಬರುತ್ತಿದ್ದಾಗ ಜನರ ಸಂಚಾರ ಕಡಿಮೆ ಇರುತ್ತದೆ ಲೆಕ್ಕ ಹಾಕಿದ ಆರೋಪಿಗಳು, ಆ.18ರಂದು ರಾತ್ರಿ ಮಳಿಗೆಗೆ ಕನ್ನ(Theft) ಹಾಕಿದ್ದರು. ಅಂದೇ ಆಭರಣ ಮಳಿಗೆಗೆ ಭೇಟಿ ಕೊಟ್ಟು ಅಲ್ಲಿನ ಭದ್ರತೆ ಕುರಿತು ಮಾಹಿತಿ ಸಂಗ್ರಹಿಸಿದ ಅವರು, ಸೆನ್ಸರ್‌, ಸಿಸಿ ಕ್ಯಾಮರಾ ಮತ್ತು ಅಲಾರಂ ಇರಲಿಲ್ಲ ಎಂಬುದು ಖಚಿತಪಡಿಸಿಕೊಂಡು ಕೃತ್ಯ ಎಸಗಿದ್ದರು. ಈ ಕೃತ್ಯಕ್ಕೆ ತಮ್ಮ ಸ್ನೇಹಿತನ ಕಾರನ್ನು ಅವರು ಬಳಸಿಕೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಕದ್ದ ಚಿನ್ನ ಗೋವಾದಲ್ಲಿ ಮಾರಲಾಗದೆ ವಾಪಸ್‌

ಕೃತ್ಯ ಎಸಗಿದ ಬಳಿಕ ಆರೋಪಿಗಳು, ಮೋಜು ಮಾಡಲು ಗೋವಾಕ್ಕೆ(Goa) ತೆರಳಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಕಾರಿನ ನೋಂದಣಿ ಸಂಖ್ಯೆ ಪತ್ತೆಯಾಗಿದೆ. ಆದರೆ ಗೋವಾದಲ್ಲಿ ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಲು ಆರೋಪಿಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ ಅಲ್ಲಿಂದ ಮತ್ತೆ ಬೆಂಗಳೂರಿಗೆ ಮರಳುವಾಗ ತುಮಕೂರಿನ ಕ್ಯಾತಸಂದ್ರ ಬಳಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.